ಅಭಾಸಾಪದಿಂದ “ಅಷ್ಟಾವಧಾನವೆಂಬ ವಿಶಿಷ್ಟ ಕಾವ್ಯಾರಾಧನೆ”

Must Read
   ಭಾರತವು ಪುರಾತನ ಹಾಗು ಪ್ರಾಚೀನ ಕಲೆಗಳ ನೆಲೆಬೀಡು. ಕಲೆ, ಸಾಹಿತ್ಯ, ಸಂಗೀತ ಎಲ್ಲದರಲ್ಲು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದ್ದು , ಇಂದಿಗೂ ಕೂಡ ಶ್ರೀಮಂತ ಕಲೆಗಳ ನೆಲೆಯಾಗಿದೆ. ಈ ಕಲೆಗಳಲ್ಲಿ, ಅಷ್ಟಾವಧಾನ ಕಲೆಯು ಅತ್ಯಂತ ಚಮತ್ಕಾರ ಸೃಷ್ಟಿ ಮಾಡುವ ಕಲೆ.

ಅಷ್ಟಾವಧಾನವೆಂದರೆ ಎಂಟು ಬಗೆಯ ಕಲ್ಪಿತ ಪ್ರಶ್ನೆಗಳಿಗೆ ಏಕಕಾಲದಲ್ಲಿ ಮನಸ್ಸು ಹರಿಸಿ ಉತ್ತರಿಸುವ ಕಾವ್ಯಮಯ ಪ್ರತಿಭೆಯ ಪ್ರದರ್ಶನ. ಇದು ಪ್ರತಿಭೆಯ ಪರಾಕಾಷ್ಠೆಯಲ್ಲದೆ ಕವಿತ್ವ, ಸ್ಮರಣೆ, ಚಾತುರ್ಯ ಮತ್ತು ಶ್ರದ್ಧೆಯ ಸಮನ್ವಯದ ಪ್ರದರ್ಶನವಾಗಿದೆ. ಪ್ರಾಚೀನ ಕಾಲದಿಂದಲು ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ವೈಶಿಷ್ಟ್ಯಮಯವಾದ ಕಲೆಯಾಗಿರುವ ಇದು, ಹೆಚ್ಚು ಬೆಳಕಿಗೆ ಬಾರದೆ ಕ್ಷೀಣಿಸುತ್ತಿತ್ತು. ಆದರೆ ಶತಾವಧಾನಿ ಡಾ. ರಾ. ಗಣೇಶ್ ಅವರ ಮುಖಾಂತರ ವಿಶ್ವದೆಲ್ಲೆಡೆ ಪ್ರಚಾರಕ್ಕೆ ಅತ್ಯಂತ ದೊಡ್ಡ ಮಟ್ಟದಲ್ಲಿ ಬಂದು ಇಂದಿಗೆ ಜೀವಂತ ಕಲೆಯಾಗಿ ಪಸರಿಸುತ್ತಿದೆ. ಈ ಕಲೆಯ ಪೋಷಣೆ ಮತ್ತು ಬೆಳವಣಿಗೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು , ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಉತ್ತರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ವತಿಯಿಂದ ದಿನಾಂಕ ಇತ್ತೀಚೆಗೆ ಅಷ್ಟಾವಧಾನ ಕಾರ್ಯಕ್ರಮವನ್ನು ರಾಜಾಜಿನಗರದ ಶ್ರೀ ಆರೊಬಿಂದೋ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಅಷ್ಟಾವಧಾನಿಯಾಗಿ ಡಾ. ರಾಮಕೃಷ್ಣ ಪೆಜತ್ತಾಯರು ; ಪ್ರಚ್ಛಕರಾಗಿ ನಿಷೇಧಾಕ್ಷರಿಯಲ್ಲಿ ಭ.ರಾ. ವಿಜಯಕುಮಾರ್, ಸಮಸ್ಯಾ ಪೂರ್ಣದಲ್ಲಿ ಸಚಿನ್ ಮುಂಗಿಲ, ದತ್ತಪದಿಯಲ್ಲಿ ಜ್ಯೋತಿ ಪ್ರಸಾದ್, ಗುಣಿತಾಕ್ಷರಿಯಲ್ಲಿ ಮೃತ್ಯುಂಜಯ ತೇಜಸ್ವಿ, ಸಂಖ್ಯಾ ಬಂಧದಲ್ಲಿ ಮಹೇಶ್ ರಾವ್, ಅಪ್ರಸ್ತುತ ಪ್ರಸಂಗದಲ್ಲಿ ತಿಮ್ಮಣ್ಣ ಭಟ್, ಆಶುಕವಿತ್ವದಲ್ಲಿ ಅವಿನಾಶ್ ಪೆರ್ಮುಖ ಮತ್ತು ಕಾವ್ಯವಾಚನದಲ್ಲಿ ಸುಮಾ ಟಿ ಜೆ ಇದ್ದರು .

   ಈ ಬಾರಿ ಇನ್ನೊಬ್ಬರುಅವಧಾನಿಗಳು ಶ್ರೀ ಸೂರ್ಯ ಹೆಬ್ಬಾರರೂ ಒಂಭತ್ತನೆಯ ಪೃಚ್ಛಕರಾಗಿ ಅವಧಾನಿಗಳನ್ನು ಸೇರಿ ಅತ್ಯಂತ ಸುಂದರವಾಗಿ ಅಂತ್ಯಾಕ್ಷರಿ ಯನ್ನು ನಡೆಸಿಕೊಟ್ಟಿದ್ದು ಕಾರ್ಯಕ್ರಮದ ಹಿರಿಮೆ ಹೆಚ್ಚಿ ಅಂದು ನವಾವಧಾನವಾದಂತಾಯ್ತು .

ಕಗ್ಗದ ಭಟ್ಟರೆಂದೇ ಖ್ಯಾತಿಪಡೆದಿರುವ ಶ್ರೀ ಲಕ್ಷ್ಮೀನಾರಾಯಣಭಟ್ಟರು,ಅಂತರಾಷ್ಟ್ತೀಯ ಪ್ರಶಸ್ತಿ ವಿಜೇತ ಕೂರ್ಮಾವತಾರ ಚಿತ್ರದಲ್ಲಿ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿವಿಜೇತರೂ,ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿಗಳು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರದ ಅಧ್ಯಕ್ಷರಾಗಿರುವ ಎಂ. ಎಸ್. ನರಸಿಂಹಮೂರ್ತಿಯವರ ಉಪಸ್ಥಿತಿಯಲ್ಲಿ, ಮೊದಲಿಗೆ ಶ್ರೀಮತಿ ಇಂದಿರಾ ಅವರಿಂದ ಸ್ವಾಗತ ಗೀತೆಯ ಮುಖಾಂತರ ಶುರುವಾದ ಕಾರ್ಯಕ್ರಮ, ಸಂಜೀವ ಅವರ ನಿರೂಪಣೆಯಲ್ಲಿ ಹಾಗೂ ಶ್ರೀಮತಿ ಪ್ರೀತಿ ನವೀನ್ ಸ್ವಾಗತ ಪರಿಚಯ ಭಾಷಣದಿಂದ ಮುಂದುವರೆದು ಅವಧಾನ ಪ್ರಾರಂಭವಾಯಿತು.

ಪ್ರಚ್ಛಕರು ಕೇಳಿದ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಛಂದೋಬದ್ಧವಾಗಿ ಉತ್ತರಿಸುತ್ತ, ಮಹಾನ್ ಕವಿಗಳ ಕಾವ್ಯದಲ್ಲಿ ಅಂತ್ಯಾಕ್ಷರಿಯಾಡುತ, ಸಂಖ್ಯಾ ಬಂಧವನ್ನು ಛೇದಿಸುತ್ತ , ನಿಷೇಧಾಕ್ಷರಿಯ ನಿಷೇಧಕ್ಕೆ ಅನುಗುಣವಾಗಿ ಪದಪ್ರಯೋಗ ಮಾಡುತ್ತ ಪೆಜತ್ತಾಯರು ಉತ್ತರಿಸುತ್ತಿದ್ದರೆ, ಇದು ಬಹಳ ವಿಶೇಷವಾಗಿದ್ದು ಜನರಂತೂ ಅಂದಿನ ಅವಧಾನ ರಸಾಸ್ವಾದದಿಂದ ಮಂತ್ರಮುಗ್ಧರಾಗಿದ್ದು, ಆಶ್ಚರ್ಯಚಕಿತರಾದಂತೆ ಆಲಿಸುತ ಕುಳಿತ ಸಾಹಿತ್ಯಾಸಕ್ತ ಪ್ರೇಕ್ಷಕರಿಗೆ ನಾಲ್ಕು ಗಂಟೆಗಳು ಹೇಗೆ ಕಳೆದವೆಂದು ತಿಳಿಯಲೇ ಇಲ್ಲ. ಅವಧಾನಿಗಳಾದ ಪೆಜತ್ತಾಯರು ಅವಧಾನ ಮಾಡುತ್ತಲೇ ಜೊತೆ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯ ಮಹತ್ವ, ಭಾಷಾಶಾಸ್ತ್ರದ ವಿಶೇಷತೆಗಳನ್ನೂ ತಿಳಿಸಿದರಲ್ಲದೇ ದತ್ತಪದದಲ್ಲಿ ಪೃಚ್ಛಕರು ಮಾತೃವಾತ್ಸಲ್ಯ ಎಂಬ ವಿಷಯ ಕೊಟ್ಟಿರಲು, ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಯ ಮಹತ್ವ,ಮಾತೃವಾತ್ಸಲ್ಯದ ವಿಶೇಷತೆ ಇವುಗಳ ಬಗ್ಗೆಯೂ ತಿಳಿಸಿಕೊಟ್ಟರು.

ಕೊನೆಯಲ್ಲಿ ಮಾತನಾಡಿದ ಎಂ.ಸ್. ನರಸಿಂಹಮೂರ್ತಿಗಳು, ಈ ತರಹದ ವಾಸ್ತವಿಕ ವಿಷಯಾಧಾರಿತ ಅಷ್ಟಾವಧಾನ ಎಂದು ನಡೆದಿಲ್ಲ ಹೆಚ್ಚಾಗಿ, ಇದನ್ನು ವೀಕ್ಷಿಸಿ ಆಲಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು. ವಂದನಾರ್ಪಣೆಯನ್ನು ಮಹೇಶ್ ರಾವ್ ಸಲ್ಲಿಸಿದ ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group