Homeಸುದ್ದಿಗಳುಭ್ರಷ್ಟ ವ್ಯವಸ್ಥೆಯನ್ನು ಅನಾವರಣ ಮಾಡುವ ‘ವ್ಹಾ ತಾಜ್‌'

ಭ್ರಷ್ಟ ವ್ಯವಸ್ಥೆಯನ್ನು ಅನಾವರಣ ಮಾಡುವ ‘ವ್ಹಾ ತಾಜ್‌’

ಪರಸಗಡ ನಾಟಕೋತ್ಸವ ದಲ್ಲಿ ಇತ್ತೀಚೆಗೆ ನಾನು ನೋಡಿದ ನಾಟಕ ‘ ವ್ಹಾ ತಾಜ್‌’ ವಾಸ್ತವ ವಿಚಾರದ ಹೊಂದಿರುವ ವಿಡಂಬನಾತ್ಮಕ ನಾಟಕವಿದು. ಎಂ. ಸಿ. ಆನಂದ ರ ರಚನೆಯ ದಿವಾಕರ ಕಟೀಲು ನಿರ್ದೇಶನ ದ ಈ ನಾಟಕ 90 ನಿಮಿಷದ್ದಾಗಿತ್ತು.

ಸದ್ಯ ನಮ್ಮ ಕಣ್ಣೆದುರು ಇರುವ ವ್ಯವಸ್ಥೆಯನ್ನು ಗೇಲಿ ಮಾಡುತ್ತಾ ಸಾಗುವ ಈ ನಾಟಕ ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುವ ರೀತಿ ಕೆಲವೇ ಪಾತ್ರ ಗಳ ಮೂಲಕ ಸಾಗುವ ನೋಟ ಅನನ್ಯ.

ಶಹಜಹಾನ್‌ ತನ್ನ ಪ್ರೀತಿಯ ಮಡದಿ ಮಮ್ತಾಜ್‌ ನೆನಪಲ್ಲಿ ಈ ಕಾಲದಲ್ಲಿ ತಾಜ್‌ ಮಹಲ್‌ ಕಟ್ಟಲು ಹೊರಟರೆ ಹೇಗಿರಬಹುದು.? ಎಂಬುದೇ ಈ ನಾಟಕದ ತಿರುಳು. ಭ್ರಷ್ಟತೆಯ ಆಳ ಅಗಲ ಅರ್ಥವಾಗಬೇಕಿದ್ದರೆ ವಾಹ್‌ ತಾಜ್‌ ನೋಡಲೇಬೇಕು.

ಸುರುವಾಗಿದೆ. ಸುರುವಾಗಿದೆ ಆಗಿದೆ ಆಗಿದೆ ಎಂಬ ಹಿನ್ನೆಲೆ ಸಂಗೀತ ಹಾಡು ಭ್ರಷ್ಟಾಚಾರದ ವ್ಯವಸ್ಥೆ ತೋರಿಸುವ ರೀತಿ. ಆಗಾಗ ತಲೆ ಎತ್ತುವ ಬಾರ್ ನಲ್ಲಿ ಕುಡಿದು ತಮ್ಮ ವಿಚಾರ ಹಂಚಿಕೊಳ್ಳುವ ಭೃಷ್ಟರ ಯೋಜನೆ. ಕೋಟಿ ಕೋಟಿ ಹಣ ಹೇಗೆ ಲಪಟಾಯಿಸಬಹುದು ಎಂಬ ಲೆಕ್ಕಾಚಾರ. ಹಿನ್ನೆಲೆಯಲ್ಲಿ ಕೇಳಿ ಬರುವ ಮಾದಕ ಗೀತೆಗಳು. ನಿರ್ದೇಶಕನ ಪರಿಕಲ್ಪನೆ ಮನಮುಟ್ಟುವುದು.

ಒಂದು ಯೋಜನೆ ರೂಪುಗೊಳ್ಳುವ ಬಗೆ ಅದರ ಸುತ್ತಲೂ ಹುಟ್ಟುವ ಭ್ರಷ್ಟರ ಕೂಟ. ಧರಣಿಯನ್ನು ಮಾಡುವ ಮೂಲಕ ಹುನ್ನಾರ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರು ಕೊನೆಗೆ ಮಂತ್ರಿ ಗಳೂ ಕೂಡ ರಾಜನ ಅಸಹಾಯಕತೆ ಯನ್ನು ದುರುಪಯೋಗ ಪಡಿಸಿಕೊಳ್ಳುವ ರೀತಿ. ರಾಜ ಇದನ್ನೆಲ್ಲ ಕಂಡೂ ಮೂರ್ಖನಾಗುವ ಬಗೆ ಎಲ್ಲವನ್ನೂ 90 ನಿಮಿಷದಲ್ಲಿ ಹೇಳಿರುವ ರೀತಿ ಅಭಿನಂದನಾರ್ಹ.

ದೇಶದ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ರೀತಿಯ ವಿವಿಧ ಮುಖಗಳು ಶಹಜಾನನ್ ನ ಸುತ್ತ ಸುತ್ತುವ ಪಾತ್ರ ಗಳ ಮೂಲಕ ಅನಾವರಣಗೊಳಿಸುವ ವ್ಹಾ ತಾಜ್ ವಿವಿಧ ಸಮಿತಿಗಳ ಹುಟ್ಟು ಅವುಗಳು ನೀಡುವ ವರದಿ. ಹತ್ತಾರು ವರ್ಷಗಳ ಯೋಜನೆ ನಡೆಯುವ ರೀತಿ.ಅದಕ್ಕೆ ಬಂಡವಾಳ ಕ್ರೋಢೀಕರಣ ವಿಧಗಳು.ಗುತ್ತಿಗೆದಾರರ ಆಲೋಚನೆ ಗಳು ಇವೆಲ್ಲವೂ ವ್ಹಾ ತಾಜ್ ನಲ್ಲಿ ಮೇಳೈಸಿದ ನಿರೂಪಣೆ ಗಮನ ಸೆಳೆಯುವುದು.

‘ವ್ಹಾ ತಾಜ್‌’ ನಾಟಕ ಸಮಾಜದಲ್ಲಿ ಸೂಕ್ಷ್ಮತೆ, ಮಾನವೀಯತೆ ಬತ್ತಿ ಹೋಗಿಲ್ಲ ಎಂಬುದನ್ನು ಕೂಡ ನಿರೂಪಿಸುತ್ತದೆ.

ಪ್ರತಿಭೆಗಳ ನಾಡು ಕರಾವಳಿ:

ಸಾಂಸ್ಕೃತಿಕವಾಗಿ ಶ್ರೀಮಂತ ನಗರ ಎಂದೇ ಪರಿಗಣಿಸಲ್ಪಡುವ ಪೊಡವಿಗೊಡೆಯನ ನಾಡು ಉಡುಪಿಯ ರಂಗಭೂಮಿಯಲ್ಲಿ ಸುಮನಸಾ ಕೊಡವೂರು-ಉಡುಪಿಯ ಕೊಡುಗೆ ಮಹತ್ವದ್ದು. ಸಾಂಸ್ಕೃತಿಕ, ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆ ನಾಟಕ, ಯಕ್ಷಗಾನ ಹಾಗೂ ಏಕವ್ಯಕ್ತಿ ಅಭಿನಯಗಳನ್ನೂ ಒಳಗೊಂಡು ಒಂದಕ್ಕಿಂತ ಒಂದು ಭಿನ್ನವಾದ  ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಜೊತೆಗೆ ನಾಡಿನಾದ್ಯಂತ ತಮ್ಮ ನಾಟಕೋತ್ಸವ ದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸುಮನಸಾ ಹೆಸರನ್ನು ಚಿರಸ್ಮರಣೀಯವಾಗಿಸಿದೆ.

ನಾಟಕ-ಜೀವನ-ವಸ್ತು-ಶೈಲಿ ಇವುಗಳ ನಡುವೆ ನಮ್ಮ ಪ್ರೇಕ್ಷಕ- ನಿರ್ದೇಶಕ ಇವರ ಪರಸ್ಪರ ಸಂವಹನ ವ್ಹಾ ತಾಜ್ ನಾಟಕದ ವಿಶೇಷತೆ. ಕೆಲವೊಂದು ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲಲ್ಲಿ ತೊಳಲಾಡುವ, ಮೆದುಳನ್ನು ಚಿಂತನೆಗೆ ಹಚ್ಚಿ ಅವುಗಳಿಗೆ ಸಮಾಧಾನ ಹುಡುಕುತ್ತಾ ಬೆಳಕನ್ನು ಅರಸುವ ಪ್ರಯತ್ನದ ನಡುವೆ ನವಿರಾದ ಹಾಸ್ಯ ಹಾಗೂ ಮೊನಚಾದ ಮಾತುಗಳು ನಾಟಕದ ಮೆರುಗನ್ನು ಹೆಚ್ಚಿಸುತ್ತವೆ. ರಂಗದ ಮೇಲೆ ಬಂದ ಪಾತ್ರಗಳೆಲ್ಲವೂ ಲವಲವಿಕೆಯಿಂದ ತಮ್ಮ ಕಾರ್ಯ ನಿರ್ವಹಿಸಿ ನಾಟಕ ಮುಗಿದ ಮೇಲೂ ನೆನಪಿನಲ್ಲುಳಿಯುವಂತಹ ಹಾಗೂ ಅಂದಿನ ಕಾಲಕ್ಕೆ ಅನ್ವಯವಾಗುವ ಹಾಗೂ ಇಂದಿನ ಪ್ರಚಲಿತ ಸಂಗತಿಗಳನ್ನು ಹೋಲಿಕೆ ಯೊಡನೆ ಚರ್ಚಿಸುವ ಕತ್ತಲೆ-ಬೆಳಕು ಪ್ರೇಕ್ಷಕರ ಮನದಂಗಳದಲ್ಲಿ ಚಿರಕಾಲ ಇರುವಂತೆ ಮಾಡುತ್ತವೆ. ಬೆಳಕು ಹಾಗೂ ಸಂಗೀತ ನಾಟಕದಧನಾತ್ಮಕ ಅಂಶಗಳು.ಅದರಲ್ಲಿ “ಸುರುವಾಗಿದೆ ಆಗಿದೆ ಆಗಿದೆ ಸುರುವಾಗಿದೆ” ಹಾಗೂ ಮಂಜೂರಾಗಿದೆ ಆಗಿದೆ ಆಗಿದೆ ಮಂಜೂರಾಗಿದೆ ಎನ್ನುವ ಹಿನ್ನೆಲೆಯಲ್ಲಿ ಮೂಡಿ ಬಂದ ಗೀತೆ ವಿಡಂಬನಾತ್ಮಕ ವಿಷಯಕ್ಕೆ ಪೂರಕವಾಗಿದೆ.

ಪರಸಗಡ ನಾಟಕೋತ್ಸವ ತಂಡದ ಎಲ್ಲಾ ಸದಸ್ಯರೂ ಈ ನಾಟಕೋತ್ಸವ ಸಂಭ್ರಮದ ಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೀತಿಯ ಬಗ್ಗೆ ಎರಡು ಮಾತು ಹೇಳಲೇಬೇಕು. ಝಕೀರ ನದಾಫ. ಶಿವಾನಂದ ತಾರೀಹಾಳ ಅವರ ನೇತೃತ್ವದ ತಂಡ ದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವವರಿಂದ ಹಿಡಿದು ವಿದ್ಯಾರ್ಥಿಗಳು ವ್ಯಾಪಾರಿಗಳು ವಿವಿಧ ವೃತ್ತಿಪರ ಕಾರ್ಯ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದರು ಇದ್ದಾರೆ. ನಾಟಕ ಆರಂಭದಿಂದ ಹಿಡಿದು ಕೊನೆಗೆ ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳುವ ವರೆಗೂ ಎಲ್ಲ ರೂ ಮಾಡುವ ಕಾರ್ಯ ಶ್ಲಾಘನೀಯ.

25 ನೆಯ ವರ್ಷಾಚರಣೆ 25 ನಾಟಕಗಳು ಮೂಡಿ ಬರುತ್ತಿದ್ದು ಸವದತ್ತಿ ರಂಗಾಸಕ್ತರು ಹಿರಿಯರ ಪ್ರೋತ್ಸಾಹ ಸದಾ ತನು ಮನ ಧನ ಮೂಲಕ ಈ ತಂಡದ ಹಿಂದೆ ಇರಬೇಕು. ಈ ಸಂಘಟನೆ ಪ್ರತಿ ದಿನ ಸಮಾಜದ ವಿವಿಧ ರಂಗಗಳಲ್ಲಿ ಸೇವೆಗೈಯುತ್ತಿರುವವರನ್ನು ವೇದಿಕೆಯಲ್ಲಿ ಕರೆದು ಸನ್ಮಾನಿಸಿ ಆಧರಿಸುವ ಕಾರ್ಯ ಕೂಡ ಅಭಿನಂದನಾರ್ಹ.

ಭಾರತೀಯ ರಂಗಭೂಮಿಯಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈವರೆಗೂ ಅನೇಕ ವೈವಿದ್ಯಮಯವಾದ ಸೃಜನಶೀಲ ಪ್ರತಿಭೆಗಳು ಹಾಗೂ ಪ್ರಯೋಗಗಳನ್ನು ನೀಡಿ, ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಹತ್ತಾರು ಪ್ರಬುದ್ಧ ನಾಟಕಗಳಲ್ಲದೆ ಪ್ರಮುಖ ಕಾದಂಬರಿಗಳು, ಕಥೆಗಳು ರಂಗರೂಪ ತಾಳಿದೆ. ಪ್ರವೃತ್ತಿಗಾಗಿ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡ ಅನೇಕ ಪ್ರತಿಭಾವಂತರು ರಂಗಭೂಮಿಯನ್ನೇ ವೃತ್ತಿಯನ್ನಾಗಿಸಿಕೊಂಡು ಹೆಸರಾಂತ ನಾಟಕಕಾರರಾಗಿ, ನಿರ್ದೇಶಕರಾಗಿ, ನಟರಾಗಿ, ತಂತ್ರಜ್ಞರಾಗಿ, ರಂಗಕರ್ಮಿಗಳಾಗಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಕನ್ನಡ ಸಂಸ್ಕೃತಿಯ ಪ್ರತಿಪಾದಕನಂತೆ ಹವ್ಯಾಸಿ ರಂಗಭೂಮಿ ಪಾತ್ರವಹಿಸಿದೆ. ಅದರಿಂದಾಗಿ ನಾಡಿನಾದ್ಯಂತ ನೂರಾರು ಹವ್ಯಾಸಿ ತಂಡಗಳು ವೈವಿದ್ಯಮಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಯುವಜನರು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುತ್ತಿವೆ.

ಇಂದು ಅನೇಕ ಜಿಲ್ಲೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಸಣ್ಣ ಸಣ್ಣ ಹವ್ಯಾಸಿ ತಂಡಗಳನ್ನು ಕಟ್ಟಿಕೊಂಡು ಸ್ಥಳೀಯ ಸಂಪನ್ಮೂಲದೊಂದಿಗೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಹೊಸ ಹೊಸ ರಂಗ ಪ್ರಯೋಗಗಳನ್ನು ಸಿದ್ಧಪಡಿಸಿ, ಸಾಧ್ಯವಾದಲೆಲ್ಲಾ ಪ್ರದರ್ಶಿಸುತ್ತ ಹವ್ಯಾಸಿ ರಂಗಭೂಮಿಯನ್ನು ಜೀವಂತಗೊಳಿಸಿದೆ.

ಈ ಕಾರಣದಿಂದಾಗಿ ರಂಗ ಆರಾಧನಾ ಸಂಸ್ಥೆ ಸವದತ್ತಿ ಯಲ್ಲಿ 25 ವರ್ಷಗಳಿಂದ ಪರಸಗಡ ನಾಟಕೋತ್ಸವ ನಡೆಸುತ್ತ ಬಂದಿದೆ. ನಾಡಿನ ವಿವಿಧ ಜಿಲ್ಲೆಗಳ ಆಸುಪಾಸಿನಲ್ಲಿ ನಡೆಯುತ್ತಿರುವ ವಿನೂತನ ರಂಗ ಸಾಧ್ಯತೆಗಳನ್ನು ಗಮನಿಸುತ್ತ ಹೊಸ ಪ್ರಯತ್ನ ಹಾಗೂ ಪ್ರಯೋಗಗಳನ್ನು ಗುರುತಿಸಿ ಪ್ರೋತ್ಸಾಹಿಸಲು ರಂಗಾಯಣ. ನೀನಾಸಂ. ಸಮುದಾಯ ರಂಗ ಪರಿಸರ. ಸುನಿಧಿ ಕಲಾ ಸೌರಭ. ಕೆ. ವ್ಹಿ. ಸುಬ್ಬಣ್ಣ ರಂಗ ಸಮೂಹ.ಸಕ್ರಿ ಬಾಳಾಚಾರ್ಯ ಶಾಂತ ಕವಿ ಟ್ರಸ್ಟ್.ಸಂಚಯ ಟ್ರಸ್ಟ್.ರಂಗ ಸಂಪದ. ಧಾತ್ರಿ ರಂಗಯಾತ್ರೆ. ಆಟ ಮಾಟ. ಸುಮನಸಾ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆ ಜಡಿ ಸಿದ್ಧೇಶ್ವರ ಕೃಪಾ ಪೋಷಿತ ನಾಟ್ಯ ಸಂಘ. ಸ್ನೇಹ ರಂಗ.ದೃಶ್ಯ ತಂಡಗಳಿಗೆ ವೇದಿಕೆಯನ್ನು ನೀಡಿ, ಕಾರ್ಯ ವಿಸ್ತರಣೆಗೆ ಪ್ರೇರಣೆ ನೀಡಿದ್ದು. ಸವದತ್ತಿ ಯ ರಂಗಾಸಕ್ತರಿಗೆ ನಾಡಿನ ವಿವಿಧ ನಾಟಕ ತಂಡಗಳ ನಾಟಕಗಳ ಪ್ರದರ್ಶನ ಕ್ಕೆ ಅವಕಾಶ ಕಲ್ಪಿಸಿದ್ದು ಕೂಡ ಅಭಿನಂದನಾರ್ಹ

ಈ ಸಾಲಿನಲ್ಲಿ 27-3-2022 ವರೆಗೂ ಪರಸಗಡ ನಾಟಕೋತ್ಸವ ಜರಗುತ್ತಿದ್ದು 20-3-2022 ರಿಂದ ಮೂರನೆಯ ಹಂತದ ನಾಟಕಗಳು ಪ್ರದರ್ಶನ ಆರಂಭಗೊಳ್ಳುತ್ತವೆ. ಕ್ರಿಯಾಶೀಲ ತಂಡಗಳು, ಕ್ರಿಯಾಶೀಲ ನಿರ್ದೇಶಕರು, ಹೊಸ ಪ್ರಯೋಗಗಳನ್ನು ಗಮನದಲ್ಲಿಟ್ಟುಕೊಂಡು ನಾಟಕಗಳು ಸವದತ್ತಿ ಕೋಟೆ ಆವರಣದಲ್ಲಿ ಮೂಡಿ ಬರುವ ಮೂಲಕ ಮತ್ತೆ ಮತ್ತೆ ರಂಗ ಚಟುವಟಿಕೆ ಗಳು ಜರುಗುತ್ತಿವೆ ಎನ್ನುವಂತೆ ಪರಸಗಡ ನಾಟಕೋತ್ಸವ ಜರುಗುತ್ತಿದೆ. ಪರಸಗಡ ನಾಟಕೋತ್ಸವ ದ ಎಲ್ಲಾ ಕ್ರಿಯಾಶೀಲ ಕಲಾವಿದರಿಗೆ ಸಂಘಟನೆ ಗೆ. ಇವರಿಗೆ ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷ ವಾಗಿ ಸಹಕಾರ ನೀಡುತ್ತಿರುವ ಮಹನೀಯರಿಗೂ ಧನ್ಯವಾದಗಳನ್ನು ಸಲ್ಲಿಸುವೆನು. ರಂಗ ಪರಂಪರೆ ಉಳಿಸಿ. ಬೆಳೆಸಿರಿ. ಸಿರಿಗನ್ನಡಂ ಗೆಲ್ಗೆ.


ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿ ಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ.

RELATED ARTICLES

Most Popular

error: Content is protected !!
Join WhatsApp Group