ಮೂಡಲಗಿ: ಯೋಗವು ಭಾರತ ದೇಶದಲ್ಲಿ ಮಾನವ ಶರೀರದ ರೋಗವನ್ನು ಹೋಗಲಾಡಿಸುವ ಪಾರಂಪರಿಕ ಚಿಕಿತ್ಸಾ ಪದ್ದತಿಯಾಗಿದ್ದು, ನಮ್ಮ ದೇಶ ಜಗತ್ತಿಗೆ ನೀಡಿದ ಬೆಲೆ ಕಟ್ಟಲಾಗದ ಒಂದು ಮಹಾನ ಕೊಡುಗೆ ಯೋಗಾಭ್ಯಾಸವಾಗಿದೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಜೂನ 21 ರಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೇಂದ್ರ ಆಯುಷ್ಯ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ತಾಲೂಕಾಡಳಿತ ಮೂಡಲಗಿ, ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ ಕಲ್ಲೋಳಿ, ಮೂಡಲಗಿ ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರದ ‘ಹಸಿರು ಯೋಗ’ ಪರಿಕಲ್ಪನೆಯೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಸಂಸದ ಈರಣ್ಣ ಕಡಾಡಿ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶ ಜಗತ್ತಿಗೆ ಸೊನ್ನೆ ಮತ್ತು ಆಯುರ್ವೇದಗಳಂತಹ ಅತಿ ದೊಡ್ಡ ಕೊಡುಗೆಗಳ ಜೊತೆಗೆ ಯೋಗವನ್ನು ಕೂಡಾ ನೀಡಿದೆ. 5000 ವರ್ಷಗಳಿಂದ ಭಾರತೀಯ ನೆಲದ ಋಷಿಮುನಿಗಳಿಂದ ಪ್ರಾರಂಭವಾದ ಯೋಗಾಭ್ಯಾಸವನ್ನು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ನಮ್ಮ ಜನರು ಮರತೇ ಬಿಟ್ಟಿದ್ದರು. ಆದರೆ ಕಳೆದ 11 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಪರಿಶ್ರಮ ಮತ್ತು ಕಾಳಜಿಯ ಪರಿಣಾಮವಾಗಿ ಇಡಿ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹಿರಿಮೆ ಭಾರತಕ್ಕಿದೆ ಎಂದರು.
ಯೋಗದಿಂದ ರೋಗವನ್ನು ದೂರ ಮಾಡಿ ಸ್ವಸ್ಥ, ಸದೃಢ ಸಮಾಜ ಕಟ್ಟಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಪ್ರತಿದಿನ ಯೋಗ ಮಾಡಿ ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಕಂಕಣ ಬದ್ದರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾರತ ಸರ್ಕಾರದ ‘ಹಸಿರು ಯೋಗ’ ಪರಿಕಲ್ಪನೆ ಅಂಗವಾಗಿ ಸಸಿಗಳನ್ನು ನೆಡಲಾಯಿತು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ, ನಿರ್ದೇಶಕರಾದ ವಿಜಯ ಸೋನವಾಲ್ಕರ, ಪ್ರಮುಖರಾದ ಶಿವಬಸು ಹಂದಿಗುಂದ, ನಿಂಗಪ್ಪ ಪಿರೋಜಿ, ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಈರಪ್ಪ ಢವಳೇಶ್ವರ, ಸದಾಶಿವ ನೇರ್ಲಿ, ಶಿವಾನಂದ ಮಗದುಮ್ಮ, ಪ್ರಾಚಾರ್ಯರಾದ ಚಿತ್ರಗಾರ, ಮಹಾಂತೇಶ ಪಾಟೀಲ, ಮಲ್ಲಪ್ಪ ಕಂಕಣವಾಡಿ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ, ಶ್ರೀಶೈಲ ಪೂಜೇರಿ, ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ ಸೇರಿದಂತೆ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಆಯುಷ್ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ರಾಷ್ಟಮಟ್ಟದ ಯೋಗ ಪಟುಗಳಾದ ಕುಮಾರಿ ಸವಿತಾ ಪಾಟೀಲ, ಭೀಮಪ್ಪ ಪೂಜೇರಿ ಇವರನ್ನು ಸತ್ಕರಿಸಲಾಯಿತು. ಭೀಮಶಿ ಬಡಗಣ್ಣವರ ಇವರ ನೇತೃತ್ವದಲ್ಲಿ ವೇದಿಕೆಯ ಮೇಲೆ ಈ ಇಬ್ಬರೂ ಯೋಗಾಸನಗಳನ್ನು ಪ್ರದರ್ಶಿಸಿದರು. ಯೋಗ ಸಾಧಕರು ಯೋಗಾಸನದಲ್ಲಿ ಪಾಲ್ಗೊಂಡರು.