ಸಿಂದಗಿ: ಎಲ್ಲ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ನಮ್ಮ ದೇಶದಲ್ಲಿ ಅನಾರೋಗ್ಯದಲ್ಲಿ ಬಳಲುತ್ತಿರುವವರಲ್ಲಿ ಎಷ್ಟೋ ಜನರು ರಕ್ತ ಸಿಗದೇ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಅದಕ್ಕೆ ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಅಲ್ಲದೆ ಪ್ರತಿಯೊಬ್ಬರೂ ತಿಂಗಳಿಗೊಮ್ಮೆ ರಕ್ತ ದಾನ ಮಾಡುವುದರಿಂದ ತನ್ನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಿಸ್ವಾರ್ಥ ಮನೋಭಾವನೆಯಿಂದ ಇತರರಿಗೆ ಒಳಿತನ್ನು ಮಾಡುವ ಉದ್ದೇಶದಿಂದ ರಕ್ತದಾನ ಮಾಡಲು ಇಲ್ಲಿ ಬಂದಿದ್ದೇವೆ ನಮ್ಮ ಈ ಒಂದು ಚಿಕ್ಕ ಸಹಾಯದಿಂದ ಒಂದು ಜೀವ ಉಳಿಯುತ್ತದೆ ಎಂದರೆ ನಾವು ನೀವೆಲ್ಲರು ಈ ರಕ್ತದಾನ ಮಾಡಿ ಅಪಾಯದಲ್ಲಿರುವವರ ಜೀವಕ್ಕೆ ನೆರವಾಗೋಣ ಎಂದರು.
ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಟೆಕ್ನಿಷಿಯನ್ ಬಿ.ಕೆ ಮೈಸೂರ ಮಾತನಾಡಿ, ಪ್ರತಿಯೊಬ್ಬ ಪುರುಷನು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಇದರಿಂದ ಆರೋಗ್ಯ ಸಮತೋಲನವನ್ನು ಕಾಪಾಡಿದಂತಾಗುತ್ತದೆ. ರಕ್ತದಾನದಿಂದ ಹೃದಯಾಘಾತ, ಕಿಡ್ನಿ ಸಮಸ್ಯೆ ದೂರಾಗಬಹುದು ಮತ್ತು ಹೊಸ ರಕ್ತ ಉತ್ಪತಿಯಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಜಯಪೂರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಟೆಕ್ನಿಷಿಯನ್ ಆಗಿರುವ ವೀರಪ್ಪ ಜಂಬಗಿ, ಡಾ|| ಯಶವಂತ ಅಂಜುಟಗಿ, ಸಿಂದಗಿ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಕಾಶಪ್ಪ ನಾಯಕ, ಮಡಿವಾಳಮ್ಮ ಗದಿಗಿಮಠ, ನಾಗರಾಜ ಬಿರಾದಾರ, ಕಟ್ಟಡ ಕಾರ್ಮಿಕರು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಸಂಗಮ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ವಿಜಯ ವಿ ಬಂಟನೂರ ನಿರೂಪಿಸಿದರು, ಕಾರ್ಯಕರ್ತರಾದ ಮಲಕಪ್ಪ ಹಲಗಿ ಇವರು ಸ್ವಾಗತಿಸಿದರು ಮತ್ತು ಕಾರ್ಯಕರ್ತೆ ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ಇವರು ಸಂವಿಧಾನ ಪ್ರಸ್ತಾವನೆಯನ್ನು ಮಂಡಿಸಿದರು.