Homeಸುದ್ದಿಗಳುಸುಂದರ ಪರಿಸರ ನಿರ್ಮಾಣದಲ್ಲಿ ಯುವಕರು ಹೆಚ್ಚು ಭಾಗಿಯಾಗಬೇಕು - ತೋಂಟದಾರ್ಯ ಶ್ರೀಗಳು

ಸುಂದರ ಪರಿಸರ ನಿರ್ಮಾಣದಲ್ಲಿ ಯುವಕರು ಹೆಚ್ಚು ಭಾಗಿಯಾಗಬೇಕು – ತೋಂಟದಾರ್ಯ ಶ್ರೀಗಳು

ಸಿಂದಗಿ: ಪ್ರಕೃತಿ ನಮಗೆ ಉಚಿತವಾಗಿ ಕೊಡುಗೆ ನೀಡಿದ ನೀರು, ಗಾಳಿ, ಬೆಳಕನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ. ಔದ್ಯೋಗಿಕ ಕ್ರಾಂತಿಯಿಂದಾಗಿ ಜಲಮೂಲ, ನದಿಮೂಲಗಳು ಮಲೀನಗೊಂಡು, ನಗರೀಕರಣದ ಭರಾಟೆಯಿಂದ ಕಾಡು, ಮೇಡು, ಗಿಡ-ಮರಗಳು ನಾಶವಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ. ವನ್ಯ ಜೀವಿಗಳು ಆಶ್ರಯ ತಾಣವಿಲ್ಲದೇ ನಾಡಿಗೆ ದಾಂಗುಡಿಯಿಡುತ್ತಿವೆ. ಎಂದು ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ವಿಶ್ವಬಂಧು ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡ 11ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಮಾತನಾಡಿ, ಜೀವಿಗಳ ಸಹ ಬಾಳ್ವೆಯಲ್ಲಿ ಅಸಮತೋಲನ ಉಂಟಾಗುತ್ತಿದೆ ಮರಗಳು ವಿಷ ವಾಯುವನ್ನು ಹೀರಿಕೊಂಡು ಜೀವವಾಯುವನ್ನು ಕೊಡುವ ನೀಲಕಂಠ ಇದ್ದ ಹಾಗೆ ಕಾರಣ ಮನುಷ್ಯ ನೆಮ್ಮದಿ, ಶಾಂತಿ, ಸಮೃದ್ಧಿಯಿಂದ ಇರಬೇಕಾದರೆ ಪ್ರಕೃತಿಯಲ್ಲಿ ಸಸ್ಯ ಪ್ರೀತಿ, ಹಸಿರು ಪರಿಸರದ ಪ್ರೀತಿ ಹೆಚ್ಚಾಗಬೇಕು. ಅದರಲ್ಲೂ ಯುವಕರು ಸುಂದರ ಹಾಗೂ ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದರು.

ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ, ಪರಿಸರ, ವನ್ಯ ಜೀವಿಗಳು ಹಾಗೂ ಮಾನವ ಜೀವಿಗಳ ನಡುವೆ ಸಾಮರಸ್ಯ ಮುಖ್ಯ ಜೀವಿಗಳಿಗೆ ಜೀವ ಮತ್ತು ಜೀವನಾಧಾರವಾಗಿರುವ ಮರ-ಗಿಡಗಳನ್ನು ನೆಟ್ಟು ಭವಿಷ್ಯತ್ತಿನ ಜೀವಿಗಳಿಗೆ ನೆರವಾಗಬೇಕು ಎಂದರು.

ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು ಆರ್ಶೀವಚನ ನೀಡಿದರು.

ಕರ್ನಾಟಕ ಸೌಹಾರ್ದ ವೇದಿಕೆಯ ಮೈಬೂಬ ಮುಲ್ಲಾ, ರಜಾಕ ಚೌದ್ರಿ, ನ್ಯಾಯವಾದಿ ಶ್ರೀನಾಥ ಪೂಜಾರಿ, ದೇವರ ಹಿಪ್ಪರಗಿ ತಾಪಂ ಅದ್ಯಕ್ಷ ಲಲಿತಾ ದೊಡಮನಿ ವೇದಿಕೆ ಮೇಲಿದ್ದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರರಾಜ ಅಗಸರ ನಿರೂಪಿಸಿದರು. ಕಾನಿಪ ಅಧ್ಯಕ್ಷ ಆನಂದ ಶಾಬಾದಿ ವಂದಿಸಿದರು.

ಈ ಸಂದರ್ಭದಲ್ಲಿ ಸಬೀಯಾ ಮರ್ತೂರ, ಶಂಕುತಲಾ ಹಿರೇಮಠ, ಮಹಾದೇವಿ ಹಿರೇಮಠ, ಶಾಮಲಾ ಮಂದೇವಾಲಿ, ಗುರುಪ್ರಿಯಾ ಪುರಾಣಿಕ, ಸೈನಾಬಿ ಮಸಳಿ, ಪರಿಮಳಾ ಯಲಗೋಡ, ಶಿವಕುಮಾರ ಕಲ್ಲೂರ, ಚಂದ್ರಶೇಖರ ನಾಗರಬೆಟ್ಟ, ಮಹಾಂತೇಶ ನೂಲಾನವರ, ನವೀನ ಶೆಳ್ಳಗಿ, ಬಸವರಾಜ ಗುರಶೆಟ್ಟಿ, ಪರಸುರಾಮ ಪೂಜಾರಿ, ಎಸ್.ಆರ್.ಪಾಟೀಲ ರವಿ ಹೋಳಿ, ರಾಜು ಕಾಕಂಡಕಿ, ಎಂ.ಎಂ.ಹಂಗರಗಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group