spot_img
spot_img

ಕುವೆಂಪು ಅವರ ಕನ್ನಡ ಪ್ರೀತಿ ಮತ್ತು ವೈಚಾರಿಕತೆ

Must Read

- Advertisement -

Also Read: Kuvempu Information in Kannada- ಕುವೆಂಪು


ಕಾಲದ ಬದಲಾವಣೆಯೊಂದಿಗೆ ಮನುಷ್ಯನಿಂದ ಆಲೋಚನೆಗಳನ್ನು ಕೂಡ ಬದಲಾವಣೆಗಳು ಸೃಷ್ಠಿಸುತ್ತವೆ. ಪ್ರತಿಯೊಂದು ಆಲೋಚನೆಗಳು ಸಂಭವಿಸುವ ಹೊಸ ಹೊಸ ಪ್ರಭಾವಗಳು ಮನುಷ್ಯನ ಮೇಲೆ ತನ್ನ ಅಗಾಧ ಪ್ರಭಾವ ಬಿರುತ್ತವೆ.

ಇದರ ನಡುವೆಯು ಮಾನವೀಯತೆಗೆ ಹಾಯಿಸುವ ವೈಚಾರಿಕ ಪ್ರಜ್ಞೆಯನ್ನ ಹರಿತಗೊಳಿಸಿಕೊಳ್ಲಲು ಕತ್ತಲನ್ನ ಬೆಳಕಿನತ್ತ ಕೊಂಡೊಯ್ಯುವ ಸಾಧಕರು ಸದಾ ಹುಟ್ಟುತ್ತಲೆ,ಬೆಳಗುತ್ತಲೆ ಇರುತ್ತಾರೆ. ಇಂತಹ ಮಾಹಾನ್ ಪರಂಪರೆ ಬುದ್ಧನಿಂದ ಆರಂಭವಾಗಿ ೨೦ನೇ ಶತಮಾನದ ಕುವೆಂಪುವರೆಗೂ ಸದಾ ಪ್ರಜ್ವಲಿಸುತ್ತಲೇ ಇದೆ.

- Advertisement -

ಮಲೆನಾಡೆಂದರೆ ಕರ್ಣಮಂಡಲಗಳಲ್ಲಿ ಕುವೆಂಪು ಹೆಸರು ಎಲ್ಲೆಲ್ಲೂ ವೈಭವೀಕರಿಸುತ್ತದೆ. ಈ ಕವಿ ‘ಬೆಳೆದದ್ದು  ಕನ್ನಡ ಮಣ್ಣಲ್ಲೆಯಾದರು; ಸಾಹಿತ್ಯದ ರುಚಿ ಕಂಡದ್ದು ಇಂಗ್ಲಿಷ್ ಭಾಷೆಯಲ್ಲಿ’. “ಬಿಗಿನರ್ಸ ಮ್ಯೂಸ್”(೧೯೨೨) ಕುವೆಂಪುರವರು ಹತ್ತನೇ ತರಗತಿಯಲ್ಲಿರುವಾಗ ಪ್ರಕಟಗೊಂಡ ಚೊಚ್ಚಲ ಇಂಗ್ಲಿಷ್ ಕವನ ಸಂಕಲನ.

ಆಗ ಅವರು ಹಾರ್ಡ್ವಿಕ್ ಹೈಸ್ಕೂಲ್ ಮೈಸೂರಿನಲ್ಲಿ ವ್ಯಾಸಾಂಗ ಮಾಡುತಿದ್ದರು. ಆಗತಾನೆ ಮೈಸೂರಿಗೆ ಧಾವಿಸಿದ ಐರಿಷ್ ಕವಿ ‘ಜೇಮ್ಸ್ ಕಸಿನ್ಸ್’ ರವರಿಗೆ ಪುಟ್ಟಪ್ಪನವರು ತಮ್ಮ ಕವನಗಳನ್ನ ತೋರಿಸುತ್ತಾರೆ. ಇದನ್ನು ಪರಿಪಕ್ವತೆಯಿಂದ ಪರಿಶೀಲಿಸಿದ ಅವರು, ‘ರವೀಂದ್ರರು ತಮ್ಮ ತಾಯಿ ನುಡಿಯಾದ ಬಂಗಾಳಿಯಲ್ಲಿ ಬರೆದರು; ನೀನು ಕೂಡ ನಿನ್ನ ಮಾತೃಭಾಷೆಯಾದ ಕನ್ನಡದಲ್ಲಿಯೇ ಬರಿ, ಆಗ  ಉತ್ತಮ ಕವಿಯಾಗಲು ಸಾಧ್ಯ ಎಂದು ಹೇಳಿದರಂತೆ.

ಬಹುಶಃ ಪುಟ್ಟಪ್ಪನವರು ಇಂಗ್ಲೀಷಿನಿಂದ ಕನ್ನಡ ಸಾಹಿತ್ಯಕ್ಕೆ ನವೀಕರಣಗೊಂಡದ್ದು ಇದೆ ಪ್ರಸಂಗದಿಂದ ಎಂದು ತಿಳಿಯುತ್ತದೆ. ಕೇಸಿನ್ಸ್ ರವರ ಮಾತುಗಳಿಂದ ಪ್ರಾಯೋಗಿಕವಾಗಿ  ಮುನ್ನಡೆದ ಪುಟ್ಟಪ್ಪನವರು ತಮ್ಮದೇ ಆದ ‘ಏಪ್ರಿಲ್’ ಎಂಬ ಆಂಗ್ಲ ಕವನವನ್ನು ‘ಚೈತ್ರ-ವೈಶಾಖ’ ಎಂದು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರು. ಅಂದಿನಿಂದ ಕನ್ನಡದ ಕವಿಯ ಕವಿವಾಣಿ ತಾಯಿ ಭುವನೇಶ್ವರಿಗೆ ಕಾಣಿಕೆಯಾಗಿ, ಕನ್ನಡದೊಂದು ಕುಡಿ ನವಸಾಹಿತ್ಯದ ಯಕ್ಷಲೋಕವನ್ನೇ ಸೃಷ್ಟಿಸಲು ಹೊರಟಿತು.

- Advertisement -

ಕನ್ನಡಕ್ಕಾಗಿ ಕೈಯೆತ್ತು;
ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು;
ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು,
ಇಂದು ಅದೆ ಗೋವಾರ್ಧನ ಗಿರಿಧಾರಿಯಾಗುತ್ತದೆ!

ಕುವೆಂಪುರವರ ಬದುಕಿನಾದ್ಯಂತ ಕಾಡಿದ ಬಹುಮುಖ್ಯ  ಭಾಗಗಳೆಂದರೆ ಮೊದಲಿನದು ಕನ್ನಡ ಭಾಷೆ. ಎರಡನೆಯದು ಹಿಂದೂ ಧರ್ಮದ ಭಯಾನಕ ಸ್ವರೂಪಗಳಾದ ಜಾತಿಪದ್ಧತಿ ಮತ್ತು ಮಠಗಳ ಬಗ್ಗೆ ತರತಮ ಮನಸ್ಥಿತಿ. ಕವಿಯು ತಮ್ಮ ಕವಿತೆಗಳಲ್ಲಿ ತಾಯ್ನುಡಿಯ ಉನ್ನತೀಕರಣದ ರಮ್ಯಸೃಷ್ಟಿಯನ್ನೇ ರೂಪಿಸಿದ್ದಾರೆ. ಇವರ ವಿರಚಿತ ‘ನೇಗಿಲಯೋಗಿ’ ಕವಿತೆ ನಾಡು-ನುಡಿಯ, ನೆಲದ-ಜಲದ, ಜನ-ಸಮುದಾಯದ ವೈವಿಧ್ಯತೆಗಳನ್ನ ಆದರ್ಶದ ಬದುಕಿನೊಡೆಗೆ ಕೊಂಡೊಯ್ಯುತ್ತದೆ.

ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಿಯಾದರು ಸ್ಥಾನ ದೊರೆಯಬೇಕಾದರೆ ಅದು ಇಲ್ಲೇ, ಕರ್ನಾಟಕದಲ್ಲೇ! ಇನ್ನೆಲ್ಲಿಯೂ ಅಲ್ಲ ಎಂಬ ಉದಾತ್ತ ನಿಲುವನ್ನು ಹೊಂದಿದ್ದರು.

ಕುವೆಂಪುರವರು ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ “ನೀವು ಕರ್ನಾಟಕದಲ್ಲಿ ಕನ್ನಡದವರಿಗೆ ಎಡೆ-ಕೊಡದಿದ್ದರೆ,ಸ್ಥಾನಮಾನ ಕೊಡದಿದ್ದರೆ ಜಗತ್ತಿನ ಮತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವುದಿಲ್ಲ,ಕನ್ನಡಿಗರು ಕೈ ಬಿಟ್ಟರೆ ಸಮುದ್ರವೇ ಗತಿ”ಎಂದು ಕರೆನೀಡಿದ್ದು ಬಹಳ ಮಹತ್ವಪೂರ್ಣವಾಗಿದೆ.

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ.

೧೯೨೪ ರಲ್ಲಿ ಬರೆದ ಈ ಗೀತೆಯನ್ನ ಕುವೆಂಪುರವರು ಇದು ರಾಷ್ಟ್ರಗೀತೆ,ನಾಡಗೀತೆ ಎಂದು ಕರೆದರು. ಕರ್ನಾಟಕದ ಏಕೀಕರಣ ಮತ್ತು ತ್ರಿಭಾಷಾ ಚಳುವಳಿಗೆ ಈ ಗೀತೆ ಮುಂದೆ ಮುನ್ನಡಿಯಾಯಿತು.ಇದನ್ನ ೨೦೦೪ ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ನಾಡಗೀತೆಯನ್ನಾಗಿ ಸ್ವೀಕರಿಸಿತು.

ಭಾರತವನ್ನ ಮತ್ತು ಕರ್ನಾಟಕವನ್ನ ಇವರು ಎಲ್ಲೂ ಪ್ರತ್ಯೇಕತೆಯ ದೃಷ್ಠಿಯಿಂದ ಕಾಣಲಿಲ್ಲ. ಅವು ಒಂದನ್ನ  ಇನ್ನೊಂದು ಬಿಟ್ಟಿರಲಾರದ ಅವಿಭಾಜ್ಯ ಅಂಗಗಳೆಂದು ಪರಿಗಣಿಸಿದರು. ಅದೇ ಕಾರಣಕ್ಕಾಗಿಯೆ, ಭಾರತ ಜನನಿಯ ಮಗಳು
ಕರ್ಣಾಟಕ ಮಾತೆ ಎಂದು ಸಮಾನತೆಯ ದೃಷ್ಟಿಕೋನವನ್ನ‌ ಬೀರಿದ್ದಾರೆ.

ಕರ್ನಾಟಕ ಮತ್ತು ಕನ್ನಡ ನುಡಿ ವಿಷಯ ಬಂದಾಗ ನೇರವಾಗಿರುತ್ತಿದ್ದರು. ಅವರೇ ಹೇಳುವ ಹಾಗೆ ‘ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿಬಿಟ್ಟುಕೊಟ್ಟರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ’!. ಇದೆ ಸಮಯದಲ್ಲಿ ‘ಅಖಂಡ ಕರ್ನಾಟಕ’ ಎಂಬ ಪ್ರಖ್ಯಾತ ಪದ್ಯ ಬರೆದು ಇಡೀ ಮೈಸೂರಿನ ಮಂತ್ರಿಮಂಡಲಕ್ಕೆ ಅರಗಿಸಿಕೊಳ್ಳಲಾಗದಷ್ಟು ಉಗಿದಿದ್ದರು.

ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಾಣಪ್ಪ
ಸರ್ವಜ್ಞ ಷಡಕ್ಷರ;
ಸರಸ್ವತಿಯೇ ರಚಿಸಿದೊಂದು
ನಿತ್ಯಸಚಿವ ಮಂಡಲ
ತನಗೆ ರುಚಿರ ಕುಂಡಲ!

ಇಲ್ಲಿ ಸರಸ್ವತಿಯಿಂದ ರಚಿತವಾದ ನಿತ್ಯಸಚಿವ ಮಂಡಲದಲ್ಲಿ ಯಾವ ಕಲಹಗಳಿಲ್ಲ, ಯಾವ ಜಾತಿಯತೆಯಿಲ್ಲ,ಇಲ್ಲಿ ಮಂತ್ರಿ ಪದವಿಗಾಗಿ  ಹೋರಾಟವಿಲ್ಲ, ಇಲ್ಲಿ ಯಾವುದಕ್ಕೂ ಕೊರತೆಗಳಿಲ್ಲದೆ ನಾವೆಲ್ಲ ಒಂದೇ! ಎನ್ನುವ ಅನಂತವಾದ ದುಷ್ಟಾಂತವನ್ನ ಕವಿ ಇಲ್ಲಿ ಹೆಣೆದಿದ್ದಾರೆ.

ಆದರೆ ಇಂದಿನ ಕರ್ನಾಟಕ ಕೇವಲ ಬೂಟಾಟದ, ಮಾರಾಟದ ರಾಜಕೀಯ ನಾಟಕವಾಗಿದೆ. ನಿತ್ಯವೂ ಮಂತ್ರಿಮಂಡಲದಲ್ಲಿ ಹಗೆತನದ ಕಿಚ್ಚು, ಡಾಂಭಿಕ ಮಾತುಗಳು, ಕಪಟ ಭಕ್ತರು ಧರ್ಮ-ಜಾತಿಯ ಆಧಾರದಲ್ಲಿ ಈ ನಾಡಿನ ಎಷ್ಟೋ ಯುವಕರ ದಿಕ್ಕನ್ನ ಬದಲಾಯಿಸುತ್ತಿದ್ದಾರೆ. ಇಂದು ಇದು ಆಲೈಸುವುದಕ್ಕೂ ಮತ್ತು ಸ್ಪರ್ಶಿಸುವುದಕ್ಕೂ ಶೋಚನೀಯ ಸಂಗತಿಯಾಗಿದೆ.

 ಪ್ರಸ್ತುತ ಭಾರತ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿರುವ ಸಂಧರ್ಭದಲ್ಲಿ ಕುವೆಂಪು ಅವರ ಚಿಂತನೆಗಳು, ಬರಹಗಳು , ಪ್ರಭುತ್ವ ಹಾಗೂ ಪುರೋಹಿತಶಾಹಿ ವಿರುದ್ದ ಇರುವ ಅವರ ಗಟ್ಟಿ ಆಕ್ರೋಶ , ನಮ್ಮಲ್ಲಿ ವಿಶ್ವಮಾನವತೆಯ ಸಸಿ ನೆಡಸಬಲ್ಲವು.

ನಾವೂ ನಮ್ಮನ್ನು ಎಷ್ಟು ಕಲಿಷಿತಗೋಳಿಸಿಕೊಂಡಿದ್ದೆವೆ ಎನ್ನುವ ಸತ್ಯವನ್ನ ಅರಿಯಾಬೇಕಾದ್ರೆ ಕುವೆಂಪು ನೆರವಾಗಬಲ್ಲರು. ಕುವೆಂಪು ತಮ್ಮ ಇಡೀ ‘ರಾಮಾಯಣ ದರ್ಶನಂ’ ಕೃತಿಯಲ್ಲಿ ಲಿಂಗ ಸಮಾನತೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲರ ಕಣ್ಣಲ್ಲೂ ಅವಕೃಪೆಗೆ ಒಳಗಾಗುವ “ಮಂಥರೆ” ಕುವೆಂಪು ಕಣ್ಣಲ್ಲಿ ಮಮತೆಯ ಝರಿಯಾಗಿ ಹರಿಯುತ್ತಾಳೆ, “ಶೂರ್ಪನಖಿ”ಚಂದ್ರನಖಿಯಾಗಿ ಬೆಳಗುತ್ತಾಳೆ.

ಸೀತೆಯ ಜೊತೆ ರಾಮನನ್ನು ಅಗ್ನಿಪ್ರವೇಶ ಮಾಡಿಸುವ ಕುವೆಂಪು ಲಿಂಗ ಸಮಾನತೆಗೆ ಮುನ್ನುಡಿಯಾಗುತ್ತಾರೆ.  ಇವತ್ತಿನ ರಾಮನ ಚಿತ್ರಪಟದಲ್ಲಿ ಸೀತೆ ಕಾಣಿಯಾಗಿದ್ದಾಳೆ, ಲಕ್ಷ್ಮಣ ಮರೆತುಹೋಗಿದ್ದಾನೆ, ಶಬರಿಯ ರಾಮ, ಬಿಲ್ಲು ಹಿಡಿದು ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ.

ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ ಎನ್ನುವ ಕುವೆಂಪುರವರ ದಾರ್ಶನಿಕತೆಯ ಅರಿವು ಇವತ್ತಿನ ಸಮಾಜಕ್ಕೆ ಬಹು ಅಗತ್ಯ ಹಾಗೂ ಅನಿವಾರ್ಯವೆನಿಸುತ್ತದೆ. ಭಾರತದಲ್ಲಿ ಎಲ್ಲಾ ಭಾಷೆಯ ಹಾಗೂ ಧರ್ಮ-ಜಾತಿಯ ಜನರಿದ್ದಾರೆ.

ಒಬ್ಬರಿಗೂ ಮತ್ತೊಬ್ಬರಿಗೂ ಒಂದು ರೀತಿಯ ಅವ್ಯಕ್ತ ಹಾಗೂ ವ್ಯಕ್ತ ಸಂಬಂಧಗಳಿವೆ. ಇದೊಂದು ರೀತಿಯ ಸರಪಳಿಯ ಸಂಬಂಧವಾಗಿದೆ. ಇವತ್ತಿನ ಭಾರತೀಯ ಸಮಾಜ ಈ ಸರಪಳಿಯ ಕೊಂಡಿಯನ್ನು ಇಡಿಯಾಗಿ ಒಂದು ಧರ್ಮದಡಿಯಲ್ಲಿ ವ್ಯಾಕ್ಯನಿಸಲು ಹೊರಟಿರುವುದು ಅದಕ್ಕೆ ಆಳುವ ಸರ್ಕಾರದ ಬೆಂಬೆಲವಿರುವುದು ಅತ್ಯಂತ ನೋವಿನ ಸಂಗತಿ. ಕೆಳವರ್ಗದ ಸಮುದಾಯಗಳು ಅತ್ಯಂತ ಭಯದ ವಾತವರಣದಲ್ಲಿ ಬದುಕುತ್ತಿವೆ, ಇದನ್ನು ಪ್ರಶ್ನಿಸುವ ಬುದ್ದಿಜೀವಿಗಳಿಗೆ ನಗರದ ನಕ್ಸಲೇಟ್ ಪಟ್ಟಕಟ್ಟಿ ಕೊಲ್ಲಲಾಗುತ್ತಿದೆ.ಇಂತಹ ಕೊಲೆಗಳು ನಮ್ಮ ಮಹಾಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ನೆಡೆದುಹೋಗಿವೆ. ಅದು ‘ಶಂಬೂಕನ’ ರೂಪದಲ್ಲಿ, ‘ಏಕಲವ್ಯನ’ ರೂಪದಲ್ಲಿ , ಆದ್ರೆ ಕುವೆಂಪು ತಮ್ಮ ಕಾವ್ಯಶಕ್ತಿಯ ಮೂಲಕ ಅದನ್ನು ವರ್ತಮಾನದ ಅವಶ್ಯಕತೆಗೆ ಒಗ್ಗಿಸುತ್ತಾರೆ.ತಮ್ಮ ‘ಶೂದ್ರ ತಪಸ್ವಿ’ ನಾಟಕದಲ್ಲಿ ಒಬ್ಬ ಶೂದ್ರನನ್ನ ಕೂಡ ಮಹಾ ತಪಸ್ವಿಯಾಗಿ ಚಿತ್ರಿಸುವ ಕುವೆಂಪು ಇವತ್ತಿನ ಸಮಾಜ ಕಾಣಬೇಕಾದ ಕಾಣ್ಕಿಯನ್ನು ನೀಡಿದ್ದಾರೆ.

ನವೀಕರಣಗೊಳ್ಳುತ್ತಿರುವ ಭಾರತೀಯ ಸಮಾಜದಲ್ಲಿ ಧರ್ಮ-ಜಾತಿ, ಪ್ರಾಣಿ-ಪಕ್ಷಿಗಳನ್ನ ಇಟ್ಟುಕೊಂಡು ಸಂವಿಧಾನದ ಮೂಲತತ್ವವಾದ ಜಾತೀಯತೆಗೆ ಭಂಗವುಂಟು ಮಾಡಲಾಗುತ್ತಿದೆ. ಇಂತವುಗಳನ್ನೇ ಕುರಿತು ಕುವೆಂಪು ಬರೆದದ್ದು “ಯಾವ ಶಾಸ್ತ್ರ ಪುರಾಣ ಹೇಳಿದರೇನು ಎದೆಯ ದನಿಗೂ ಮಿಗಿಲಾದ ಶಾಸ್ತ್ರ ಇಹುದೇನು?”. ಹೌದು ನಾವು ಮನಷ್ಯನಲ್ಲಿ ಮಾನವೀಯತೆಯನ್ನು ಹಾಗೂ ಪ್ರೀತಿಯ ನೆಲೆಯನ್ನು ಹುಡುಕಬೇಕೆ ವಿನಹಃ  ಬೇರೆಯೇನು ಅಲ್ಲಾ.

ನಮ್ಮಲ್ಲಿ ಇರುವ ಬಹು ಮುಖ್ಯ ಸಮ್ಯಸ್ಯೆಗಳನ್ನು ಕುವೆಂಪು ತುಂಬಾ ಚೆನ್ನಾಗಿಯೆ ಅರಿತಿದ್ದರು. ನಾವು ಧರ್ಮ, ಜಾತಿ, ದೇವರಗಳ ವಿಷಯವಾಗಿನೆ ಯುದ್ದದಲ್ಲಿ ತೊಡಗಿದ್ದೇವೆ. ಇವತ್ತಿನ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು ಅವುಗಳಿಗೆ ಗೊಬ್ಬರಹಾಕಿ ಬೆಳೆಸುತ್ತಿವಿ. ಅದು ನಮ್ಮಲ್ಲಿ ಮಾನಸಿಕ ಯುದ್ದಕ್ಕೆ ಪ್ರಚೋದನೆಯನ್ನು ನೀಡುತ್ತದೆ.‌

ಇವುಗಳಿಂದ ಹೊರಬರುವುದು ಹೇಗೆ ಎನ್ನುವ ಪ್ರಶ್ನೆಗೆ ಕುವೆಂಪುರವರ “ನೂರು ದೇವರಗಳನ್ನು ನೂಕಾಚೆ ದೂರ ಭಾರತಾಂಬೆಯನ್ನು ಪೂಜಿಸುವ ಭಾರ” ಹಾಗೂ ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು  ಹೊರಬನ್ನಿ” ಎನ್ನುವ ಕವಿತೆಗಳು ಉತ್ತರವನ್ನ ನೀಡುತ್ತವೆ. ನಾವು ರಾಷ್ಟ್ರೀಯ ನೆಲೆಯಲ್ಲಿ ಒಗ್ಗೂಡಬೇಕೇ ವಿನಹಃ ಧರ್ಮದ ಹೆಸರಿನಲ್ಲಿ ಅಲ್ಲಾ ಎನ್ನುವ ಮಾರ್ಮಿಕತೆ ಅಲ್ಲಿದೆ.

ಯುದ್ಧ ಈಗ ಪ್ರಪಂಚದ ಅನನ್ಯತೆಯ ಸ್ವರೂಪದ ಹೆಮ್ಮೆಯಂತೆ, ಆದರ್ಶದಂತೆ, ರೂಪುಗೊಳ್ಳುತ್ತಿರುವುದು ಪ್ರತಿದೇಶಗಳು ಇದನ್ನ ಅನುಕರಿಸುತ್ತಿವೆ. ಆದರೆ ಯುದ್ಧದ ಭಯಾನಕತೆಯನ್ನು ಕುವೆಂಪು ತಮ್ಮ  ‘ಸ್ಮಶಾನ ಕುರುಕ್ಷೇತ್ರ’ ನಾಟಕದಲ್ಲಿ, ವಸ್ತುನಿಷ್ಟವಾಗಿ ಚರ್ಚಿಸಿದ್ದಾರೆ. ಇವತ್ತಿನ ಯುವ ಸಮುದಾಯ ಪೇಸ್ಬುಕ್, ವಾಟ್ಸ್ ಆಪ್ ಗಳಲ್ಲಿ ಮುಳುಗಿದ್ದು ವಿಚಾರಹೀನವಾಗಿ ಬದುಕುತ್ತಿದ್ದಾರೆ. ಅವರಿಲ್ಲಿರುವ ಅಂತಶಕ್ತಿಯನ್ನು ಬಡಿದೆಬ್ಬಿಸುವ ಕೆಲಸವನ್ನು ಕುವೆಂಪು ‘ಆತ್ಮ ಶ್ರಿಗಾಗಿ ನಿರಕುಂಶಮತಿಗಳಾಗಿ’ ಎನ್ನುವ ಅವರ ವಿದ್ವಪೂರ್ಣ ಬರಹ ಗ್ರಂಥದಲ್ಲಿ ಮಾಡಿದ್ದಾರೆ.  ಬಹುಶಃ ಅವರ ಈ ಮಾತು ಬುದ್ಧನ ಮಾತುಗಳಾದ  ” ನಾನು ಹೇಳಿದೆ ಎಂದು ಒಪ್ಪಬೇಡ,ಶಾಸ್ತ್ರಗಳು ಹೇಳಿದ ಕಾರಣಕ್ಕೆ ಒಪ್ಪಬೇಡ,ನಿನ್ನನ್ನೂ ನೀನು ಕೇಳಿಕೊ ಎನ್ನುವ ಮಾತುಗಳನ್ನು ನೆನಪಿಸುತ್ತದೆ’. ಕುವೆಂಪು ತಮ್ಮ ಸಾಹಿತ್ಯವನ್ನು ಕಲಾ ಅಸ್ವಾದನೆಗೂ ಬಳಸಿದರು ಹಾಗೂ ಅದನ್ನು ಒಂದು ರಾಜಕೀಯ ಹಾಗೂ ಸಾಮಾಜಿಕ ಅಸ್ತ್ರವನ್ನಾಗಿ ಕೂಡ ಬಳಸಿದರು. ಅವರ ‘ಮಲೆಗಳಲ್ಲಿ ಮದುಮಗಳು’ ಎನ್ನುವ ಕೃತಿ ಬಹುಶಃ ಭಾರತೀಯ ಸಂವಿಧಾನದ ಮೂಲ ಆಶಯವಾದ ‘ಜಾತ್ಯಾತೀತ’ ಪರಿಕಲ್ಪನೆಗೆ ಪೂರಕವಾಗಿದೆ. ಅದೊಂದು ಕಾಂದಬರಿಯೂ ಹೌದು ಹಾಗೂ ಮಾನಸ್ತ್ರೀಯ ವಿಶ್ಲೇಷಣೆಯು ಹೌದು.

ದೇಶದ ಯುವಕ-ಯುವತಿಯರು  ತಮ್ಮ ಆದರ್ಶಗಳನ್ನೆಲ್ಲ ಬದಿಗೊತ್ತಿ ಕೊನೆಗೆ  ಮೌಢ್ಯತೆಯೊಂದಿಗೆ ಗತಕಾಲದ ಸಂಪ್ರದಾಯಗಳಿಗೆ ಒಳಗಾಗುವುದು ವಿವಾಹ ಸಂದರ್ಭದಲ್ಲೇ ಎಂದು ಕುವೆಂಪುರವರು ಮನಗಂಡಿದ್ದರು. ಇಂತಹ  ಪರಿಸ್ಥಿಗಳನ್ನ ಹೋಗಲಾಡಿಸಿ ದೇಶದ ಯುವಕ-ಯುವತಿಯರಿಗೆ ಮಾದರಿಯಾಗುವಂತ ‘ಮಂತ್ರಮಾಂಗಲ್ಯ’ ಎಂಬ  ಸರಳ ಸುಂದರವಾದ ವಿವಾಹ ಆಚರಣೆಯನ್ನು ಜಾರಿಗೆ ತರುತ್ತಾರೆ.

Notes: ಹೆಚ್ಚಿನ ಲಿರಿಕ್ಸ್ಗಾಗಿ ಕ್ಲಿಕ್ ಮಾಡಿ

ಇದರ ಮುಖ್ಯ ಉದ್ದೇಶ  ನಿಮ್ಮ ಮದುವೆಯನ್ನು ನೀವು ವರದಕ್ಷಿಣೆ ತಗೊಳ್ಳದೆ, ಯಾವ ಶಾಸ್ತ್ರಾಚಾರಗಳಿಗೆ ಕಟ್ಟು ಬೀಳದೆ, ನಿಮ್ಮ ಅಂತಸ್ತಿನ ಪ್ರದರ್ಶನ ಮಾಡಲು ದುಂದುವೆಚ್ಚ ಮಾಡದೆ, ಸರಳವಾಗಿ ಮದುವೆ ಮಾಡಿಕೊಳ್ಳಿ. ಇದರಿಂದ ಏನೋ ತಪ್ಪಾಗುತ್ತದೆ ಎಂಬ ಅಪಹಾಸ್ಯವನ್ನ ಬದಿಗಿಟ್ಟು, ನೀವು ಪ್ರೀತಿಸುವ ನಿಮ್ಮ ಆದರ್ಶಗಳ ಪರವಾಗಿ ನಿಂತು ಈ ಒಂದು ಸಣ್ಣ ಸುಧಾರಣೆಯನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ನೀವು ಊಹಿಸುವ ಭಾರತ ತನಗೆ ತಾನು ಬದಲಾಗುವುದನ್ನ ನೀವೇ ನೋಡುತ್ತೀರಿ.

ಕುವೆಂಪು ತಮ್ಮ ಕೊನೇಯ ದಿನಗಳಲ್ಲಿ ಸ್ಪಟಿಸುತ್ತಿದ್ದ ಮಂತ್ರವೆಂದರೆ ಅದು ವಿಶ್ವಮಾನವ ಸಂದೇಶ. ಪ್ರಪಂಚ ಯುದ್ಧದ  ಗುಂಗಿನಲ್ಲಿದೆ, ಎಲ್ಲಿ ನೋಡಿದರಲ್ಲಿ ಅಣುಬಾಂಬುಗಳ ಪ್ರದರ್ಶನವಾಗುತ್ತಿದೆ. ಕಿವಿಗಳು ಆಲೈಸಿದ ಕಡೆಯೆಲ್ಲ ಸಿಡಿಮದ್ದುಗಳು ರಕ್ತದೋಕುಳಿಯನ್ನ ಕಂಪಿಸುತ್ತಿವೆ. ಇತ್ತ ಮನೆಯಿಂದ ಹೊರಗೆ ಬಂದು ಕಣ್ಣು ಮಿಟುಕಿಸುವುದರೊಳಗೆ ಬೆಂಕಿಯಂತೆ ಹೊತ್ತಿ ಉರಿಯುತ್ತಿರುವ ಧರ್ಮ-ಜಾತಿಗಳ ಕಲಹ, ಸ್ನೇಹಿತರೆ ನಾವು ನೀವೆಲ್ಲರೂ ಇವುಗಳ ಮಧ್ಯೆ ಜೀವಿಸುತ್ತಿದ್ದೇವೆ.

ಇವುಗಳಿಗೆಲ್ಲ ವಿರಾಮ ಹೇಳುವುದಕ್ಕಾಗಿ ಕುವೆಂಪು ವಿಶ್ವಮಾನವ ಸಂದೇಶವನ್ನ ಜಗತ್ತಿಗೆ ಸಾರುತ್ತಾರೆ. ಇವರ ಪಂಚ  ಮಂತ್ರಗಳು  (ಮನುಜಮಥ, ವಿಶ್ವಪಥ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ) ಪಂಪ ಹೇಳುವ ಹಾಗೆ ‘ಮಾನವಕುಲ ತಾನೊಂದೆ ಒಲಂ’ ಎನ್ನುವ ಔದಾರ್ಯ ಗುಣವನ್ನ  ಬೆಳೆಸುತ್ತದೆ. ಮೊದಲು ಈ  ಕೆಲಸ ಮಗು ಹುಟ್ಟಿನಿಂದಲೇ ಆಗಬೇಕಿದೆ.

ಸಮಸಮಾಜದಲ್ಲಿ ವಿಶ್ವಮಾನವತೆಯ ಭೋಧಿಸುವ ಕುವೆಂಪು ಪಠ್ಯಗಳು ಹಾಗೂ ಅವರ ವಿಚಾರಧಾರೆಗಳು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ, ಹಾದಿ-ಬೀದಿಯಲ್ಲಿ ಹರಡಬೇಕು. ಆಗ ತನಗೆ ತಾನೆ ಭಾರತ ಸರ್ವಜನಾಂಗಗಳ ಶಾಂತಿಯ ತೋಟವಾಗಿ ಬದಲಾಗುತ್ತದೆ.ಸರ್ಕಾರಗಳು ಕೂಡ ಕುವೆಂಪು ಜಯಂತಿಯ ನೆಪದಲ್ಲಾದರು ಅವರ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಬೇಕಾಗಿದೆ.

ಅಭಿನಂದನ ಹೆಚ್.ಜೆ

ಕೆ. ಹೊಸಕೊಪ್ಪ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group