ಬೆಳಗಾವಿ -ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಿತ್ತೂರಿನಲ್ಲಿ ಮಾರ್ಚ್ ೧೨ ರಂದು ನಡೆಯಲಿರುವ ಅಮೃತ ಮಹೋತ್ಸವ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನಿಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಅಮೃತ ಮಹೋತ್ಸವ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಮೃತ ಮಹೋತ್ಸವ ಆಚರಣೆಗಾಗಿ ದೇಶದಲ್ಲಿ ೭೫ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು ಕರ್ನಾಟಕದ ಬೆಳಗಾವಿಯ ಕಿತ್ತೂರು ಸೇರಿದೆ ಎಂದರು.
ಈ ಮಹೋತ್ಸವದ ಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಶಾಲಾ ಕಾಲೇಜುಗಳಲ್ಲಿಯೂ ಮಾರ್ಚ್ ೧೨ ರಂದು ಪ್ರಬಂಧ, ಕಲಾ ಪ್ರದರ್ಶನ, ಯೋಗ ಶಿಬಿರಗಳ ಮೂಲಕ ಮಹೋತ್ಸವ ಆಚರಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಸೈಕ್ಲಿಂಗ್ ಹಮ್ಮಿಕೊಳ್ಳಲಾಗಿದ್ದು ಕಿತ್ತೂರಿನಿಂದ ನಂದಗಡದವರೆಗೆ ಸೈಕಲ್ ರ್ಯಾಲಿ ನಡೆಯಲಿದೆ. ಇದರಲ್ಲಿ ೭೫ ಸೈಕ್ಲಿಸ್ಟ್ ಗಳು ಭಾಗವಹಿಸಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸಮಾರಂಭವನ್ನು ವಿಡಿಯೋ ಮೂಲಕ ಉದ್ಘಾಟಿಸಲಿದ್ದು ಎಲ್ಲ ರೀತಿಯಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ಸಭೆಯಲ್ಲಿ ಬೆಳಗಾವಿ ಪಾಲಿಕೆಯ ಆಯುಕ್ತ ಕೆ ಎಚ್ ಜಗದೀಶ, ಡಿಸಿಪಿ ಚಂದ್ರಶೇಖರ ನೀಲಗಾರ, ಬೈಲಹೊಂಗಲ ಎಸಿ ಶಶಿಧರ ಬಗಲಿ ಸೇರಿದಂತೆ ಅನೇಕ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.