ಕವಯಿತ್ರಿ ಆಗಿಬಿಟ್ಟೆ
ಸ್ನೇಹಿತರೆ
ನಾನೂ ಕವಯಿತ್ರಿ ಆಗಬೇಕೆಂದಿದ್ದೆ
ಬೇಗ ಬೇಗನೆ ಮದುವೆ
ಪುಟ್ಟ ಪುಟ್ಟ ಮಕ್ಕಳು
ಅವರ ಪಾಲನೆ.
ಬರೆಯಬೇಕೆಂದಾಗಲೆಲ್ಲ
ಬರೆಯಲಾಗದೆ ನೀರಸ ಮೌನ
ನಮ್ಮವರು ಬಚ್ಚಲಲ್ಲಿ
ಇಳಿದಿದ್ದಾರೆ.
ಅವರಿಗೆ ಕೊಡಬೇಕು
ಬನಿಯನ್ನು ಟವೆಲು ಚಡ್ಡಿ
ಮೊದಲೇ ಕೊಡಲಾಗದ
ನಾನೆಂತ ದಡ್ಡಿ ?
ಶಾಲೆಯ ಮಕ್ಕಳಿಗೆ
ಟಿಫನ್ ಕಟ್ಟಬೇಕು.
ಒಲೆಯ ಮೇಲೆ ಹಾಲು
ಕಿರುಚುತ್ತಿದೆ ಕಾಲಿಂಗ್ ಬೆಲ್ಲು
ಕಟ್ಟಬೇಕಂತೆ
ಇಂದೇ ಕರೆಂಟ್ ಬಿಲ್ಲು
ಇಂದೂ ಕೆಲಸದವಳು
ಕೈ ಕೊಟ್ಟಳು .
ತಿಕ್ಕ ಬೇಕು ಪಗಡೆ ಪಾತ್ರೆ
ತೊಳೆಯಬೇಕು ಬಟ್ಟೆ
ಒರೆಸಬೇಕು ನೆಲದ ಕಟ್ಟೆ .
ಚಹಾ ತಡವಾದರೆ
ಯಜಮಾನರ ಗುಡುಗು
ವರ್ಣಿಸಬೇಕೆಂದಿದ್ದೆ
ಭೂಮಿ ನೆಲ ಜಲ
ಕೈ ಮಾಡಿ ಕರೆಯುತಿದೆ
ಮಧ್ಯಾಹ್ನದ ಅಡಿಗೆ .
ನಾಳೆಯ ಹಬ್ಬ
ಬಣ್ಣ ಬಣ್ಣದ ಉಡಿಗೆ
ಹಬ್ಬ ಹರಿದಿನ ಶೃಂಗಾರ
ಮೈ ತುಂಬಾ
ಬಂಗಾರದ ತೊಡಿಗೆ
ಟಿವಿಯಲ್ಲಿ ಅಡುಗೆ ನಳಪಾಕ
ಮಕ್ಕಳ ಹೋಂ ವರ್ಕ
ಪತಿರಾಯನ ಬಟ್ಟೆಗೆ ಇಸ್ತ್ರಿ .
ಅಪ್ಪ ಅಮ್ಮನ
ಫೋನ್ ಔಷಧಿಗೆ ಕಾಸಿಲ್ಲ
ವಿಧುರ ಮಾವನ ಆರೋಗ್ಯ
ಕರುಣೆ ಕಳಕಳಿ
ಮಕ್ಕಳ ಶಾಲೆಯ
ಫೀ ಕಟ್ಟಿಲ್ಲ ಶಿಕ್ಷಕರ ಪಟ್ಟು .
ಬಾಡಿಗೆ ಕೊಟ್ಟಿಲ್ಲ
ಮಾಲಕನ ಸಿಟ್ಟು
ಮನೆಯೊಡೆಯ ಹೇಳಿದ
ಬೇಗ ಹಣ ಕಟ್ಟು
ತರಕಾರಿಯ ಬೆಲೆ ಆಗಸಕೆ
ಆದರೂ ಕುಚ್ಚಬೇಕು
ಹಸಿದ ಪತಿ ಕಂದಮ್ಮಗಳಿಗೆ
ರಾತ್ರಿಯಾದರೆ ಸಾಕು
ನಮ್ಮವರ ಗೊರಕೆ
ಬೆಳಿಗ್ಗೆ ಹಿಡಿಯಬೇಕು
ಕೈಯಲ್ಲಿ ಪೊರಕೆ .
ಕವಿಗೋಷ್ಠಿಯಲ್ಲಿ
ನನ್ನ ಹೆಸರು
ಎಲ್ಲಿಲ್ಲದ ಸಂತಸ ಹೆಮ್ಮೆ .
ಸಿಟಿ ಬಸ್ಸು ಬಂದಿಲ್ಲ
ಆಟೋ ಚಾಲಕನ ಬೇಡಿಕೆ
ಏನೋ ಕೂತು ಬಿಟ್ಟೆ
ಕವನ ಬರೆದು
ಹಸಿ ಬಿಸಿ ರೊಟ್ಟಿಯಂತೆ
ಕವಯಿತ್ರಿ ಆಗಬೇಕೆಂದಿದ್ದೆ
ಗುಂಡಿ ತೆಗ್ಗಿನಲಿ ಎಗರಿ
ಮುಟ್ಟಿದೆ
ಕವಿಗೋಷ್ಠಿಯ ಮೇಳದಲ್ಲಿ
ಎದ್ದು ಹೋಗಬೇಡಿ
ಕವಿಗಳೇ ಗೆಳೆಯರೇ
ಬಂಧುಗಳೇ .
ಚಪ್ಪಾಳೆ ತಟ್ಟದಿದ್ದರೂ
ಬಹುಮಾನ
ಕೊಡದಿದ್ದರೂ ಸರಿ
ಓದಿ ಮುಗಿಸುವೆ
ನನ್ನ ಕವನವ ಕೇಳುವ
ಸಂಯಮ ನಿಮಗಿರಲಿ
ಏನು ಮಾಡಲಿ ಹೇಳಿ
ನಾನೂ ಕವಯಿತ್ರಿ
ಆಗಬೇಕೆಂದಿರುವೆ.
ಮನು ಮಹರ್ಷಿ
ಹೇಳಿದ ನೆನಪು
ನ ಸ್ತ್ರೀ ಸ್ವಾತಂತ್ರ್ಯ ಅರ್ಹ
ಒಳಗೊಳಗೇ ನಕ್ಕು ಬಿಟ್ಟೆ
ಪ್ರೊ ವಿಜಯಲಕ್ಷ್ಮಿಪುಟ್ಟಿ ಬೆಳಗಾವಿ