Homeಕವನಗಜಲ್ ಗಳು

ಗಜಲ್ ಗಳು

ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ……

ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ

ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ

ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸುತ ದಿನ ದೂಡುವದನು ನೋಡದಾಗಿದೆ

ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ
ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ

ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ
ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ.

ರೇಷ್ಮಾ ಕಂದಕೂರ
ಶಿಕ್ಷಕಿ ಸಿಂಧನೂರ


ಗಜಲ್

ಆ ಮಳೆಗೆ ಕನಸುಗಳು ಕುಡಿ ಒಡೆಯಬಹುದೆಂದು ಕಾಯುತಿರುವೆ
ಮೊಳಕೆ ಗಿಡವಾಗಿ ಹೂ-ಹಣ್ಣು ಬಿಡಬಹುದೆಂದು ಕಾಯುತಿರುವೆ

ನಿತ್ಯಬದುಕಿನ ಜಂಜಾಟಗಳಿಗೆ ತಂಪೆರೆವ ಸುಖದ ಕಾತರತೆ
ಕಷ್ಟಗಳ ಕೊಳೆ ಕೊಚ್ಚಿ ಹೋಗಬಹುದೆಂದು ಕಾಯುತಿರುವೆ

ದುಃಖ-ದುಮ್ಮಾನಗಳ ತೆಕ್ಕೆಗೆ ಹಾಕಿಕೊಂಡು ಸಾಗುವ ನಿರೀಕ್ಷೆ
ನದಿ-ಕಡಲು ಸೇರಿ ಸಮಾಧಾನ ತರಬಹುದೆಂದು ಕಾಯುತಿರುವೆ

ಸೋನೆಮಳೆಗೆ ಎದೆಯೊಳಗೆ ಹಕ್ಕಿಗಳು ಗೂಡುಕಟ್ಟುವ ತವಕ
ಹೃದಯ ಕೋಗಿಲೆ ಇಂಪಾಗಿ ಉಲಿಯಬಹುದೆಂದು ಕಾಯುತಿರುವೆ

ಮಧುಮಾಸದುತ್ಸಾಹ ಉಸಿರುಸಿರಲಿ ತುಂಬಿ ಉಲ್ಲಾಸಗೊಂಡತೆ `ಗಿರಿ’
ಬಂಜರೆದೆ ಹದಗೊಂಡು ನಾಳೆಗೆ ಅರಳಬಹುದೆಂದು ಕಾಯುತಿರುವೆ

ಮಂಡಲಗಿರಿ ಪ್ರಸನ್ನ ರಾಯಚೂರು

RELATED ARTICLES

Most Popular

error: Content is protected !!
Join WhatsApp Group