Homeಕವನಮಕ್ಕಳ ಕಥನ ಕಾವ್ಯ

ಮಕ್ಕಳ ಕಥನ ಕಾವ್ಯ

ಮಕ್ಕಳ ಕಥನ ಕಾವ್ಯ

ಮಾಡಿದ ತಪ್ಪನು ನೆನೆದು

ಆವಾಗ ನಾನು ಚಿಕ್ಕವ

ಮಳೆ ಚಳಿ ಲೆಕ್ಕಿಸದೆ

ಹೊಳೆ ಹಳ್ಳ ಈಜಾಡಿ

ಆಡು ಪಾಡುವ ಜೀವ

ಗುಡ್ಡ ಗವಾರ ತಿರುಗಿದವ

ಗಿಡ ಗಂಟೆ ಏರಿದವ

ಜೇನ ರುಚಿ ಸವಿದವ

ಬಾಲ ಲೋಕದಲಿ

ನನ್ನ ನಾನೇ ಮರೆತವ

ಹುಂಬ ಭಾವ

ಹಲವು ನಿಲುವ

ಮನಸು ಹರಿದಡೆ

ಹೂಗನಸು ಕಾಣೋ ಜೀವ

ಆವಾಗ ನಾನು ಚಿಕ್ಕವ

ಹುಚ್ಚುಚ್ಚು ಭಾಷೆಯಲಿ

ಬಗರಿ ಗಿಚ್ಚಾಡುತ

ವಿಕಾರದಿ ನಗುತಲಿ

ಹಸಿವು ತವಕ ನೀಗುತ

ಹುಸಿಯ ಬಯಕೆ ತೇಲುತ

ಮೃದು ಮಾತಿನಲಿ

ಅಪ್ಪನು ಕರೆದನಂದು

ಎತ್ತುಗಳ ಮೇಯಿಸಲು

ಸರದಿಯು ನಿಂದು

ಅಡಿಗಡಿಗೆ ಹುಷಾರು ಎಂದು

ಗುಲಿಕಿದವು ಜೇಬಲಿ

ಬಗರಿ ಗೋಲಿ ಗಜುಗ

ಜಾಳಿಗೆ ಜಯದ ಭೇರಿ

ಎತ್ತುಗಳ ಜೊತೆ ನಾನೊಬ್ಬ

ಸವಾರಿಯಂತೆನಗದು ಹಬ್ಬ

ನಲಿದುಲಿದು ಬೆಡಗಿನಲಿ

ಎತ್ತಿಡಿದೆ ಬುತ್ತಿಯನು

ಎತ್ತುಗಳ ಮೈದಡವಿ

ಬಾರಕೋಲು ಸೊಬಗಿನಲಿ

ಹೆಗಲೇರಿತು ಗತ್ತಿನಲಿ

ತಂಬೆಳಗು ಗಾವು

ತೊರೆದಿರೆ ಬಿಗುವು

ಎಳೆಗಾಳಿಯೊಡಗೂಡಿ

ಎತ್ತುಗಳು-

ಹಿರಿದಿರಿದು ನೆಂಬಲು

ತಪ್ಪಡಿಗೆ ಮೇವು

ಮೋಡದ ಮರೆಯೊಳಗೆ

ರವಿ ಬರೆ ನೆತ್ತಿಗೆ

ಹಸಿವು ಭಾವ ಹುಟ್ಟಿ

ಕನವರಿಕೆ ನಡುವೆ

ನುರಿತವು ರೊಟ್ಟಿ

ಗಾವುದ ದೂರ

ತಲೆ ಎತ್ತದೆ

ಹದ್ದು ಬಸ್ತಿನಲಿ

ನೆಮ್ಮುತ ಮುದದಿ

ಮೇಯುತಿದ್ದವು

ಎತ್ತುಗಳು

ಬದುವಿನ ಎದೆಯಲಿ

ಗೌಡನ ಸಿರಿ ಶಿಖರ

ಎಡ ಬಲ ಸಡಗರ

ತೊಡಿಸಿದ ಬುವಿಗೆ

ಹಸಿರ ಛತ್ರಿಯಾಕಾರ

ಬೆಳೆದು ನಿಂತಿದೆ ಹೊಲವು

ಎಳೆತನದ ಬೆಳೆಯು

ಹಸಿರು ಕಳೆ ಮೈದಾಳಿ

ಹರೆಯ ಬರುತಿದೆ

ಗೌಡನೊಲದ ಚೆಲುವು

ಗೌಡನ ಮೀಸೆಯಂತೆ

ನಿಚ್ಚಳ ಬಿರಸು

ಹಣಹಣಕಿಸಿ ಮುಸುಕು

ಕೆಣಕೆಣಕಿಸುವ ಕಣ್ಣಸಿವು

ಹಸಿರೊದ್ದ ಬೆಳಸು

ಬಳಿಕ -ನಾನು

ಜಾಳಿಗೆ ತೆಗೆದು

ಬಗರಿಗೆ ಸುತ್ತಿ

ಬಗೆಯಲಿ ನೆಗೆದು

ಆಟದಲಿ ಮುಳುಗಿದೆ

ಅದೆಷ್ಟೋ ಹೊತ್ತು

ಆಡಿ ಪಾಡಿದ ನೆಲವು

ಕೂಗಿ ಬೀಗಿದ ಗೆಲವು

ಅರಿವು ಮರುಳಾಗಿ

ಅರಳು ಮರವು

ದಿಗ್ಗನೆದ್ದು ನೋಡಿದೆ

ಲಗ್ಗೆ-ಸುಲಿಗೆ

ಒಂದೇ ಉಸಿರಿಗೆ

ದಗ್ಗಧೂಳಿ ಮೇಯಲು

ಗೌಡನ ಹೊಲದೊಳು

ಎದ್ದೆನೋ…ಬಿದ್ದೆನೋ.

ಭಯದಿ ಬೆಂದೋಡಿ

ಎತ್ತುಗಳಿತ್ತ ತಿರುವಲು

ಕತ್ತನೆತ್ತಿ ನೋಡಿದೆ

ಕೂಗಳತೆ ದೂರದಿ ಭೂತ!

ಸತ್ತೆನೋ..ಸತ್ತೆನು

ಹವನ ಹೋಮ ಮಾಡುವ

ನರ ನೂಲು ಒಸೆದು

ಮರಕೆ ನೇತಾಕುವ

ಗೌಡನಿವತ್ತು ಉಳಿಸನು

ಶಂಕೆ ಬರದಂತೆ

ಬಾಯಾರಿದಂತೆನಿಸಿ

ಮೈ ಕೈಗೆ ಮೆತ್ತಿದೆ ಕೆಸರುನು

ಪಾತಾಳಕ್ಕಿಳಿದಂತೆ

ಪಾಪಸಕಳ್ಳಿಗೆ ಸಿಕ್ಕಂತೆ

ನಟಿಸಿದೆ

ಭಸ್ಮಾಸುರ ತೆರದಿ ಉರಿದು

ಒಳಗೊಳಗೆ ಕುದಿದು

ಎಡಬಿಡದೆ ಗೌಡನು

ಹಲ್ಲನು ಕಡಿಯುತ

ಮತ್ತೇರಿ ಬಂದನು

ಯವ್ವೋ..ಯಪ್ಪೋ..?

ಎನ್ನುತ ನರಳುತ

ಚಿನ್ನಾಟ ತೆಗೆದವು

ಎತ್ತುಗಳು

ಎತ್ತೆತ್ತಿ ಇರಿದು

ಮುಗಿಲ ನೆತ್ತಿಗೆ ತೂರಿದವು

ಮುಖವನು ನೆಲಕಿಟ್ಟು

ಕಣ್ಣೀರ ಕೋಡಿಯರಿಸಿ

ತಲೆವಾಗಿ ಹೊಟ್ಟೆಯಿಡಿದು

ಅತಿ ದುಃಖದಿ ಕ್ಷಮೆ ಬೇಡಿ

ರೋದಿಸುತ ಮಿಡಿದೆನು

ಪುಣ್ಯಾತ್ಮನೆ….!

ಕಾಪಾಡು

ಮಡಿಲೊಳ ತುಂಬಿಕೊ

ಎಂದೆನುತ…..

ದೇಹವನು ಒಡಮುರಿದು

ತಲೆಗೆಡವಿ ಉರುಳಿದೆನು

ಅದೇನೋ..ಎಂತೋ..

ಗೌಡನ ಮೃದುತನ ಬಾದಿಸಿ

ದಾತನಂತೆ ಸೋತನು

ಮಲಗಿಸಿಕೊಂಡನು ಹೆಗಲಿಗೆ

ಜತನದಿ ತತ್ತರಿಸಿ

ಎತ್ತಿಕೊಂಡ ಭರದಲಿ

ಆಹಾ…! ನೋವು ಎಂಬಂತೆ

ಕ್ಷೀಣತನದಿ ನಟಿಸಿದೆ

ಬೆನ್ನನು ಸವರುತ

ದುಮ್ಮಾನದಿ ಮರುಗಿದ

ಜಾಣತನದಿ ಕಪಟಿಗಿವ

ಆಪತ್ತು ತೊಲಗಿತು

ಅರಿತೊ ಅರಿಯದೊ

ಮಾಡಿದಪರಾಧವು ನನ್ನದು

ಆವಾಗ ನಾನು ಚಿಕ್ಕವ

ಮೊನ್ನೆ ತಾನೆ

ಗೌಡನ ನಿಸ್ತೇಜ ಕಣ್ಣು

ಮನ ದಣಿಯದ ಕಳೆಯ

ಎಳೆ ಮಗುವ ಹಾಗೆ

ತಿಳಿ ಮೌನದ ಹೃದಯಿ

ಸಂತಸದಿ ಹೇಳಿದೆನು

ಹೊಲದ ಕಥೆಯ

ಮಾಯವೋ….

ಮೋಹವೋ…..

ಗೊಳ್ಳೆಂದು ನಗು ನಗುತ

ಎಲ್ಲರನೂ ನಗಿಸುತ

ಬಾಲಚಂದ್ರನ ಹೊನಲು ನುಂಗಿ

ಯೋಗ ನಿದ್ರೆ ತಳೆದ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

RELATED ARTICLES

Most Popular

error: Content is protected !!
Join WhatsApp Group