ಮೂಡಲಗಿ: ತಾಲ್ಲೂಕಿನ ಗ್ರಾಮ ಪಂಚಾಯ್ತಿಯ ಚುನಾವಣೆಯ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು ಮೂಡಲಗಿಯಲ್ಲಿಯೇ ಸ್ಥಾಪಿಸಿದ್ದು, ಈ ಬಾರಿ ಗಮನಸೆಳೆಯಿತು.
ಹೊಸ ತಾಲ್ಲೂಕು ನಿರ್ಮಾಣವಾದ ಮೇಲೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮೂಡಲಗಿಯ ತಹಶೀಲ್ದಾರ್ ಕಚೇರಿಯಿಂದ ಯಶಸ್ಸಿಯಾಗಿ ನಡೆಯಿತು. ಸ್ಥಳೀಯ ಎಸ್ಎಸ್ಆರ್ ಕಾಲೇಜಿನಲ್ಲಿ ಚುನಾವಣೆಯ ಸಲಕರಣೆ, ಕಾಗದಪತ್ರಗಳನ್ನು ಸಿಬ್ಬಂದಿಗಳಿಗೆ ವಿತರಿಸುವ ಮತ್ತು ಮರಳಿಪಡೆಯುವ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು ಸ್ಥಾಪಿಸಿದ್ದರು.
ಈ ಹಿಂದೆ ಚುನಾವಣೆಯ ಕರ್ತವ್ಯಕ್ಕಾಗಿ ಮೂಡಲಗಿ ಭಾಗದ ನೂರಾರು ನೌಕರರು ಮೊದಲು ಗೋಕಾಕಗೆ ತೆರಳಿ, ಅಲ್ಲಿಂದ ನಿಯೋಜಿಸಿರುವ ಗ್ರಾಮಗಳ ಮತಗಟ್ಟೆಗಳಿಗೆ ತೆರಳಬೇಕಾಗುತಿತ್ತು.
ಚುನಾವಣೆ ಮುಗಿಸಿಕೊಂಡು ಮರಳಿ ತಮ್ಮೂರಿನ ಮನೆಗಳಿಗೆ ತಲುಪಬೇಕಾದರೆ ರಾತ್ರಿಯಿಡೀ ಕಳೆಯಬೇಕಾಗುತಿತ್ತು. ಇದರಲ್ಲಿ ಸಾಕಷ್ಟು ಮಹಿಳಾ ಸಿಬ್ಬಂದಿಗಳು ಇರುತ್ತಿದ್ದರು. ಹೀಗಾಗಿ ಮೂಡಲಗಿ ಭಾಗದ ಶಿಕ್ಷಕರು ಮತ್ತು ಇತರೆ ನೌಕರರಿಗೆ ಚುನಾವಣೆ ಕರ್ತವ್ಯವೆಂದರೆ ಅತ್ಯಂತ ಕಷ್ಟವಾಗಿತ್ತು. ಮೂಡಲಗಿ ತಹಶೀಲ್ದಾರ್ ಡಿ.ಜಿ. ಮಹಾತ್, ತಾಲ್ಲೂಕಾ ಶಿರಸ್ತೆದಾರ ಶಿವಾನಂದ ಬಬಲಿ ಮತ್ತು ಚುನಾವಣೆಯ ವಿಷಯ ನಿರ್ವಾಹಕ ಪಿ.ಎಸ್. ಕುಂಬಾರ ಅವರು ಈ ಬಾರಿ ಚುನಾವಣೆಯ ಮಸ್ಟರಿಂಗ್ ಕೇಂದ್ರ ಮೂಡಲಗಿಯಲ್ಲಿಯೇ ಮಾಡಬೇಕು ಎನ್ನುವ ಛಲದಿಂದ ಮೂರು ತಿಂಗಳಿನಿಂದ ಪೂರ್ವಸಿದ್ದತೆಯ ಪರಿಶ್ರಮದ ಫಲದಿಂದ ಚುನಾವಣೆಯ ಮಸ್ಟರಿಂಗ್ ಕೇಂದ್ರ ಪ್ರಥಮವಾಗಿ ಮೂಡಲಗಿಯಲ್ಲಿಯೇ ಸ್ಥಾಪನೆಯಾಗಿದೆ.
ಚುನಾವಣೆ ಕರ್ತವ್ಯಕ್ಕೆ ಸ್ಥಳೀಯ ಎಸ್ಎಸ್ಆರ್ ಕಾಲೇಜ ಆವರಣಕ್ಕೆ ಆಗಮಿಸಿದ ಸಿಬ್ಬಂದಿಗಳ ಮೊಗದಲ್ಲಿ ಮಂದಹಾಸವಿತ್ತು. ಡಿಮಸ್ಟರಿಂಗ್ ಕಾರ್ಯವು ಬಹುಬೇಗ ಮುಗಿದಿದ್ದರಿಂದ ಸಿಬ್ಬಂದಿಗಳು ಬಹುಬೇಗನೆ ಮನೆಗಳಿಗೆ ಮರಳುವಂತಾಯಿತು.
‘’ಮೂಡಲಗಿಯಲ್ಲಿ ಮಸ್ಟರಿಂಗ್ ಕೇಂದ್ರ ಮೊದಲ ಬಾರಿ ಮಾಡಿದ್ದರೂ ಅತ್ಯಂತ ಅಚ್ಟುಕಟ್ಟಾಗಿ ಮಾಡಿದ್ದಾರೆ. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯವು ಸುಲಭವಾಗಿತ್ತು. ತಹಶೀಲ್ದಾರ್ ಅವರ ಕಾರ್ಯವು ಶ್ಲಾಘನೀಯವಾಗಿದೆ’’ ಎಂದು ಸ್ಥಳೀಯ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಬಿ.ಸಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಕೇಂದ್ರವಾದ ಮೇಲೆ ಚುನಾವಣೆಯ ಮಸ್ಟರಿಂಗ್ ಕೇಂದ್ರವಾಗಿದ್ದರ ಪರಿಣಾಮ ಇಲ್ಲಿಯ ಹೊಟೆಲ್, ಖಾನಾವಳಿ, ಹಣ್ಣಿನ ವ್ಯಾಪಾರಿಗಳಿಗೆ ವ್ಯಾಪಾರ ಜೋರಾಗಿದ್ದರಿಂದ ತಾಲ್ಲೂಕಿನ ಸ್ಥಾನಮಾನದ ಮಹತ್ವವು ಅನುಭವಕ್ಕೆ ಬಂದಂತಾಗಿದೆ.

ಮತಗಳ ಎಣಿಕೆಗೂ ಎಸ್ಎಸ್ಆರ್ ಕಾಲೇಜಿನಲ್ಲಿ ಸಿದ್ದತೆಗೊಳಿಸಿದ್ದಾರೆ. ತಾಲ್ಲೂಕಿನ 20 ಗ್ರಾಮ ಪಂಚಾಯ್ತಿಗಳಿಗೆ 152 ಮತಗಟ್ಟೆಗಳ ಸ್ಥಾಪನೆ ಹಿಡಿದು ಚುನಾವಣೆಯ ಡಿಮಸ್ಟರಿಂಗ್ವರೆಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದ್ದರಿಂದ ತಾಲ್ಲೂಕಿನ ಮೊದಲ ಚುನಾವಣೆಯು ತಹಶೀಲ್ದಾರ್ ಡಿ.ಜಿ. ಮಹಾತ್ ಅವರ ನೇತೃತ್ವದಲ್ಲಿ ಯಶಸ್ಸಿ ನಿರ್ವಹಣೆಯಾಗಿದೆ.
‘ಮುಂದೆ ಬರುವ ಎಲ್ಲ ಚುನಾವಣೆಗಳ ಪ್ರಕ್ರಿಯೆಗಳು ಮೂಡಲಗಿ ಸ್ಥಳದಲ್ಲಿಯೇ ನಡೆಯುವವು. ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಮೊದಲ ಬಾರಿಗೆ ನಿರ್ವಹಣೆ ಮಾಡಿದ್ದರೂ ಸಹ ಎಲ್ಲಿಯೂ ಲೋಪವಾಗದೆ ಯಶಸ್ಸಿಯಾಗಿದೆ. ಮುಂದಿನ ಚುನಾವಣೆಗಳ ನಿರ್ವಹಣೆಗೆ ಇದು ಮಾದರಿಯಾಗುತ್ತದೆ.
ಯಶಸ್ಸಿಗೆ ತಹಶೀಲ್ದಾರ ಕಚೇರಿಯ ಎಲ್ಲ ಸಿಬ್ಬಂದಿಯ ಪರಿಶ್ರಮ ಇದಕ್ಕೆ ಕಾರಣ’ ಎಂದು ತಹಶೀಲ್ದಾರ್ ಡಿ.ಜಿ. ಮಹಾತ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.