Homeಸುದ್ದಿಗಳುಮೂಡಲಗಿ ಶೈಕ್ಷಣಿಕ ವಲಯ : ೧೨೯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ಮೂಡಲಗಿ ಶೈಕ್ಷಣಿಕ ವಲಯ : ೧೨೯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ಕೂಲಿ ಕಾರ್ಮಿಕನ ಮಗಳು ಐಶ್ವರ್ಯಾ ಮೂರನೇ ರ್ಯಾಂಕ್

ಮೂಡಲಗಿ – ಮೂಡಲಗಿ ವಲಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ಸತ್ಕಾರ ಸಮಾರಂಭವನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರತಿಭಾವಂತ ವಿದ್ಯಾರ್ಥಿನಿ ಕು. ಚಂದ್ರಿಕಾ ಕಸ್ತೂರಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ನಮ್ಮ ವಲಯದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ೬೯೮೧ ಅದರಲ್ಲಿ ೪೫೯೬ ಉತ್ತೀರ್ಣರಾಗಿದ್ದಾರೆ, ಮೂಡಲಗಿ ವಲಯದಲ್ಲಿ ೬೨೫ ಕ್ಕೆ ೬೦೦ ಕ್ಕೂ ಅಧಿಕ ಅಂಕ ಪಡೆದ ೧೨೯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ೮೫ ಕ್ಕೂ ಹೆಚ್ಚು ಜನ ವಿದ್ಯಾರ್ಥಿನಿಯರಿದ್ದಾರೆ. ಶೇ. ೯೨ ಕ್ಕಿಂತ ಹೆಚ್ಚು ಪಡೆದವರು ಮೂಡಲಗಿ ವಲಯದಲ್ಲಿ ೪೮೦ ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ಕಡಿಮೆ ಮಾರ್ಕ್ಸ್ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ದುಃಖ ಪಡಬೇಕಾಗಿಲ್ಲ. ಸರ್ಕಾರ ಅವರಿಗೆ ಎರಡನೇ ಅವಕಾಶ ಕೊಟ್ಟಿದೆ ಎರಡನೇ ಅವಕಾಶದ ಪರೀಕ್ಷೆ ಇದೇ ದಿ. ೨೫ ರಂದು ಇರುತ್ತದೆ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಲ್ಲೋಳಿಯ ಐಶ್ವರ್ಯಾ ಖಾನಟ್ಟಿ ಎಂಬ ವಿದ್ಯಾರ್ಥಿನಿ ೬೨೫ ಕ್ಕೆ ೬೨೩ ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಹಾಗೂ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಚಂದ್ರಿಕ ಕಸ್ತೂರಿ ಎಂಬ ವಿದ್ಯಾರ್ಥಿನಿ ೬೨೨ ಅಂಕ ಪಡೆದಿದ್ದಾಳೆ ಎಂದು ಬಿಇಓ ಹೇಳಿದರು.

ಸಿಡಿಪಿಒ ಎಫ್ ಜಿ ಚಿನ್ನನ್ನವರ ಮಾತನಾಡಿ, ಒಳ್ಳೆಯ ಶಿಕ್ಷಣ ಪಡೆದು ಎಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಅರ್ಥಪೂರ್ಣವಾದ, ಪ್ರಾಮಾಣಿಕ ಜೀವನ ನಡೆಸಬೇಕು ಅಂದಾಗ ಮಾತ್ರ ನೀವು ಕಲಿತ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ಪತ್ರಕರ್ತ ಬಾಲಶೇಖರ ಬಂದಿ ಹಾಗೂ ಸಾಯಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರವೀಣ ಕುಲಗುಡೆ ಅವರು ಮಾತನಾಡಿದರು.

ವೇದಿಕೆಯ ಮೇಲೆ ಪಿಎಸ್ಐ ರಾಜು ಪೂಜೇರಿ, ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಆರ್ ವೈ ಗಂಗರಡ್ಡಿ, ಸಾಯಿ ಕಾಲೇಜಿನ ಅಧ್ಯಕ್ಷ ಪುಲಿಕೇಶ ಸೋನವಾಲಕರ, ತಹಶೀಲ್ದಾರ ಶಿವಾನಂದ ಬಬಲಿ, ತಾ ಪಂ ಕಾರ್ಯ ನಿರ್ವಾಹಕ ಅಧಿಕಾರ ಯಲ್ಲಪ್ಪ ಗದಾಡಿ, ಬಿಆರಸಿ ರೇಣುಕಾ ಆನಿ, ಆರ್ ಡಿ ಎಸ್ ಸಂಯೋಜಕ ಶಿವಾನಂದ ಸತ್ತಿಗೇರಿ ಇದ್ದರು.
ಕರಿಬಸವರಾಜು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group