ಗುಜರಾತ್ ನಲ್ಲಿ ಇಲ್ಲದ್ದು ಕರ್ನಾಟಕದಲ್ಲಿ ಏನಿದೆ ವಿಶೇಷ ?
ನಕಲು ಮಾಡುವ ತಾಣಗಳಾದವೇ ಜಿಲ್ಲೆಯ ನರ್ಸಿಂಗ್ ಕಾಲೇಜುಗಳು ?
ಬೀದರ– ದೇಶದಲ್ಲಿಯೇ ಅತ್ಯಂತ ಅಭಿವೃದ್ಧಿ ಕಂಡಿರುವ ರಾಜ್ಯ ಎನಿಸಿಕೊಂಡಿರುವ, ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್ ನಿಂದ ಸುಮಾರು ೪೦೦ ನರ್ಸಿಂಗ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕರ್ನಾಟಕದ ಬೀದರಗೆ ಆಗಮಿಸಿದ್ದಾರೆ !
ಆಶ್ಚರ್ಯವಾದರೂ ಸತ್ಯವಾದ ಈ ಘಟನೆಯ ಬಗ್ಗೆ ರಾಜ್ಯದ ಆರೋಗ್ಯ ಸಚಿವರು ಮತ್ತು ಶಿಕ್ಷಣ ಸಚಿವರು ಗಮನಹರಿಸಬೇಕಾಗಿದೆ.
ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರತಿಯೊಂದು ಲಾಡ್ಜ್ ಹೌಸ್ ಪುಲ್ ಪುಲ್. ಎಲ್ಲಿ ನೋಡಿದಲ್ಲಿ ಗುಜರಾತ್ ಜನರು ಕಾಣುತ್ತಾರೆ ! ಒಂದು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಪ್ರಮಾಣದಲ್ಲಿ ಬೀದರ ಕಡೆ ಮುಖ ಮಾಡಿರುವುದು ಕುತೂಹಲ ಮೂಡಿಸಿದೆ ಅಲ್ಲದೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದೆ.
ಜಿಲ್ಲೆಯ ಐದು ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಪಕ ನಕಲು ನಡೆಯುತ್ತಿರುವುದರಿಂದ ದೂರದ ಗುಜರಾತ್ ನಿಂದ ಪರೀಕ್ಷೆ ಬರೆಯಲು ಖರ್ಚು ಮಾಡಿಕೊಂಡು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದ್ದಾರೆ ಎಂಬ ಆರೋಪ ಇದೆ.
ಈ ಬಗ್ಗೆ ಸಮಾಜ ಸೇವಕ ಅವಿನಾಶ್ ದಿನೆ ಹೇಳುವುದು ಹೀಗೆ:
ಗುಜರಾತ್ ನಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರಬೇಕಾದರೆ ಪರೀಕ್ಷೆಯಲ್ಲಿ ನಕಲು ನಡೆಯುವುದು ಒಂದು ಕಾರಣ. ವೈದ್ಯಕೀಯ ವಿದ್ಯಾರ್ಥಿಗಳು ನಕಲು ಮಾಡಿ ಪಾಸಾಗಿ ರೋಗಿಗಳಿಗೆ ಸರಿಯಾದ ಔಷಧ ಕೊಡಲು ಹೇಗೆ ಸಾಧ್ಯ ? ಮೊದಲು ರಾಜ್ಯ ಸರ್ಕಾರ ಈ ನಕಲನ್ನು ತಡೆಯಬೇಕು ಎನ್ನುತ್ತಾರೆ.
ನರ್ಸಿಂಗ್ ಸ್ನಾತಕೋತ್ತರ ಪರೀಕ್ಷೆ ಬರೆಯಲು ಹೊರ ರಾಜ್ಯದ ನಾಲ್ಕು ನೂರು ವಿದ್ಯಾರ್ಥಿ ಬೀದರ ಜಿಲ್ಲೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಲಾಡ್ಜ್ ಹೌಸ್ ಫುಲ್ ಆಗಿ ಸ್ಥಳೀಯರು ಪರದಾಡುವಂತಾಗಿದೆ.
ದಿನಾಲು ಕಾಲೇಜ್ ಹಾಜರಾಗದೆ ಇವರು ಪರೀಕ್ಷೆ ಬರೆಯಲು ಬಂದಿದ್ದಾರೆ ಎನ್ನಲಾಗಿದ್ದು ಬೀದರ್ ನಲ್ಲಿ ನಕಲು ಮಾಡಿ ಪಾಸ್ ಆದಮೇಲೆ ರೋಗಿಗಳಿಗೆ ಚಿಕಿತ್ಸೆ ಹೇಗೆ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇನ್ನು ಜಿಲ್ಲಾಡಳಿತದ ಗಮನಕ್ಕೆ ಬರದೆ ಬೀದರ ನಲ್ಲಿ ಪರೀಕ್ಷೆ ನಡೆಯಲು ಸಾಧ್ಯವಿಲ್ಲ.ಜಿಲ್ಲಾಡಳಿತ ಕೂಡ ಪರೀಕ್ಷಾ ನಕಲಿನಲ್ಲಿ ಭಾಗಿಯಾಗಿದೆಯೆಂಬುದಾಗಿ ಕನ್ನಡ ಸಮರ ಸೇನೆಯಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಆದರೂ ಈ ಸಾಮೂಹಿಕ ನಕಲು ತಡೆಯಲು ಸಾಧ್ಯವಾಗುವುದಿಲ್ಲ.
ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನರ್ಸಿಂಗ್ ಪರೀಕ್ಷೆ ಸುಧಾರಣೆ ಮಾಡುತ್ತವೋ ಅಥವಾ ಸರ್ಟಿಫಿಕೇಟ್ ತೆಗೆದುಕೊಂಡು ಕೆಲಸಕ್ಕೆ ಸೇರಿಕೊಂಡು ರೋಗಿಗಳ ಜೀವದ ಜೊತೆ ಚಲಾಟ ಆಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ