ಮೂಡಲಗಿ: ಮೂರನೇ ಅಲೆಯ ಆತಂಕದ ನಡುವೆ ಕಳೆದ ಎರಡು ವರ್ಷದಿಂದ ಸ್ಥಗಿತಕೊಂಡಿರುವ ಪ್ರಾಥಮಿಕ ಶಾಲೆಗಳು ಕ್ರಮೇಣವಾಗಿ ಪ್ರಾರಂಭವಾಗುತ್ತಿದ್ದು, ಶಿಕ್ಷಕರಿಗೆ, ಮಕ್ಕಳಿಗೆ ಹಾಗೂ ಪಾಲಕರ ಮುಖದಲ್ಲಿ ಸಂತಸದ ಛಾಯೆ ಮೂಡಿದೆ ಎಂದು ಪತ್ರಕರ್ತ ಮಲ್ಲು ಬೋಳನವರ ಹೇಳಿದರು.
ಸೋಮವಾರದಂದು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ 6ರಿಂದ 7ನೇ ತರಗತಿಯ ಶಾಲಾ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಶ್ರೀ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ಒಂದೆರಡು ವರ್ಷ ಜಗತ್ತಿಗೆ ಆರ್ಥಿಕ ಹಿಂಜರಿತವನ್ನಷ್ಟೇ ನೀಡಿಲ್ಲ. ಬದಲಿಗೆ ದೀರ್ಘಕಾಲಿಕ ಸಮಸ್ಯೆಗಳನ್ನು ತಂದೊಡ್ಡಿದರಿಂದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಕಂಡುಬoದಿದೆ.
ಲಾಕ್ಡೌನ್ ಅವಧಿಯಲ್ಲಿ ಆನ್ಲೈನ್ ಶಿಕ್ಷಣ ಆರಂಭವಾದರೂ ಅನೇಕ ಮಕ್ಕಳಿಗೆ ಅದು ಸಂತಸ ನೀಡಿಲ್ಲ. ಆಟೋಟಗಳಲ್ಲಿ, ಸ್ನೇಹಿತರ ಜೊತೆಗೆ ನೆಮ್ಮದಿ ಕಾಣುತ್ತಿದ್ದ ಮಕ್ಕಳಿಗೆ ಓದು-ಬರಹದಿಂದ ದೂರವುಳಿದು, ಕೂಲಿ ಕಾರ್ಮಿಕರಾಗಿ ಬದಲಾಗಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ಗ್ರಾಮೀಣ ಪ್ರದೇಶಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ ಎಂದರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ಪರಸನ್ನವರ ಮಾತನಾಡಿ, ಒಂದುವರೆ ವರ್ಷದ ನಂತರ 6ನೇ ತರಗತಿಯ ನಂತರದ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿರುವುದರಿಂದ ಶಿಕ್ಷಕ ವೃಂದಕ್ಕೆ ಖುಷಿ ಸಂಗತಿಯಾದರೂ ಮಕ್ಕಳನ್ನು ಮೊದಲಿನಂತೆ ಶಿಕ್ಷಣದಲ್ಲಿ ತೊಡಗಿಸುವುದರಲ್ಲಿ ಶಿಕ್ಷಕರ ಪಾತ್ರ ಬಹಳವಾಗಿದೆ ಎಂದರು.
ಶಾಲೆಯನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಿ, ಶಾಲೆಯನ್ನು ತಳಿರು ತೋರಣದಿಂದ ಶೃಂಗರಿಸಿ, ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕಿಯರಿಂದ ಆರತಿ ಮಾಡುವ ಮೂಲಕ ವಿದ್ಯಾರ್ಥಿನಿಯರನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಚ್. ಹುಲ್ಯಾಳ. ಪತ್ರಕರ್ತ ಭೀಮಶಿ ತಳವಾರ, ಶಿಕ್ಷಕಿಯರಾದ ಡಿ.ಎ.ಹದ್ಲಿ, ವ್ಹಿ.ಎಸ್. ಹಳಸಿ, ಆರ್.ಎ. ದೊಡಮನಿ, ಎಸ್.ಎಸ್. ಕಮ್ಮಾರ, ಎಸ್.ಬಿ. ಜಕಾತಿ ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.