ಬೆಳಗಾವಿ – ಇದೊಂದು ಅಕ್ಷರಶಃ ನಂಬಿಕೆ ದ್ರೋಹದ ಕಥೆ. ಐದು ವರ್ಷಗಳಿಂದ ಅನ್ನ ಹಾಕಿದ್ದ ಧಣಿಯ ಮನೆಗೆ ಕನ್ನ ಹಾಕಿದ ದ್ರೋಹಿಗಳು ರಾತ್ರೋ ರಾತ್ರಿ ೨ ಕಿಲೋ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದಾರೆ. ಇದರೊಂದಿಗೆ ಯಾವ ಹುತ್ತದಲ್ಲಿ ಯಾವ ಹಾವೋ ಎಂಬ ಸಂದೇಹ ಬಲವಾಗಿದೆ.
ಬೆಳಗಾವಿಯ ಪ್ರಸಿದ್ಧ ಆಭರಣ ವ್ಯಾಪಾರಿ ಪರ್ಲ್ ಜುವೆಲ್ಲರ್ಸ್ ನ ಕಮಲ ಲಾಲ್ ಚಂದ್ ಅವರು ತಮ್ಮಲ್ಲಿಯೇ ಕೆಲಸಕ್ಕಿದ್ದವರಿಗೆ ಆಭರಣ ತಯಾರಿಸಿಕೊಡಲು ೨ ಕೆಜಿಯಷ್ಟು ಚಿನ್ನ ನೀಡಿದ್ದರು. ಅದರ ಮೌಲ್ಯ ಅಂದಾಜು ಒಂದು ಕೋಟಿ.
ಇಷ್ಟು ದಿನ ಸಾಚಾಗಳಂತೆ ಮುಖವಾಡ ಧರಿಸಿ ಲಾಲ್ ಚಂದ ಅವರಲ್ಲಿ ಕೆಲಸ ಮಾಡಿಕೊಂಡಿದ್ದ ದ್ರೋಹಿಗಳು ಇಂದು ಒಮ್ಮೆಲೆ ತಮ್ಮ ಬಣ್ಣ ತೋರಿಸಿಕೊಟ್ಟಿದ್ದರು. ರಾತ್ರೊ ರಾತ್ರಿ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದು ನಂಬಿಕೆ ಇಟ್ಟಿದ್ದ ಜುವೆಲ್ಲರಿ ಮಾಲೀಕರು ತಲೆ ಮೇಲೆ ಕೈಹೊತ್ತು ಕೂಡ್ರುವಂತಾಗಿದೆ.
ಮುಂಬೈನಿಂದ ತಂದಿದ್ದ ೨.೧೭೦ ಕೆಜಿ ಚಿನ್ನದ ಗಟ್ಟಿಯನ್ನು ಆಭರಣವನ್ನಾಗಿ ಮಾರ್ಪಡಿಸಲು ಶಹಾಬುದ್ದೀನ್ ಶೇಖ್ ಎಂಬುವವನಿಗೆ ನೀಡಿದ್ದರು. ಆತನ ಜೊತೆ ಸೇರಿದ ಇನ್ಸಾನ್, ಸೂರಜ್ ಹಾಗೂ ಸೈಫ್ ಎಂಬುವವರು ಫೆ. ೧೫ ರಂದು ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಸಮೀಪದ ಯಮಕನಮರಡಿಯಲ್ಲಿ ಚಿನ್ನ ಸಾಗಾಣಿಕೆ ಕುರಿತ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಹಸಿಯಾಗಿರುವಾಗಲೇ ಈ ಪ್ರಕರಣ ನಡೆದಿದ್ದು ಬೆಳಗಾವಿ ಚಿನ್ನದ ಸ್ಮಗ್ಲಿಂಗ್ ಹಬ್ ಆಗುತ್ತಿದೆಯೇ ಎಂಬ ಸೂಚನೆಗಳು ರವಾನೆಯಾಗುತ್ತಿವೆ.