ಬೆಳಗಾವಿ – ಮೊದಲು ಕೇಂದ್ರ ಸರ್ಕಾರ ೫೦ ಕಿ.ಮೀ. ಸ್ಪೀಡ್ ನಲ್ಲಿ ಓಡುತ್ತಿತ್ತು ಈಗ ಅದು ೩೦ ಕಿ. ಮೀ. ಸ್ಪೀಡ್ ನಲ್ಲಿ ಓಡುತ್ತಿದೆ. ಸರ್ಕಾರದ ವೇಗ ಕಡಿಮೆಯಾಗಿದೆ. ಇನ್ನೂ ನಾಲ್ವರು ಮಂತ್ರಿಗಳಾದರೂ ಯಾವುದೇ ಪ್ರಯೋಜನವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಆಡಳಿತ ನಡೆಸುವ ನಾಯಕರಲ್ಲಿಯೇ ಇಚ್ಛಾಶಕ್ತಿ ಇಲ್ಲ. ಪ್ರಧಾನಿಯವರಲ್ಲಿಯೂ ಇಚ್ಛಾಶಕ್ತಿ ಇಲ್ಲ ಇನ್ನು ಕೆಳಗಿನ ನಾಯಕರಲ್ಲಿ ಹೇಗೆ ಬರಬೇಕು ಎಂದರು.
ಕೋವಿಡ್ ನಿರ್ವಹಣೆಯಲ್ಲಿಯೂ ಕೇಂದ್ರ ವಿಫಲವಾಗಿದೆ. ಕೋರ್ಟ್ ಆದೇಶ ಮಾಡಿದ್ದರಿಂದ ನಮಗೆ ೧ ಸಾವಿರ ಟನ್ ಆಮ್ಲಜನಕ ಸಿಕ್ಕಿದೆ ಇಲ್ಲದಿದ್ದರೆ ಸಿಗುತ್ತಿರಲಿಲ್ಲ. ಲಸಿಕೆ ಹಂಚಿಕೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಸತೀಶ ಟೀಕಿಸಿದರು.
ರಾಜ್ಯ ಸರ್ಕಾರ ಕೂಡ ಕೋವಿಡ್ ನಿರ್ವಹಣೆ ಯಲ್ಲಿ ಸೋತಿದೆ. ಮುಖ್ಯಮಂತ್ರಿ ಸೇರಿ ಎಲ್ಲ ಮಂತ್ರಿಗಲೂ ಆಡಳಿತದಲ್ಲಿ ವಿಫಲರಾಗಿದ್ದಾರೆ ಇದನ್ನು ಅವರಿಗೆ ನೆನಪಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ತೈಲ ಬೆಲೆಗಳು ಸಿಕ್ಕಾಪಟ್ಟೆ ಏರುತ್ತಿದ್ದ ಪ್ರತಿಭಟನಾರ್ಥ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಬಾಳ್ಕರ, ಎಐಸಿಸಿ ಗೋವಾ ಸುನೀಲ ಹಣಮನ್ನವರ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಗ್ರಾಮೀಣ ಘಟಕದ ಅಧ್ಯಕ್ಷ ವಿನಯ್ ನಾವಲಗಟ್ಟಿ ಇದ್ದರು