ಬೆಳಗಾವಿ – ಬಳ್ಳಾರಿ ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಜಿ.ಕೆ. ಖಡಬಡಿ ಇವರು ತಮ್ಮ 80ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ನಿವೃತ್ತರಾದ ನಂತರ ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾರಂಭಿಕ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಸದಾ ಕ್ರಿಯಾಶೀಲರಾಗಿದ್ದ ಖಡಬಡಿ ಅವರು ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರು ‘ಪರಿಸರ ಮಿತ್ರ ‘ಎಂಬ ಸಂಘ ಕಟ್ಟಿ ಪರಿಸರದ ರಕ್ಷಣೆ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಕುರಿತಾದ ಅನೇಕ ಪುಸ್ತಕಗಳನ್ನು ಬರೆದಿದ್ದರು. ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಒಳ್ಳೆಯ ಶಿಕ್ಷಕರಾಗಿ ಸಾವಿರಾರು ಮಾದರಿ ಶಿಕ್ಷಕರನ್ನು ತಮ್ಮ ವೃತ್ತಿಯಲ್ಲಿ ತಯಾರಿಸಿದ್ದಾರೆ. ಕಳೆದ ತಿಂಗಳು ಲಾಕ್ ಡೌನ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಹಮ್ಮಿಕೊಂಡ ವೇಬಿನರ್ ಉಪನ್ಯಾಸ ಮಾಲಿಕೆಯಲ್ಲಿ ಪರಿಸರ ಮತ್ತು ಅದನ್ನು ನಿರ್ವಹಿಸುವ ಕ್ರಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಪರಿಸರದ ಬಗೆಗಿನ ಜಾಗೃತಿ ಮೂಡಿಸಿದ್ದನ್ನು ನಾವು ಇಲ್ಲಿ ನೆನಪಿಸಬಹುದು.
ಅದೇ ರೀತಿ ಡಾ. ಖಡಬಡಿ ಅವರು ಪರಿಸರ ಕುರಿತಾದ ಅನೇಕ ಗೀತೆಗಳನ್ನು ಸಹ ರಚಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಿದ್ದರು. ಅವರ ದುಃಖದ ಅಗಲಿಕೆಗೆ ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಕ.ಸಾ.ಪ ಅಧ್ಯಕ್ಷರು, ಸದಸ್ಯರು ಮತ್ತು ಮ.ನ.ರ. ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ನಿರ್ಮಲಾ ಬಟ್ಟಲ, ಬೆಳಗಾವಿ ಜಿಲ್ಲೆಯ ಅನೇಕ ಸಾಹಿತ್ಯಾಸಕ್ತರು, ಪರಿಸರಪ್ರೇಮಿಗಳು ಖಡಬಡಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬವರ್ಗಕ್ಕೆ ದೇವರು ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.