ಇದೇ ದಿ 22 ರಂದು ಕಿತ್ತೂರು ತಾಲೂಕು ಕ.ಸಾ.ಪ ಘಟಕದ ವತಿಯಿಂದ ವೇಬಿನಾರ ಉಪನ್ಯಾಸ ಮಾಲಿಕೆಯ 8ನೇ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕಿತ್ತೂರು ತಾಲೂಕು ಘಟಕ ಅಧ್ಯಕ್ಷರಾದ ಶೇಖರ ಹಲಸಗಿ ಮಾತನಾಡಿ, ಡಾ. ನಂದಿಮಠ ರವರು ಬ್ರಿಟಿಷರು ನೀಡಿದ ಉನ್ನತ ಹುದ್ದೆಯನ್ನು ಧಿಕ್ಕರಿಸಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ತಮ್ಮ ಜೀವ ಸವೆಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ ರವರು ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ ಡಾ. ಶಿ. ಚ. ನಂದಿಮಠ ರವರು ಮಾಡಿದ ಸಾಧನೆಗಳ ಕುರಿತಾಗಿ ಇನ್ನಷ್ಟು ಸಂಶೋಧನೆಗಳು ಆಗಬೇಕಾಗಿದೆ. ಮತ್ತು ಅವರು ಕೈಕೊಂಡ ಮಾದರಿ ಕೆಲಸಗಳನ್ನು ನಾವು ಅಳವಡಿಸುವುದರ ಜೊತೆಗೆ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಡಾ. ರಾಜಶೇಖರ್ ಇಚ್ಚಂಗಿ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಡಾ. ಸ. ಶಿ.ನಂದಿಮಠರ ಕೊಡುಗೆ ಕುರಿತು ಮಾತನಾಡಿದರು. ನಂದಿಮಠರು ವಿಶೇಷವಾಗಿ ಪಾಲಿ ಭಾಷೆಯಲ್ಲಿ ಇದ್ದ ಕೃತಿಯನ್ನು ‘ವೀರಶೈವ ಪತ್ರಿಕೆ’ಯ ಮೂಲಕ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದರು. ವಿವಿಧ ವಿಶೇಷತೆ ಇರುವ ಸಾಹಿತ್ಯದ ಪ್ರಕಾರಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ಬೆಳೆಯಲು ತನ್ನದೇ ಆದ ಕೊಡುಗೆಯನ್ನು ನಂದಿಮಠರು ನೀಡಿದ್ದಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ ಅವರು ಮಾತನಾಡಿ ಡಾ. ಸ. ಶಿ. ನಂದಿಮಠ ರವರು ಶಿಸ್ತು ಮತ್ತು ಸಂಯಮದ ಹರಿಕಾರರಾಗಿ, ದಕ್ಷ ಆಡಳಿತಗಾರರಾಗಿ, ಒಳ್ಳೆಯ ಸಮಾಜ ಸೇವಕರಾಗಿ ಮತ್ತು 1952 ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಒಂದು ಮೈಲುಗಲ್ಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಹೇಮಾ ಸೋನೋಳ್ಳಿ,ಲಲಿತಾ ನಂದಿಮಠ, ಜ್ಯೋತಿ ಬದಾಮಿ, ಎಂ. ಎಸ್. ಹೊಂಗಲ, ವಿಜಯಲಕ್ಷ್ಮಿ ಹೊಂಗಲ್, ಶಬಾನಾ ಅಣ್ಣಿಗೇರಿ, ವೀರಭದ್ರ ಅಂಗಡಿ, ವಿಜಯ ಬಡಿಗೇರ, ಶಿವಾನಂದ ತಲ್ಲೂರ, ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಜರಿದ್ದರು. ಆರಂಭದಲ್ಲಿ ಡಾ. ಮಹಾಂತೇಶ ಉಕ್ಕಲಿ ಸ್ವಾಗತಿಸಿದರು, ಡಾ. ಶೇಖರ ಹಲಸಗಿ ಕಾರ್ಯಕ್ರಮವನ್ನು ಸಂಯೋಜಿಸಿ ನಿರ್ವಹಿಸಿದರು . ಕೊನೆಯಲ್ಲಿ ಎಂ. ವೈ. ಮೆಣಸಿನಕಾಯಿ ವಂದಿಸಿದರು.