ಮುನವಳ್ಳಿಃ “ಸವದತ್ತಿ ತಾಲೂಕಿನ ಗುರುಭವನದ ನಿರ್ಮಾಣದ ಹಿಂದೆ ಬಹುದೊಡ್ಡ ಕನಸಿದೆ. ಅದರ ಚಾಲನೆ ದೊರೆತಾಗ ಹಲವು ಅಡ್ಡಿ ಆತಂಕಗಳು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಅದು ಕೋರ್ಟ ಮೆಟ್ಟಿಲನ್ನು ಏರಿದರೂ ನ್ಯಾಯ ಶಿಕ್ಷಕರ ಪರವಾಗಿದೆ. ಈಗ ಮತ್ತೆ ಕಾಮಗಾರಿ ಪುನರಾರಂಭಗೊಂಡಿದೆ. ನನ್ನ ನಿವೃತ್ತಿಯ ಈ ದಿನಗಳನ್ನು ಗುರುಭವನ ನಿರ್ಮಾಣದ ಕಾಮಗಾರಿಗಳ ಉಸ್ತುವಾರಿಯನ್ನು ವಹಿಸಿಕೊಂಡು ಮುಂಬರುವ ಸೆಪ್ಟೆಂಬರ್ 5 ವೇಳೆಗೆ ಪೂರ್ಣಗೊಳಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುವೆನು” ಎಂದು ನಿವೃತ್ತ ಮುಖ್ಯೋಪಾಧ್ಯಾಯರು ನಿಕಟಪೂರ್ವ ಅಧ್ಯಕ್ಷರೂ ಆಗ ಎಸ್.ವ್ಹಿ.ಬೆಳವಡಿಯವರು ತಿಳಿಸಿದರು.’
ಅವರು ಸಮೀಪದ ತಲ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನಿವೃತ್ತ ಮುಖ್ಯೋಪಾಧ್ಯಾಯರೂ ಹಾಗೂ ಸಂಘದ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿಯವರ ಬೀಳ್ಕೊಡುಗೆ ಮತ್ತು ನೂತನ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರವರ ಸ್ವಾಗತ ಸಮಾರಂಭದಲ್ಲಿ ಸನ್ಮಾನಿತರಾಗಿ ಸನ್ಮಾನ ಪರ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ “ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಘಟನೆ ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸಿದರೆ ಇಲಾಖೆ ಅವುಗಳನ್ನು ಈಡೇರಿಸುವ ಮೂಲಕ ಅದಕ್ಕೆ ಪ್ರತಿಕ್ರಿಯೆಯಾಗಿ ಕಾರ್ಯ ಮಾಡುತ್ತದೆ. ಸಂಘದ ಮೂಲಕ ಬೇಡಿಕೆಗಳನ್ನು ಇಲಾಖೆಗೆ ಸಲ್ಲಿಸಿದಾಗ ಇಲಾಖೆ ಕಾನೂನಿನ ಚೌಕಟ್ಟಿನೊಳಗೆ ಅದಕ್ಕೆ ಸ್ಪಂದಿಸುವುದು. ಈಗ ನೂತನ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರವರು ಬಹಳಷ್ಟು ಕನಸುಗಳನ್ನು ಸಂಘದ ಬೆಳವಣಿಗೆ ಕುರಿತು ಇಟ್ಟುಕೊಂಡಿರುವರು. ಅವುಗಳನ್ನು ಹಂತ ಹಂತವಾಗಿ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಗತಗೊಳಿಸಲಾಗುವುದು.” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಡಿ.ಡಿ.ಬೋವಿ. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ವ್ಹಿ.ಜಗುನವರ.ಪ್ರಾಥಮಿಕ ಪತ್ತಿನ ಸಂಘದ ನಿರ್ದೇಶಕರಾದ ಎಸ್.ಎಂ.ಸಂಗೊಳ್ಳಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಸ್.ಎನ್.ಪಾಶ್ಚಾಪುರ, ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ನಿವೃತ್ತರಾದ ಎಸ್.ವ್ಹಿ.ಬೆಳವಡಿ ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಗುರುದೇವಿ ಮಲಕನ್ನವರ ಹಾಗೂ ತಲ್ಲೂರು ಸಂಪನ್ಮೂಲ ವ್ಯಾಪ್ತಿಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಡಿ.ಡಿ.ಬೋವಿ ಪ್ರಾಸ್ತಾವಿಕವಾಗಿ ಮಾತನಾಡುತ್ತ “ ಬೆಳವಡಿಯವರು ಸತತ ಮೂರು ಸಲ ಅಧ್ಯಕ್ಷರಾಗಿ ಶಿಕ್ಷಕರಿಗೆ ಸಹಕಾರಿಯಾಗಿ ಗುರುಭವನದ ರೂವಾರಿಯಾಗಿ ಉತ್ತಮ ಕಾರ್ಯ ಮಾಡಿರುವರು. ಪೆಟ್ಲೂರವರು ಅದರ ಮುಂದುವರಿದ ಕಾರ್ಯವನ್ನು ಅವರ ಮಾರ್ಗದರ್ಶನದಲ್ಲಿ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ.ಸಂಘದ ಚಟುವಟಿಕೆಗಳು ಸದಾ ಹೀಗೆಯೇ ಸಾಗಲಿ ದೇವರು ಇವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ” ಎಂದು ಹಾರೈಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವ್ಹಿ.ಜಗುನವರ ಮಾತನಾಡಿ “ನನ್ನ ಮತ್ತು ಬೆಳವಡಿಯವರ ಪರಿಚಯ 1995 ಕ್ಕಿಂದ ಮುಂಚಿನದು ಯಾವುದೇ ಕೆಲಸಗಳನ್ನು ಅವರಿಗೆ ಹೇಳಿದರೆ ಸಾಕು ಆಯಿತು ಮಾಡೋಣ ಎಂದು ಹೆಚ್ಚು ಮಾತನಾಡದೇ ಆ ಕೆಲಸ ಮುಗಿದ ತಕ್ಷಣ ಕರೆ ಮಾಡಿ ನಿಮ್ಮ ಕೆಲಸ ಆಗಿದೆ ಎಂದು ತಿಳಿಸುತ್ತಿದ್ದರು.ಅಷ್ಟರ ಮಟ್ಟಿಗೆ ಅವರು ಚಟುವಟಿಕೆಯುಳ್ಳವರಾಗಿದ್ದರು.ಅವರ ಜೊತೆ ಜೊತೆಯಲ್ಲಿ ಕೆಲಸ ಮಾಡುತ್ತ ಅವರ ಮಾರ್ಗದರ್ಶನದಲ್ಲಿ ಈಗ ಪೆಟ್ಲೂರವರು ಅಧ್ಯಕ್ಷರಾಗಿದ್ದು ನಮಗೆಲ್ಲ ಸಂತಸ ತಂದಿದೆ.ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಶಿಕ್ಷಕ ಸ್ನೇಹಿ ಚಟುವಟಿಕೆಗಳು ಸಂಘದ ಮೂಲಕ ಜರುಗಲಿ”ಎಂದು ಆಶಿಸಿದರು.
ಬೆನಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಪಾಟೀಲ ಮಾತನಾಡಿ “ ಸವದತ್ತಿಯಲ್ಲಿ ಬಹಳ ಸ್ನೇಹಪರವಾದ ಸಂಘಟನೆಯಿದ್ದು. ನಾನು ವರ್ಗಾವಣೆ ಕೌನ್ಸಿಲಿಂಗ್ ಸಂದರ್ಭದಲ್ಲಿ ಬೆಳವಡಿಯವರ ಪರಿಚಯವಾಯಿತು. ಅವರು ನಮ್ಮ ತಾಲೂಕಿಗೆ ಬನ್ನಿ ದೇವರು ಒಳ್ಳೆಯದನ್ನು ಮಾಡುತ್ತಾನೆ ತಾಯಿ ರೇಣುಕಾದೇವಿಯ ಆಶೀರ್ವಾದ ಸದಾ ತಮ್ಮ ಮೇಲಿರಲಿ” ಎಂದು ಹಾರೈಸಿದರು.
ವಿಕಲಚೇತನ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಮಾತನಾಡಿ “ಬೆಳವಡಿಯವರು ಮತ್ತು ಪೆಟ್ಲೂರವರು ಒಂದೇ ನಾಣ್ಯದ ಎರಡು ಎರಡು ಮುಖಗಳಿದ್ದಂತೆ. ಇಬ್ಬರೂ ಶ್ರಮಜೀವಿಗಳು ಕೆಲಸವನ್ನು ಮಾಡಿ ತೋರಿಸುವವರು.ಅವರಿಗೆ ದೇವರು ಆಯುರಾರೋಗ್ಯ ನೀಡಲಿ” ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ “ಹತ್ತು ಹಲವು ನಿರೀಕ್ಷೆಗಳನ್ನು ಎಲ್ಲರೂ ಸಂಘಟನೆಯ ಕಾರ್ಯಗಳ ಬಗ್ಗೆ ಇಟ್ಟಿರುವಿರಿ.ಈಗ ಬ್ಲಾಗ್ ಮಾಡಿದ್ದು ಅದರಲ್ಲಿ ಪ್ರತಿ ತಿಂಗಳ ವೇತನ ಪ್ರಮಾಣಪತ್ರ. ಭವಿಷ್ಯನಿಧಿ ವಾರ್ಷಿಕ ಉಳಿತಾಯ. ಇನ್ಕಂ ಟ್ಯಾಕ್ಸ ಪಾರಂ ನಂ 16 ಸೇರಿದಂತೆ ಈಗ ಹತ್ತು ಹಲವು ಮಾಹಿತಿಗಳನ್ನು ಅಳವಡಿಸಲಾಗಿದೆ.ಮುಂದಿನ ದಿನಗಳಲ್ಲಿ ಸೇವಾ ಪುಸ್ತಕವನ್ನು ಕೂಡ ಅಳವಡಿಸುವ ಯೋಚನೆ ಇದೆ.ಇಷ್ಟರಲ್ಲಿಯೇ ತಮ್ಮ ತಮ್ಮ ವಲಯ ವ್ಯಾಪ್ತಿ ಗುರು ಸ್ಪಂದನ ಕಾರ್ಯಕ್ರಮ ಜರುಗಿಸುವ ಯೋಜನೆಯಿದೆ. ನಂತರ ಅಲ್ಲಿ ತಮ್ಮ ಅಹವಾಲುಗಳನ್ನು ಆಲಿಸಿ ಮುಂದೆ ಯಾವ ಯಾವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ನನ್ನ ಎಲ್ಲ ಪದಾಧಿಕಾರಿಗಳ ಸಹಕಾರ ಮತ್ತು ಬೆಳವಡಿಯವರ ಮಾರ್ಗದರ್ಶನದಲ್ಲಿ ನಿರ್ಧರಿಸುವ ಮೂಲಕ ಶಿಕ್ಷಕ ಸ್ನೇಹಿ ಚಟುವಟಿಕಗಳನ್ನು ಸಂಘದ ಮೂಲಕ ಅಳವಡಿಸಲಾಗುವುದು.ಇಂದು ನಮ್ಮನ್ನು ಆಹ್ವಾನಿಸಿ ಸನ್ಮಾನಿಸಿ ನಮಗೆ ಜವಾಬ್ದಾರಿಯನ್ನು ಹೆಚ್ಚಿಸಿರುವಿರಿ.ತಮ್ಮ ಅಭಿಮಾನಕ್ಕೆ ತುಂಬು ಹೃದಯದ ಕೃತಜ್ಞತೆಗಳು”ಎಂದು ತಿಳಿಸಿದರು.
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಕವಯತ್ತಿ ಶಿಕ್ಷಕಿ ಜ್ಯೋತಿ ಕೋಟಗಿ ಕಾರ್ಯಕ್ರಮ ನಿರ್ವಹಿಸುವುದರೊಂದಿಗೆ ಸ್ವಾಗತಿಸಿದರು.ಕೊನೆಗೆ ಶಿಕ್ಷಕ ಎಸ್.ಎಫ್.ಮುರಗನ್ನವರ ವಂದಿಸಿದರು.