ವಿಶ್ವ ಮಾನವ
ಸಮಾಜದ ಭವಿಷ್ಯ ನಿರೂಪಕ,
ಭೂತಕಾಲದ ಅನುಭವಗಳ ಮೂಸೆಯಲಿ,
ವರ್ತಮಾನದ ಆಗುಹೋಗುಗಳ ಹೊಸೆದು,
ಭವಿಷ್ಯತ್ತಿಗೆ ಉತ್ತಮ ಹೊಂಗಿರಣ ನೀಡುವ ನಿರ್ದೇಶಕ,
ನಮ್ಮೆಲ್ಲರ ಬಾಳಿನ ದಾರಿದೀಪ ಈ ಮಾದರಿ ಶಿಕ್ಷಕ…
ಶಾಲೆಗೆ ಬರುವ ಎಲ್ಲ ಮಕ್ಕಳ
ಜಾತಿ-ಮತ-ಧರ್ಮ-ಭಾಷೆಗಳ ಎಣಿಸದೇ,
ತನ್ನ ಮಕ್ಕಳಂತೆ ನೋಡಿಕೊಳ್ಳುವ ‘ವಿಶ್ವಮಾನವ’
ಎಲ್ಲಾ ಮಕ್ಕಳಿಗೂ ಮಾದರಿ ಈ ನಮ್ಮ ಶಿಕ್ಷಕ…
ಮುಗ್ಧ ಮಕ್ಕಳಿಗೆ ಅಕ್ಷರ-ಮಗ್ಗಿ-ಕಾಗುಣಿತ ಕಲಿಸಿ,
ಅಶೋಕ-ಬುದ್ಧ-ಗಾಂಧಿ-ಅಂಬೇಡ್ಕರ್-
ಕಲಾಂರಂಥ ಸಾಧಕರ
ಜೀವನ-ಸಾಧನೆ ಬೋಧಿಸಿ,
‘ನೀವೂ ಅವರಂತೆ ಬೆಳೆಯಿರಿ’ ಎನ್ನುವ
ನಮ್ಮ ಶಿಕ್ಷಕ
ನಿರಂತರ ಉತ್ಸಾಹಿ,ವಾಗ್ಮಿ, ವ್ಯಾಸಂಗಪ್ರಿಯ,
ಜಗತ್ತಿನ ಎಲ್ಲ ಹೊಸದನ್ನು ಗಮನಿಸಿ,
ಮುಗ್ಧಮಕ್ಕಳ ಮನಸಿಗೆ ಮುದವಾಗಿ ತಲುಪಿಸಿ,
ನಾಗರಿಕ ಪ್ರಪಂಚಕೆ ಎಳೆಯರ ಮನವ
ಸಜ್ಜುಗೊಳಿಸುವ ಶಿಕ್ಷಕ
ಮಾದರಿ ರಾಷ್ಟ್ರದ ನಿರ್ಮಾಪಕ…
ಮುಗ್ಧ ಮಕ್ಕಳ ಮನದ ತುಂಬ
ಆದರ್ಶಗಳ ಬೀಜಗಳ ಬಿತ್ತುತ್ತಾ,
ಒಳ್ಳೆಯದನ್ನು ಬೆಂಬಲಿಸುತ್ತಾ,ಕೆಟ್ಟದನ್ನು ಖಂಡಿಸುತ್ತಾ,
ರಾಷ್ಟ್ರ ರೂಪಿಸುವ ವೈದ್ಯರ,ವಿಜ್ಞಾನಿಗಳ,ಇಂಜಿನೀಯರ್ ಗಳ,
ಸೈನಿಕರ,ಅಧಿಕಾರಿಗಳ ರೂಪಿಸುವ
ಓ ಶಿಕ್ಷಕ ! ನಿನ್ನ ಜೀವನ ಧನ್ಯ
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು ,ಪತ್ರಕರ್ತರು