ಮೈಸೂರು – ಕನ್ನಡ ನಾಡು-ನುಡಿ ಉಳಿಯಬೇಕಾದರೆ ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ದ ಸಪ್ತಸೂತ್ರಗಳನ್ನು ಅಳವಡಿಸಿಕೊಳ್ಳಬೇಕೆಂದು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಸಂಸ್ಕೃತಿ ಇಲಾಖೆಯ ‘ಕನ್ನಡಕ್ಕಾಗಿ ನಾನು’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲರೂ ಕನ್ನಡ ಭಾಷೆಯನ್ನೇ ಕಡ್ಡಾಯವಾಗಿ ಮಾತನಾಡಬೇಕು. ಎಲ್ಲರೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು, ಕನ್ನಡದಲ್ಲಿಯೇ ಸಹಿ ಹಾಕಬೇಕು,ಕನಿಷ್ಟ ಪಕ್ಷ ಒಬ್ಬರಿಗಾದರೂ ಕನ್ನಡ ಕಲಿಸಬೇಕು. ಕನ್ನಡ ಚಲನಚಿತ್ರಗಳನ್ನೇ ನೋಡಬೇಕು.ಕನ್ನಡದ ಹಾಡುಗಳನ್ನೇ ಹಾಡಬೇಕು. ಆಗ ಮಾತ್ರ ಕನ್ನಡ ನಾಡು,ನುಡಿ,ಸಂಸ್ಕೃತಿ ಮುಗಿಲೆತ್ತರಕೆ ಬೆಳೆಯುತ್ತದೆ ಎಂದು ನುಡಿದರು.
ಕನ್ನಡವೆಂಬ ಸಾಹಿತ್ಯ ನಭದಲ್ಲಿ ಅಸಂಖ್ಯಾತ ಕವಿಗಳೆಂಬ ನಕ್ಷತ್ರಗಳು ಮಿನುಗುತ್ತಿವೆ. ಕನ್ನಡ ನಾಡು-ನುಡಿಗೆ ಬೆಳಕು ನೀಡುತ್ತಿವೆ.ಇದರಿಂದಾಗಿ ಕನ್ನಡ ನುಡಿ,ಸಂಸ್ಕೃತಿ,ಆಚಾರ-ವಿಚಾರ, ಜೀವನ ಇಡೀ ವಿಶ್ವದ ಗಮನ ಸೆಳೆದಿದೆ ಎಂದವರು ಬಣ್ಣಿಸಿದರು.
ಪ್ರಾಧ್ಯಾಪಕರಾದ ಡಾ.ಸತೀಶ್ ಚಂದ್ರ ಕನ್ನಡ ಭಾಷೆಯ. ಮಹತ್ವದ ಬಗ್ಗೆ ವಿವರಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಪ್ರಸನ್ನಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಟಿ.ಆರ್.ದೀಪಕ್, ಡಾ.ಬೋರಯ್ಯ, ಕಾಲೇಜಿನ ಅಧ್ಯಾಪಕ ವೃಂದದವರು ವೇದಿಕೆಯಲ್ಲಿದ್ದರು.
ಮೈಸೂರಿನ ಗಾಯಕರಾದ ಡಾ.ಸುಮಂತ್ ವಸಿಷ್ಠ, ಗಾಯಕಿ ರಶ್ಮಿ ಚಿಕ್ಕಮಗಳೂರು, ಗಾಯಕ ವಿನಯ್ ಭಾರ್ಗವ್ ಹಾಗೂ ತಂಡದವರು ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳನ್ನು ಹಾಡಿ,ಎಲ್ಲರನ್ನೂ ರಂಜಿಸಿದರು.