Homeಸುದ್ದಿಗಳುಕಬ್ಬಿನ ಬೆಲೆ ನಿಗದಿಗೊಳಿಸಲು ರೈತ ಸಂಘಟನೆಗಳ ಆಗ್ರಹ

ಕಬ್ಬಿನ ಬೆಲೆ ನಿಗದಿಗೊಳಿಸಲು ರೈತ ಸಂಘಟನೆಗಳ ಆಗ್ರಹ

ಸಿಂದಗಿ: ಕಬ್ಬಿನ ಬೆಲೆ ನಿಗದಿಗೊಳಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆಸಿ ಜಿಲ್ಲಾಡಳಿತ ಹಾಗೂ ಸಕ್ಕರೆ ಮಂತ್ರಾಲಯ ಸಭೆ ಕರೆಯಬೇಕೆಂದು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ವಿಜಯಪುರ ಜಿಲ್ಲಾಘಟಕ ಹಾಗೂ ಸಿಂದಗಿ ಘಟಕದ ಪದಾಧಿಕಾರಿಗಳು ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜುಣಗಿ ಮಾತನಾಡಿ, ರೈತರಿಗೆ ಪ್ರತಿಟನ್ ಕಬ್ಬಿಗೆ ರೂ. 3 ಸಾವಿರಗಳ ಬೆಲೆ ನಿಗದಿಗೊಳಿಸಬೇಕು, ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅಲ್ಲಿನ ರೈತರಿಗೆ ಪ್ರತಿ ಟನ್‍ಗೆ ರೂ 2800 ಗಳ ಕಟಾವು ಹೊರತು ಪಡಿಸಿ ರೂ. 2800 ರೂಗಳು ನೀಡಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೂ. 2300 ಗಳನ್ನು ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ 10 ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‍ಗೆ ರೂ. 500 ರೈತರ ಖಾತೆಗೆ ಕೊಡಲು ಕೂಡಲೇ ಸರಕಾರ ಒತ್ತಾಯಿಸಬೇಕು. ಇಲ್ಲದಿದ್ದಲ್ಲಿ ಮೂರು ದಿನದೊಳಗಾಗಿ ನೀಡದಿದ್ದಲ್ಲಿ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕಬ್ಬು, ತೊಗರಿಗೆ ಗೊನ್ನಿ ಹುಳುಗಳು ಹತ್ತಿ, ಕಬ್ಬು, ತೊಗರಿ, ಸೂರ್ಯಕಾಂತಿ, ಹೆಸರು ಹಾಳಾಗಿ ರೈತರು ಬಹಳ ತೊಂದರೆಗೀಡಾಗಿದ್ದಾರೆ. ಕೂಡಲೇ ಸರಕಾರ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಪ್ರತಿ ಎಕರೆಗೆ 8 ಸಾವಿರದಿಂದ 10 ಸಾವಿರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಪೆಟ್ರೋಲ್, ಡಿಸೇಲ್ ಬೆಲೆ, ರೈತರ, ಕೃಷಿ ಕಾರ್ಮಿಕರ ಸಂಬಳ ಜಾಸ್ತಿಯಾಗಿದೆ. ರೈತರು ಉಪಯೋಗಿಸುವ ಸರಕಾರಿ ಗೊಬ್ಬರಗಳ ಬೆಲೆ ಗಗನಕ್ಕೇರಿದೆ ಆದ್ದರಿಂದ ರೈತರು ಬಹಳ ತೊಂದರೆಗೊಳಗಾಗಿದ್ದಾರೆ. ಕೂಡಲೇ ಸರಕಾರ ರೈತರ ಕಡೆಗೆ ಗಮನಹರಿಸಿ ಎಲ್ಲಾ ಗೊಬ್ಬರಗಳ ಬೆಲೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ರೈತ ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿದ್ದಾರೆ. ಒಂದು ವೇಳೆ 3 ರಿಂದ 5 ದಿನಗೊಳಗಾಗಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರೈತರು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಚನ್ನಪಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಅಲ್ಲಾಪೂರ, ಬಾಬೂ ಕೂಡಿ, ಅಮ್ಮೋಗಿ ಹರವಾಳ, ಲಕ್ಷ್ಮಣ ಹೂಗಾರ, ಹಣಮಂತ ಗೊಬ್ಬೂರ, ಕುಲ್ಲಣ್ಣಾ ಹರವಾಳ, ರವಿ ಹಿರೇಕುರುಬರ, ಸಿದ್ದು ಉಪ್ಪಾರ, ಭಾಸ್ಕರ ಪೂಜಾರಿ, ಗೊಲ್ಲಾಳಪ್ಪ ಚೌಧರಿ ಸೇರಿದಂತೆ ಇನ್ನಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group