Homeಲೇಖನಕುತೂಹಲದ ಕಣ್ಣಿನಿಂದ

ಕುತೂಹಲದ ಕಣ್ಣಿನಿಂದ

ಜೀವನದ ಉದ್ದೇಶವೇನು? ಬಹಳ ಜನ ಯೋಚಿಸಿ, ಯೋಜಿಸಿ ಅನುಷ್ಠಾನಗೊಳಿಸುತ್ತಿರುವಂತೆ ಸಂಪತ್ತು-ಆಸ್ತಿ-ಮನೆ-ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವುದು! ಚಿಕ್ಕಂದಿನಲ್ಲಿ ಓದುವುದು, ಬೆಳೆಯುತ್ತಾ ಬಂದಂತೆ ಉನ್ನತ ಶಿಕ್ಷಣ, ನಂತರ ಉದ್ಯೋಗ ಹುಡುಕುವಿಕೆ, ಮದುವೆಗೆ ಸಂಗಾತಿಯ ಹುಡುಕುವಿಕೆ ಹಾಗೂ ಆಯ್ಕೆ, ನಂತರ ಹುಟ್ಟುವ ಮಗುವಿನ ಕಾಳಜಿ ನಂತರ ಅವರ ಶಿಕ್ಷಣ ಹೀಗೆಯೇ ಕಾಲ ಉರುಳುತ್ತದೆ. ಜೀವನ ಪೂರ್ತಿ ಕುಟುಂಬಕ್ಕಾಗಿ, ಅದರ ಸದಸ್ಯರಿಗಾಗಿ ನಾವು ನಮ್ಮ ಇಡೀ ಜೀವನವನ್ನು ಬಳಸುತ್ತೇವೆ. ಆದರೆ ಆಧ್ಯಾತ್ಮಿಕ ಕ್ಷೇತ್ರದವರು ಆರೋಗ್ಯ ಸಲಹಾಗಾರರು ಕೇಳುವ ಪ್ರಶ್ನೆ ; ನೀನು ಯಾರು? ನಿನ್ನ ಆರೋಗ್ಯ ಯಾರ ಜವಾಬ್ದಾರಿ? ಇಡೀ ಜೀವನ ಇದರಲ್ಲೇ ಸವೆದರೆ ನಿನ್ನ ಸುಖ ನೆಮ್ಮದಿ ಮನರಂಜನೆ ಎಲ್ಲಿ?

ಇದರಿಂದ ನನ್ನ ಅನುಭವದಲ್ಲಿ ನಾನು ಹೇಳುವುದು ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾಗಿ ಬಳಸುವುದೂ ಅಷ್ಟೇ ಮುಖ್ಯ.

ಒಂದು ಗಾದೆಯ ಮಾತಿದೆ ಕಾಲಿದ್ದಾಗ ಹಂಪೆ ನೋಡು, ಕಣ್ಣಿದ್ದಾಗ ಕನಕಗಿರಿ ನೋಡು. ಇದರರ್ಥ ಓಡಾಡಲು ಮೈಯಲ್ಲಿ ತ್ರಾಣವಿರುವಾಗಲೇ ಹಂಪೆಯಂತಹ ಐತಿಹಾಸಿಕ, ಪೌರಾಣಿಕ ಸ್ಥಳವನ್ನು ಸುತ್ತಿ ನೋಡಬೇಕು. ಕಣ್ಣು ಚೆನ್ನಾಗಿರಬೇಕಾದರೇ ಕನಕಗಿರಿಯ ದೇವಸ್ಥಾನದ ಕೆತ್ತನೆ ನೋಡಿ ಸಂತೋಷ ಪಡಬೇಕು. ನಮ್ಮಲ್ಲಿ ಖರ್ಚು ಮಾಡಲು ದುಡ್ಡು ಇಲ್ಲ ಎಂಬ ನೆವದಿಂದ ಹಣ ಸಂಗ್ರಹಿಸುತ್ತಾ ದಿನ ಕಳೆದರೆ, ದೇಹಕ್ಕೆ ವಯಸ್ಸಾದಂತೆ ಅಶಕ್ತಿ, ಅನಾರೋಗ್ಯ, ಮೈಕೈ ನೋವು ಬರುತ್ತೆ. ಆಗ ಹಂಪೆಯನ್ನಾಗಲಿ, ಕನಕಗಿರಿಯನ್ನಾಗಲಿ ಹೋಗಿ ನೋಡಲು ಅಸಾಧ್ಯ. ಮಾಸ್ಟರ್ ಹಿರಣ್ಣಯ್ಯ ಅವರು ಲಂಚಾವತಾರ ನಾಟಕದಲ್ಲಿ ಹೇಳುತ್ತಿದ್ದ ಒಂದು ಮಾತು “ಗಳಿಸಿದ ಹಣ ಮಗುವನ್ನು ಕೊಡಲು ಸಾಧ್ಯವಿಲ್ಲ. ವಯಸ್ಸಾದ ಮೇಲೆ ಹಣ ಬೇಕಾದಷ್ಟಿರಬಹುದು ಆದರೆ ಅದನ್ನು ಅನುಭವಿಸಲು ನಮ್ಮ ಬಳಿ ಶಕ್ತಿ, ಆರೋಗ್ಯ, ಆಸಕ್ತಿ ಇರುವುದಿಲ್ಲ. ಆದ್ದರಿಂದ ಸ್ವಲ್ಷ ಆರೋಗ್ಯ ಚೆನ್ನಾಗಿದ್ದಾಗ ಇರುವ ದುಡ್ಡಿನಲ್ಲೇ ಕೊಂಚ ಮನರಂಜನೆ, ವಿರಾಮ, ಪ್ರವಾಸ ಮಾಡಬೇಕು.

ಈಗ ಅಮೇರಿಕಾದ ಆ್ಯಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ 2015ರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‍ನಿಂದ ತೀರಿಕೊಂಡ. ಅದಕ್ಕೆ ಮೊದಲು ಆತ ಆಡಿದ ಅಂತಿಮ ಮಾತುಗಳಲ್ಲಿ ವಿಷಾದವಿತ್ತು ಹಾಗೂ ಎಲ್ಲ ಜನರಿಗೂ ಎಚ್ಚರಿಕೆಯ ಮಾತು ಇತ್ತು.

“ಇತರರ ಕಣ್ಣುಗಳಲ್ಲಿ ನನ್ನ ಜೀವನವು ನನ್ನ ಜೀವನದ ಸಾರ ಯಶಸ್ಸು ಆದರೆ ನನ್ನ ಕೆಲಸ ಬಿಟ್ಟು ನನ್ನ ಬಳಿ ಅತ್ಯಂತ ಕಡಿಮೆ ಸಂತೋಷವಿದೆ. ನನ್ನ ಜೀವನದ ಅಂತ್ಯದ ವೇಳೆ ನನಗೆ ತಿಳಿದು ಬಂದ ವಿಷಯವೆಂದರೆ ನನಗೆ ಇಷ್ಟು ವರ್ಷ ನನ್ನ ಜೀವನದ ಭಾಗವಾಗಿದ್ದ ಆಸ್ತಿ ಮಾಡಬೇಕೆಂಬ ಪದ್ಧತಿ, ಜೀವನದ ಒಂದು ಭಾಗ ಮಾತ್ರ. ಈ ಕ್ಷಣದಲ್ಲಿ ಹಾಸಿಗೆಯಲ್ಲಿ ತೀವ್ರ ಕಾಯಿಲೆಯಿಂದ ಮಲಗಿರುವಾಗ, ನನ್ನ ಜೀವನ ಯಾನವನ್ನು ಪೂರ್ಣ ನೆನಪು ಮಾಡಿಕೊಂಡಾಗ, ನನಗೆ ಮನವರಿಕೆಯಾಗುತ್ತಿದ್ಲೆ ಸಾವಿಗೆ ಕಾಯುತ್ತ ಕುಳಿತಿರುವ ಘಳಿಗೆಯಲ್ಲಿ -ನಾನು ಸಂಪಾದಿಸಿರುವ ಮಾನ್ಯತೆ, ಗೌರವ, ಆಸ್ತಿಯೆಲ್ಲ ಅರ್ಥಹೀನ. ನಿಮಗಾಗಿ ಕಾರು ಚಲಾವಣೆ ಮಾಡಲು ಯಾರನ್ನಾದರು ಬಾಡಿಗೆಗೆ ಪಡೆಯಬಹುದು. ನಿಮಗಾಗಿ ಹಣ ಮಾಡಲು ಬೇರೆಯವರನ್ನು ನೇಮಿಸಿಕೊಳ್ಳಬಹುದು. ಆದರೆ ನಿಮಗೆ ಬಂದಿರುವ ಕಾಯಿಲೆಯನ್ನು ಬಾಡಿಗೆಗೆ ಅಥವ ಮಾರಲು ಕೊಳ್ಳುವವರು ಯಾರು ಸಿಗುವುದಿಲ್ಲ.ಪ್ರತಿಯೊಬ್ಬರಿಗೂ ಭೌತಿಕ ವಸ್ತುಗಳು ಸಿಗಬಹುದು. ಆದರೆ ಪೃಥ್ವಿಯಲ್ಲಿ ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲಾರದ ವಸ್ತು ಎಂದರೆ ಜೀವ ಮತ್ತು ಜೀವನ”.

ಇನ್ನೊಬ್ಬ ವ್ಯಕ್ತಿ ಹೇಳಿರುವಂತೆ “ ನಿಮ್ಮ ನಿಜವಾದ ಆಂತರಿಕ ಸಂತಸ ಪ್ರಪಂಚದ ಯಾವುದೇ ಭೌತಿಕ ವಸ್ತುಗಳಿಂದ ಸಿಗುವುದಿಲ್ಲ. ನೀವು ವಿಮಾನದಲ್ಲಿ ಪ್ರಯಾಣ ಮಾಡುವಾಗ ಮೊದಲ ದರ್ಜೆ ಅಥವ ಎಕನಾಮಿಕ್ ವರ್ಗದಲ್ಲಿ ಹೋಗುತ್ತಿರಬಹುದು. ಆದರೆ ಒಂದು ವೇಳೆ ವಿಮಾನ ಅಪಘಾತವಾದರೆ ಅದು ಕುಸಿದರೆ ನೀವು ಅದರೊಂದಿಗೆ ಸುಟ್ಟು ಬೂದಿಯಾಗುವಿರಿ.

ಸೆರ್ಜಿಯೋ ಕಾರ್ಡೆನಾಸ್ ಹೇಳುವಂತೆ ಸಂತಸ ಪಡೆಯಬೇಕೆಂದರೆ ಅದರ ಮಹತ್ವ ತಿಳಿಯಬೇಕೆಂದರೆ, ಭೌತಿಕ ವಸ್ತುಗಳನ್ನು ಹೊಂದುವಿಕೆಗಿಂತ ನಿಮ್ಮ ಆರೋಗ್ಯ ಹಾಗೂ ಪ್ರೇಮಕ್ಕೆ ಎಷ್ಟು ಮಹತ್ವ ಕೊಡುತ್ತೀರಿ ಎಂಬುದೇ ಮಹತ್ವದ ಸಂಗತಿ”

ಈಗ ನಿಮಗೆ ಒಂದು ಕಥೆ ಹೇಳುತ್ತೇನೆ. ಒಬ್ಬ ವ್ಯಕ್ತಿಗೆ ಸ್ವಾಮಿಗಳು ಉಪದೇಶ ಮಾಡುವಾಗ ಹೇಳಿದರು. “ನೀನು ಇಡೀ ಜೀವನ ನಿನ್ನ ಕುಟುಂಬಕ್ಕಾಗಿ ತೇದಿದ್ದೀಯಾ. ನಿನಗಾಗಿ ಏನು ಮಾಡಿಕೊಂಡಿದ್ದೀಯಾ?” ಆ ಗ್ರಹಸ್ಥ ಉತ್ತರಿಸಿದ. “ ನನ್ನದೆಂಬುದು ಏನೂ ಇಲ್ಲ. ನಾನಿರುವುದೇ ನನ್ನ ಕುಟುಂಬದ ಸದಸ್ಯರ ಸಂತೋಷಕ್ಕಾಗಿ”. ಆಗ ಸ್ವಾಮಿಗಳು ಹೇಳಿದರು. “ ನೀನು ನಾನು ಹೇಳಿದ ಹಾಗೆ ನಿನ್ನ ಮನೆಯವರ ಮುಂದೆ ಒಂದು ಪರೀಕ್ಷೆ ಮಾಡು. ನಾನು ಕೊಡುವ ಒಂದು ಔಷಧ ಕುಡಿದು ನಿನ್ನ ಮನೆಯ ಮಂಚದ ಮೇಲೆ ಸತ್ತಂತೆ ಕೆಲವು ಗಂಟೆ ಮಲಗಿ, ಅಲ್ಲಿ ಏನು ನಡೆಯುತ್ತದೋ ಗಮನಿಸು”. ಈ ಗ್ತಹಸ್ಥ ಮಾರನೇ ದಿನ ಬೆಳಗ್ಗೆ, ಸ್ವಾಮೀಜಿಗಳು ಅವನ ಮನೆಗೆ ಬಂದ ಸಮಯದಲ್ಲಿ, ಅವರು ಕೊಟ್ಟಿದ್ದ ಔಷಧ ಕುಡಿದು ಮಂಚದ ಮೇಲೆ ಸತ್ತಂತೆ ಮಲಗಿದ. ಕುಟುಂಬದ ಸದಸ್ಯರೆಲ್ಲ ಪೇಚಾಡಿ ಅಳಲಾರಂಭಿಸಿದರು. ಈತ ಸತ್ತನೆಂದು ತಿಳಿದು ಅಕ್ಕ, ಪಕ್ಕದ ಮನೆಯವರು ಬಂದು ಶ್ರದ್ಧಾಂಜಲಿ ಸಲ್ಲಿಸಿದರು. ಆಗ ಸ್ವಾಮಿಗಳು ಆ ವ್ಯಕ್ತಿಯ ತಾಯಿ ಹಾಗೂ ಹೆಂಡತಿಯ ಮುಂದೆ ಒಂದು ಸಲಹೆ ಕೊಟ್ಟರು. “ನಾನು ನನ್ನ ಬಳಿ ಇರುವ ಈ ಅಮೃತದಂಥಹ ಕಷಾಯವನ್ನು ನಿಮಗೆ ಕೊಡುತ್ತೇನೆ. ನಿಮ್ಮಲ್ಲಿ ಯಾರಾದರೂ ಒಬ್ಬರು ಅದನ್ನು ಕುಡಿದು ಸತ್ತರೆ, ಆ ವ್ಯಕ್ತಿ ಬದುಕುತ್ತಾನೆ.” ಆಗ ಹೆಂಡತಿ ಅಂದಳು “ನನ್ನ ಮಕ್ಕಳು ಚಿಕ್ಕವರು ಅವರನ್ನು ಬೆಳೆಸಲು ತಾಯಿಯಾಗಿ ನಾನಿರಬೇಕು. ಬೇಕಾದರೆ ನಮ್ಮ ಅತ್ತೆಯವರೇ ಅದನ್ನು ಕುಡಿದು ಸತ್ತು ಮಗನನ್ನು ಬದುಕಿಸಲಿ”. ಆಗ ಆ ತಾಯಿ ಅಂದಳು “ ನನ್ನ ಮೊಮ್ಮಕ್ಕಳು ನನ್ನನ್ನು ಬಹಳ ಹಚ್ಕೊಂಡಿದ್ದಾರೆ. ಹೀಗಾಗಿ ಈ ಸೊಸೆಯೇ ಆ ಕಷಾಯ ಕುಡಿದು ಸಾಯಲಿ” ಇಷ್ಟರಲ್ಲಿ ಸ್ವಾಮೀಜಿ ಹೇಳಿದರು “ಸಮಯವಾಯಿತು ಈ ವ್ಯಕ್ತಿ ಈಗ ಸತ್ತೇ ಹೋದ. ಆತನ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ” ಆ ವ್ಯಕ್ತಿಯನ್ನು ಮನೆಯ ಮಧ್ಯದ ಹಾಲಿನಲ್ಲಿ ಮಲಗಿಸಲಾಗಿತ್ತು.

ಹೀಗಾಗಿ ಆತನ ಶರೀರ ಮಂಚಕ್ಕೆ ಅಂಟಿಕೊಂಡಿತ್ತಾದ್ದರಿಂದ, ಮಂಚದ ಸಮೇತ ಆತನನ್ನು ಹೊತ್ತೊಯ್ಯಬೇಕು ಎಂದು ಸ್ವಾಮೀಜಿ ಹೇಳಿದರು. ತಕ್ಷಣ ತಾಯಿ ನುಡಿದಳು “ ಅಯ್ಯಯ್ಯೋ ಆ ಮಂಚ ನನ್ನ ಗಂಡ ಪ್ರೀತಿಯಿಂದ ನನಗೆ ಕೊಡಿಸಿದ್ದು. ಈಗ ಗಂಡ ಇಲ್ಲ. ಆತ ಕೊಡಿಸಿದ ಮಂಚವಾದರೂ ನನಗಿರಲಿ” ಆಗ ಸ್ವಾಮೀಜಿಯ ಶಿಷ್ಯರು, ಬಂದ ಜನ ಹೇಳಿದರು. “ ಈಗ ವ್ಯಕ್ತಿ ಮಲಗಿರುವ ಮಂಚವನ್ನು ಹೊರಗೊಯ್ಯಲು ಬಾಗಿಲು ಚಿಕ್ಕದಾಗಿದೆ. ಹೀಗಾಗಿ ಬಾಗಿಲಿನ ಚೌಕಟ್ಟನ್ನೇ ಒಡೆಯಿರಿ” ಆಗ ತಕ್ಷಣ ಹೆಂಡತಿ ಪ್ರತಿಕ್ರಿಯಿಸಿದಳು “ ಅಯ್ಯಯ್ಯೋ ಈಗ ನನ್ನ ಗಂಡನೇ ಇಲ್ಲ. ಬಾಗಿಲು ಒಡೆದರೆ ಮತ್ತೆ ಹಾಕಿಸುವವರಾರು?” ಇದುವರೆಗೆ ಮೌನವಾಗಿ ಸತ್ತಂತೆ ಮಲಗಿ ಗಮನಿಸುತ್ತಿದ್ದ ವ್ಯಕ್ತಿ ತಕ್ಷಣ ಎದ್ದು ಕೂತು ಹೇಳಿದ” ಅಮ್ಮ ನನಗಿಂತ ನಿನಗೆ ಈ ಮಂಚವೇ ಜಾಸ್ತಿಯೇ!? ಏನೇ ನಿನ್ನ ಗಂಡನಾದ ನನಗಿಂತ ಮನೆಯ ಬಾಗಿಲೇ ಮುಖ್ಯವಾಯಿತೇ? ಈ ಕಥೆಯ ಸಾರಾಂಶ ಬದುಕಿರುವವರೆಗೆ ವ್ಯಕ್ತಿಗೆ ಬೆಲೆ. ಸತ್ತ ತಕ್ಷಣ ಅದು ಹೆಣ. ಅದಕ್ಕೆ ಬೆಲೆಯಿಲ್ಲ.

ಇದುವರೆಗೆ ನಾನು ಹೇಳಿದ ಉದಾಹರಣೆಗಳಿಂದ ನಿಮಗೆ ಸ್ಪಷ್ಟವಾಗಿರಬಹುದು ಜೀವ ಇರುವವರೆಗೆ ಜೀವನ. ನಿಮಗೆ ನಿಮಗೆ ತೋಚುವಂತೆ ಯಾವುದಾದರೂ ಒಂದು ಹವ್ಯಾಸ ಇಟ್ಟುಕೊಳ್ಳಿ. ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಂಡು ಇರುವ ದುಡ್ಡಿನಲ್ಲೇ ನಿಮಗೆ ಇಷ್ಟವಾಗುವಂತೆ ಒಳ್ಳೆಯ ರೀತಿಯಲ್ಲಿ ಮನರಂಜನೆ ಪಡೆಯಿರಿ. ನೀವು ಇಡೀ ಜೀವನದಲ್ಲಿ ಗಳಿಸಿದ್ದನ್ನು, ನೀವು ಸತ್ತಾತ ಹೊತ್ತುಕೊಂಡು ಹೋಗಲಾರಿರಿ ನೀವು ಕಷ್ಟ ಪಟ್ಟು ಸಂಪಾದಿಸಿ ಇತರರು ಅದನ್ನು ಅನುಭವಿಸುವಂತೆ ಮಾಡಬೇಡಿಿ.


ಎನ್.ವ್ಹಿ ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ
ಮೊ:-9845565238

RELATED ARTICLES

Most Popular

error: Content is protected !!
Join WhatsApp Group