ಬೀದರ – ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದರೂ ರೈತರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ , ಕೇಂದ್ರ ರಾಜ್ಯದ ಇಬ್ಬರು ಮಂತ್ರಿಗಳಿದ್ದರು ರೈತರಿಗೆ ಪರಿಹಾರ ಕೊಡಿಸುತ್ತಿಲ್ಲ.ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಕಟ್ಟಿದ್ದೇವೆ.ಬೆಳೆ ನಾಶವಾಗಿದೆ ಆದರೆ ಪರಿಹಾರ ಬಂದಿಲ್ಲ ನೀವು ಕೇಂದ್ರ ಸಚಿವರಾಗಿ ಏನು ಪ್ರಯೋಜನ ಎಂದು ರೈತರೊಬ್ಬರು ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬೀದರನ ಪ್ರತಾಪ ನಗರದ ಘಾಳೆ ಹಾಲ್ ನಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಸಂದರ್ಭದಲ್ಲಿ ನಡೆದ ಘಟನೆ. ಕೃಷಿಯಲ್ಲಿ ನೂತನ ತಾಂತ್ರಿಕ ಪ್ರಗತಿ ಕುರಿತು ನಡೆಸಲಾಗುತ್ತಿದ ಸಂವಾದ ಕಾರ್ಯಕ್ರಮದಲ್ಲಿ ರೈತನ ಆಕ್ರೋಶ ಹೊರಹೊಮ್ಮಿತು.
ವೇದಿಕೆಗೆ ಹೋಗಿ ತಮ್ಮ ಸಮಸ್ಯೆ ಹೇಳಲು ಹೋದ ರೈತನಿಗೆ ಕ್ಯಾರೆ ಎನ್ನದ ಸಚಿವ ಖೂಬಾ ಅವರ ವರ್ತನೆಗೆ ಸಿಡಿದೆದ್ದ ರೈತ ರೈತರ ಸಮಸ್ಯೆಗಳ ಕುರಿತು ಆಕ್ರೋಶ ಭರಿತರಾಗಿ ಮಾಡನಾಡಲು ತೊಡಗಿದಾಗ ಸಚಿವರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ಹಣ ಕಟ್ಟಿದ್ದೇವೆ ಮಳೆಯಲ್ಲಿ ಫಸಲು ಹಾನಿಯಾಗಿದೆ ಜಿಲ್ಲೆಗೆ ಇಬ್ಬಿಬ್ಬರು ಸಚಿವರಿದ್ದರೂ ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ ನೀವಿದ್ದು ಏನು ಪ್ರಯೋಜನ ಎಂದು ರೈತರು ಸಚಿವರ ವಿರುದ್ಧ ಹರಿಹಾಯ್ದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ