ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿಕೊಳ್ಳುತ್ತಾರೆ ?
ಕಲ್ಲೋಳಿ – ಕಲ್ಲೋಳಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ನಾವುಗಳು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದರಾದ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದೆವು. ಆದರೆ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲವು ಸರ್ವೆಸಾಮಾನ್ಯ ಆದರೆ ನಮಗೆ ಕೆಲವು ಅನುಮಾನಗಳು ಬಂದ ಕಾರಣ ಇವಿಎಂ ಇರಿಸಿದ ಸ್ಟ್ರಾಂಗ್ ರೂಮ್ನ ಸಿ.ಸಿ.ಟಿ.ವಿ ಪೂಟೇಜ್ ಪೂರೈಸಲು ವಿನಂತಿಸಿದ್ದೇವೆ. ಹೀಗಿರುವಾಗ ಇದಕ್ಕೆ ಉತ್ತರ ನೀಡಬೇಕಾದದ್ದು ಚುನಾವಣಾಧಿಕಾರಿ ಅಥವಾ ತಾಲೂಕಾ ಆಡಳಿತ. ಆದರೆ ಈ ಮಧ್ಯೆ ಕೆಲವರು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು, ಕುಂಬಳಕಾಯಿ ಕಳ್ಳ ಎಂದರೇ ಹೆಗಲು ಮುಟ್ಟಿಕೊಂಡು ನೋಡುವ ಇವರು ಯಾವುದೇ ಅವ್ಯವಹಾರ ಆಗಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇವರೇನು ತಾಲೂಕಾ ಆಡಳಿತದ ವಕ್ತಾರರೇ.. ಎಂದು ಪರಾರ್ಜಿತ ಬಿಜೆಪಿ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.
ಪತ್ರಿಕೆಗೆ ಪತ್ರವೊಂದನ್ನು ಬರೆದಿರುವ ಶ್ರೀಮತಿ ಅಕ್ಷತಾ ಸಂಗಮೇಶ ಹೂಗಾರ, ಧರೀಶ ಲಕ್ಷ್ಮಣ ಖಾನಗೌಡ್ರ, ಉಮೇಶ ಶಿವರುದ್ರಪ್ಪಾ ಬಿ.ಪಾಟೀಲ ಸೇರಿದಂತೆ ಸುಮಾರು ಹನ್ನೊಂದು ಅಭ್ಯರ್ಥಿ ಗಳು, ಪಕ್ಷೇತರ ಅಭ್ಯರ್ಥಿಗಳು ಯಾವುದೋ ಪ್ರೇರಣೆಗೆ ಒಳಗಾಗಿ ಸಂಸದರಾದ ಈರಣ್ಣ ಕಡಾಡಿ ಅವರನ್ನು ಕೇವಲ ತೇಜೋವಧೆ ಮಾಡುವ ಉದ್ದೇಶದಿಂದ ಮಾತ್ರ ಹೇಳಿಕೆಗಳನ್ನು ನೀಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದಿದ್ದಾರೆ.
ಇವರು ಕಳೆದ 13 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ತಮ್ಮನ್ನು ತಾವು ಹೇಳಿಕೊಂಡಿದ್ದಾರೆ. ಆದರೆ ಇವರಲ್ಲಿರುವ ಬಹಳಷ್ಟು ಜನ ಪ್ರತಿ ಚುನಾವಣೆಯಲ್ಲಿ ಪಕ್ಷಗಳನ್ನು ಬದಲಾಯಿಸುತ್ತಾ ಬಂದಿರುವ ಉದಾಹರಣೆ ಕಲ್ಲೋಳಿ ಪಟ್ಟಣದ ಜನತೆಗೂ ಗೊತ್ತಿದೆ.
ಕಳೆದ ನಾಲ್ಕು ದಶಕಗಳಿಂದ ಈರಣ್ಣ ಕಡಾಡಿ ಅವರ ಸೇವೆಯನ್ನು ಗುರ್ತಿಸಿ ಪಕ್ಷ ಅವರಿಗೆ ನೀಡಿರುವ ಹಲವಾರು ಗುರುತರ ಜವಾಬ್ದಾರಿಗಳನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ, ಅದನ್ನು ಸಹಿಸಲಾರದೇ ನಮ್ಮ ಗ್ರಾಮಕ್ಕೆ ಸಿಕ್ಕಿರುವ ಸದವಕಾಶವನ್ನು ಉಪಯೋಗ ಪಡಿಸಿಕೊಳ್ಳದೇ ಈ ರೀತಿ ಈರಣ್ಣ ಕಡಾಡಿ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿರುವುದು ಅವರ ದುರ್ಬುದ್ದಿಯನ್ನು ಎತ್ತಿ ತೋರಿಸುತ್ತದೆ. ಚುನಾವಣೆ ಪ್ರಕ್ರಿಯೆಯಲ್ಲಿ ಬಾಧಿತದಾರ ನಮಗೆ ಸಿ.ಸಿ.ಟಿ.ವಿ ಪೂಟೇಜ್ ನೋಡುವ ಹಕ್ಕಿದೆ ಮತ್ತು ಈ ಕಾರ್ಯಗಳನ್ನು ಪೂರೈಸುವ ಅಥವಾ ತಿರಸ್ಕರಿಸುವುದು ತಾಲೂಕಾ ಆಡಳಿತ ಮತ್ತು ಚುನಾವಣೆ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ. ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕ ಪ್ರಸಂಗತನವನ್ನು ಕೈ ಬಿಡಬೇಕು ಎಂಬುದಾಗಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.