Homeಸುದ್ದಿಗಳುಮಹಾಪುರುಷರ ತತ್ವಾದರ್ಶ ಪಾಲಿಸಬೇಕು - ಅಶೋಕ ಅಲ್ಲಾಪುರ

ಮಹಾಪುರುಷರ ತತ್ವಾದರ್ಶ ಪಾಲಿಸಬೇಕು – ಅಶೋಕ ಅಲ್ಲಾಪುರ

ಸಿಂದಗಿ; ಮಹಾಪುರುಷರ ಜಯಂತಿಗಳು ಸಾರ್ವಕಾಲಿಕ ಇತಿಹಾಸವನ್ನು ತೋರಿಸುತ್ತವೆ ಶಿವಯೋಗಿ ಸಿದ್ಧರಾಮೇಶ್ವರರು ಮನುಕುಲವನ್ನು ವಚನಗಳ ಮೂಲಕ ಉದ್ಧಾರ ಮಾಡಿದ್ದಾರೆ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಾಗ ಶರಣರ ಜಯಂತಿಗೆ ಅರ್ಥ ಬರುತ್ತದೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಅಭಿಮತ ವ್ಯಕ್ತ ಪಡಿಸಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ 850 ನೆಯ ಜಯಂತ್ಯುತ್ಸವದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಸಿದ್ದರಾಮೇಶ್ವರರು ಕಾಯಕಯೋಗಿಗಳು ಅವರಂತೆ ಅವರ ಸಮುದಾಯ ಕುಲಕಸುಬನ್ನು ಮಾಡುವುದರ ಜೊತೆಗೆ ಸಾಮಾಜಿಕ ಚಿಂತನೆಯಲ್ಲಿ ತೊಡಗಿ ಮಹಾಪುರುಷರ ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯವಾಗುವಂತೆ ಕಿರುಹೊತ್ತಿಗೆ ಮುದ್ರಿಸಿ ಮನೆ ಮನೆಗೆ ಹಂಚುವ ಕಾರ್ಯವಾಗಬೇಕು ಎಂದರು.

ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಮಹಾರಾಷ್ಟ್ರದ ಅಂದಿನ ಸೊನ್ನಲಗಿ ಇಂದಿನ ಸೊಲ್ಲಾಪುರದ ಮುದ್ದುಗೌಡ, ತಾಯಿ ಸಗ್ಗಲೆದೇವಿಯ ಅಪರೂಪದ ಮಗನಾಗಿ ಜನಿಸಿದ ಧೂಳಿ ಮಹಾಂಕಾಳ ಹುಟ್ಟಿನಿಂದ ಮೂಕನಾಗಿ ದನಗಳನ್ನು ಕಾಯುತ್ತಿರುವ ಸಂದರ್ಭದಲ್ಲಿ ಮಲ್ಲಯ್ಯನ ದರ್ಶನ ಭಾಗ್ಯ ಪಡೆದು ಮಲ್ಲಯ್ಯನಿಗೆ ಉಣಬಡಿಸಲು ಶ್ರೀಶೈಲಕ್ಕೆ ಹೋಗಿ ಮಲ್ಲಯ್ಯನಿಂದಲೇ ಬರಮಾಡಿಕೊಂಡು ವರಪಡೆದ ಮಹಾಜ್ಞಾನಿ. ಅಲ್ಲಿಂದ ದೇಶ ಸಂಚಾರ ಮಾಡುತ್ತ ಊರಿಗೊಂದು ಕೆರೆ, ದೇವಾಲಯಗಳನ್ನು ನಿರ್ಮಿಸುತ್ತ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ನಿರ್ಮಿಸಿದ ಅನುಭವ ಮಂಟಪದಲ್ಲಿ ಸಮಕಾಲಿನ ಶರಣರಲ್ಲಿ ಸಿದ್ದರಾಮೇಶ್ವರರು ಕಾಯಕಯೋಗಿ ಎನಿಸಿಕೊಂಡು ಮೂರನೇಯ ಅಧ್ಯಕ್ಷರಾಗಿ ಶರಣ ತತ್ವವನ್ನು ಮೈಗೂಡಿಸಿಕೊಂಡು ಗುರು ಚನ್ನಬಸವಣ್ಣನವರಿಂದ ಲಿಂಗ ದಿಕ್ಷೇ ಪಡೆದುಕೊಂಡು ಕಾಯಕದೊಂದಿಗೆ ವಚನ ಕ್ರಾಂತಿ ಮಾಡಿ ಸುಮಾರು 68 ಸಾವಿರ ವಚನಗಳನ್ನು ರಚಿಸಿ 770 ಅಮರಗಣಂಗಳಲ್ಲಿ ಜೀವಂತ ಸಮಾಧಿಯಾಗಿದ್ದವರು ಸಿದ್ದರಾಮೇಶ್ವರ ಅವರು ಮಾತ್ರ. ಕಾರಣ ಅವರ ಬಿಟ್ಟುಹೋದ ತತ್ವ ಆದರ್ಶಗಳು ಮುಂದಿನ ಪೀಳಿಗೆಗೆ ಪೂರಕವಾಗಬೇಕಲ್ಲದೆ ಕುಲಕಸುಬನ್ನು ಬಿಡದೇ ಮುಂದುವರೆಸಿಕೊಂಡು ಹೋಗಿ ಎನ್ನುವ ಸಂದೇಶವನ್ನು ಮರೆಯಬಾರದು ಎಂದು ತಿಳಿಸಿದರು.

ತಹಶೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಮಹಾರಾಷ್ಟ್ರ ರಾಜ್ಯದ ಸೊನ್ನಲಗಿಯಲ್ಲಿ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯನ್ನು ಸಾರುವ ಮೂಲಕ ಮನಕುಲ ಹಾಗೂ ಪ್ರಾಣಿ ಪಕ್ಷಿಗಳ ಉಳಿವಿಗೆ ಕೆರೆ ಕಟ್ಟೆಗಳನ್ನು ಕಟ್ಟುತ್ತ ಶಿವಯೋಗಿಯಾಗಿ ಕರ್ಮಯೋಗಿ, ಕಾಯಕಯೋಗಿ ಎನ್ನುವ ನಾಮಾಂಕಿತ ಪಡೆದುಕೊಂಡಿದ್ದಾರೆ. ಚೆನ್ನಮಲ್ಲಿಕಾರ್ಜುನರ ಶಿಷ್ಯನಾಗಿ ಗುರುವನ್ನೆ ಮೀರಿಸಿದ ಪರಮ ಶಿಷ್ಯ ಎನ್ನಿಸಿಕೊಂಡವರಲ್ಲಿ ಅಗ್ರಗಣ್ಯರು ಎಂದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಶಿರಸ್ತೆದಾರರಾದ ಜಿ.ಎಸ್.ರೋಡಗಿ, ಸುರೇಶ ಮ್ಯಾಗೇರಿ, ಕಂದಾಯ ಇಲಾಖೆಯ ತಾರನಾಳ ಮೇಡಂ, ರಾಮನಗೌಡ ರಾಂಪೂರ, ಮುತ್ತಪ್ಪ ಪಾತ್ರೋಟಿ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ರವಿ ಚಾಕರೆ, ತಿರುಪತಿ ಬಂಡಿವಡ್ಡರ, ಸಾಗರ ವಡ್ಡರ, ಪರಶುರಾಮ ಯಂಪೂರೆ, ಬಸವರಾಜ ಬಂಡಿವಡ್ಡರ, ಬಸವರಾಜ ಬನಪಟ್ಟಿ, ದಯಾನಂದ ಗೊಳಸಾರ, ಸಂತೋಷ ಕಾಂಬಳೆ, ಹರೀಶ ಬಿಸನಾಳ, ಪ್ರವೀಣ ಯಂಪೂರೆ, ಮುತ್ತು ಆಲಕುಂಟೆ, ಸಾಗರ ಬಜಂತ್ರಿ, ಪಿಂಟು ಇರಕಲ್, ಚಂದ್ರಶೇಖರ ಬಜಂತ್ರಿ, ಪರಶುರಾಮ ಬನಪಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group