ಸಿಂದಗಿ: ಆಲಮೇಲ ಪಟ್ಟಣದ ಕಡಣಿ ಸಮೀಪದಲ್ಲಿರುವ ಕೆಪಿಆರ್ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಅಧಿಕಾರಿ ಗಂಗಾಧರ ಹುಕ್ಕೇರಿ ಇವರು ರೈತರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದಲ್ಲದೆ ದುರಾಡಳಿತ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಆಲಮೆಲ ಭಾಗದ ಪ್ರಗತಿ ಪರ ರೈತರಿಂದ ಮಂಗಳವಾರ ಕಾರ್ಖಾನೆಗೆ ಮುತ್ತಿಗೆ ಹಾಕಿ ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ, ಕಬ್ಬು ವಿಭಾಗದ ಅಧಿಕಾರಿ ಗಂಗಾಧರ ಹುಕ್ಕೇರಿ ಕಾರ್ಖಾನೆಯಲ್ಲಿ ಕೆಲವು ರಾಜಕೀಯ ಪುಡಾರಿಗಳ ಸಹಕಾರದಿಂದ ಕಬ್ಬು ಕಟ್ಟಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಇದರ ಜೊತೆಗೆ ಕಬ್ಬು ಕಟ್ಟಾವು ಮಾಡುವ (ಟೊಳಿ) ಗುಂಪುಗಳಿಗೆ ತಮ್ಮ ಮನಸ್ಸಿಗೆ ಬಂದ ಹಾಗೆ ಈ ಭಾಗದ ರೈತರ ಕಬ್ಬು ಕಟಾವು ಮಾಡದೇ ಬೇರೆ ತಾಲೂಕುಗಳಿಗೆ ಕಳುಹಿಸಿ ಅಲ್ಲಿನ ಕಬ್ಬುಗಳನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸುತ್ತಿದ್ದು, ಈ ಕುರಿತು ಈ ಭಾಗದ ರೈತರು ಪ್ರಶ್ನಿಸಿದರೆ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.
ನಂತರ ಕಾರ್ಖಾನೆಯ ಅಧಿಕಾರಿ ಗಂಗಾಧರ ಹುಕ್ಕೇರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಿ ಮಾತನಾಡಿದ ಅವರು, ನಾನು ರೈತರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಹಾಗೂ ಯಾವುದೇ ರಾಜಕೀಯ ವ್ಯಕ್ತಿಗಳ ಜೊತೆ ಸಂಪರ್ಕವೂ ಇಲ್ಲ, ಕಟ್ಟಾವಿನಲ್ಲಿ ಸ್ವಲ್ಪ ವಿಳಂಬವಾಗಿರಬಹುದು ಆದರೆ ಸದ್ಯ ಎರಡು ದಿನದಲ್ಲಿ ಈ ಭಾಗದ ರೈತರ ಕಬ್ಬು ಕಟಾವು ಮಾಡಲಾಗುವದು, ಮುಂದೆ ಈ ತರಹದ ಸಮಸ್ಯೆ ಆಗದ ಹಾಗೆ ನೋಡಿಕೊಳ್ಳುತ್ತೇನೆ, ಇಲ್ಲಿನ ರೈತರಿಗಾಗಿ ನಿರ್ಮಿತವಾದ ಕಾರ್ಖಾನೆ ಇದಾಗಿದೆ ಕಾರಣ ರೈತರು ಸಹಕರಿಸಬೇಕು ಎಂದು ವಿನಂತಿಸಿದರು. ನಂತರ ಪ್ರತಿಭಟನಾಕಾರರು ಅಧಿಕಾರಿಯ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ದಾದಾ ಎಲ್ಲಗಾರ, ಮುನ್ನಾ ಚೌಧರಿ, ಉಮ್ಮರ ಬಿಳವಾರ, ರಫೀಕ ಕೋತಂಬರಿ, ದಯಾನಂದ ನಾರಾಯಣಕರ, ಸುನೀಲ ನಾರಾಯಣಕರ, ಸೈಪನ ಸೌದಾಗರ, ರಾಜು ಲ್ಯಾವಟೆ, ಅರ್ಜುನ ಮರಾಠೆ, ದೇವಾನಂದ ಲ್ಯಾವಟೆ, ವಿಶಾಲ ನಾರಾಯಣಕರ, ರಮೇಶ ಲ್ಯಾವಟೆ ಸೇರಿದಂತೆ ಹಲವರಿದ್ದರು.