ಮೂಡಲಗಿ – ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪಂಚಮಸಾಲಿ ಸಮಾಜವನ್ನು ರಾಜಕಾರಣಿಗಳು ಬಲಿಕೊಡಬಾರದು ಒಂದು ವೇಳೆ ಅಂಥ ಪ್ರಯತ್ನ ಮಾಡಿದರೆ ಮುಂಬರುವ ಚುನಾವಣೆಗಳಲ್ಲಿ ಸಮಾಜದ ರಾಜಕಾರಣಿಗಳನ್ನು ಉದ್ದೇಶಪೂರ್ವಕವಾಗಿ ಸೋಲಿಸಬೇಕಾಗುತ್ತದೆ ಎಂದು ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಜಲಗಿ ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಮೂಡಲಗಿ ತಾಲೂಕಿನ ಪಂಚಮಸಾಲಿ ಸಮಾಜದ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜ ಒಂದುಗೂಡಲು ಒಂದೇ ಪೀಠ, ಒಬ್ಬರೇ ಗುರುಗಳು ಹಾಗೂ ಒಂದೇ ಧರ್ಮಕ್ಷೇತ್ರ ಇರಬೇಕು ಇಲ್ಲವಾದರೆ ದಿಕ್ಕಿಲ್ಲದ ಬಾಣದಂತೆ ಎಲ್ಲೆಲ್ಲೋ ಚದುರಿಹೋಗಿ ಸಮಾಜ ಹಾಳಾಗುತ್ತದೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪಂಚಮಸಾಲಿ ಸಮಾಜವನ್ನು ಬಲಿಕೊಡಬಾರದು. ನಿರಾಣಿ ಕುಟುಂಬವು ಸಮಾಜ ಕಟ್ಟಲು ಗಮನಹರಿಸಬೇಕೆ ಹೊರತು ಸಮಾಜ ಒಡೆಯಬಾರದು ಎಂದು ಆಕ್ರೋಶ ಹೊರಹಾಕಿದರು.
ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ನಿಂಗಪ್ಪ ಫಿರೋಜಿ ಮಾತನಾಡಿ, ಮದುವೆ, ಮುಂಜಿವೆಗಳಿಗಾಗಿ ಅವರು ನೂರು ಪೀಠಗಳನ್ನು ಮಾಡಿಕೊಳ್ಳಲಿ ನಮ್ಮ ತಕರಾರು ಇಲ್ಲ ಆದರೆ ಸಮಾಜದ ಅಭಿವೃದ್ಧಿ ಗಾಗಿ ಇರುವುದು ಒಂದೇ ಪೀಠ. ಅದು ಕೂಡಲಸಂಗಮದಲ್ಲಿ ಇದೆ ಅದಕ್ಕೆ ಒಬ್ಬರೇ ಶ್ರೀಗಳು. ಇನ್ನು ಮೂರನೇ ಪೀಠ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ, ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ದೀಪಕ ಜುಂಜರವಾಡ, ಸದಾಶಿವ ನಿಡಗುಂದಿ, ಮಲ್ಲಪ್ಪಾ ಗೋಡಿಗೌಡರ, ಬಸವರಾಜ ರಂಗಾಪೂರ, ಶಿವಬಸು ರಂಗಾಪೂರ, ಈಶ್ವರ ಢವಳೇಶ್ವರ, ಹಣಮಂತ ಶಿವಾಪೂರ, ಸುಭಾಸ ಜೇನಕಟ್ಟಿ, ಸಂತೋಷ ಕೊಳವಿ ಹಾಗೂ ರವಿ ಮಹಾಲಿಂಗಪೂರ ಇದ್ದರು.