ಮೂಡಲಗಿ: ಗ್ರಾಮಾಂತರ ಪ್ರದೇಶದ ಜಾತ್ರೆಗಳು ಜಾನುವಾರುಗಳ ಕ್ರೀಡೆಗಳಿಗೆ ಉತ್ತೇಜನ ನೀಡುತ್ತವೆ. ತೆರೆಬಂಡಿ ಸ್ಫರ್ಧೆ, ಚಕ್ಕಡಿ ಓಟದ ಸ್ಫರ್ಧೆ, ಭಾರ ಎಳೆಯುವ ಸ್ಪರ್ಧೆ ಹಾಗೂ ನೇಗಿಲು ಸ್ಫರ್ಧೆಯಂತಹ, ಜಾನುವಾರುಗಳು ಭಾಗವಹಿಸಬಹುದಾದ ಸ್ಪರ್ಧೆಗಳಲ್ಲಿ ರೈತ ಜಾತ್ರೆಯ ಖುಷಿಯನ್ನು ತಾನೊಬ್ಬನೆ ಅನುಭವಿಸದೇ ಜಾನುವಾರುಗಳೊಂದಿಗೂ ಹಂಚಿಕೊಳ್ಳುವ ಕಾರ್ಯ ಅತ್ಯಂತ ಶ್ಲಾಘನೀಯವಾದ್ದು ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ (ಫೆ-15)ರಂದು ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಎತ್ತುಗಳ ತೆರೆಬಂಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಮಸಗುಪ್ಪಿ ಒಂದು ಸಣ್ಣ ಗ್ರಾಮವಾದರೂ ಕೂಡ ಸುಮಾರು ಹತ್ತು ಕೋಟಿಯಷ್ಟು ಖರ್ಚು ಮಾಡಿ ಬಿಳಿ ಕಲ್ಲಿನಲ್ಲಿ ಭವ್ಯವಾದಂತಹ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ನಿರ್ಮಾಣ ಮಾಡಿದ್ದು ಒಂದು ಐತಿಹಾಸಿಕ ದಾಖಲೆ. ಸರ್ಕಾರದ ಯಾವುದೇ ನೆರವು ಇಲ್ಲದೇ ಜನ ಸಾಮಾನ್ಯರು ತಮ್ಮ ಕಾಯಕದಲ್ಲಿ ಬಂದಂತಹ ಹಣವನ್ನು ಇದಕ್ಕೆ ಹಾಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ, ಗ್ರಾಮೀಣ ಪ್ರದೇಶದ ಜನರ ಒಗ್ಗಟ್ಟು ಮತ್ತು ಅವರು ಕೆಲಸ ಮಾಡುವಂತಹ ಮನೋಬಲ ಸಾಬೀತು ಮಾಡಿದ್ದಾರೆ, ಇದು ಉಳಿದವರಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪ್ಪಯ್ಯ ಬಡ್ನಿಂಗೋಳ, ಲಕ್ಷ್ಮಣ ನರಗುಂದ, ಭರಮಪ್ಪ ಗಂಗನ್ನವರ, ರಾಮಣ್ಣ ಗಂಗನ್ನವರ, ವಿಠ್ಠಲ ಹೊಸೂರ, ಭೀಮಶೆಪ್ಪ ಬಡ್ನಿಂಗೋಳ, ದುಂಡಪ್ಪ ಪಂತೋಜ, ರಾಮಪ್ಪ ತಿಗಡಿ, ಬಸವರಾಜ ಗಾಡವಿ, ಸಂಜು ಹೊಸಕೋಟಿ, ಬಸವರಾಜ ಭುಜನ್ನವರ, ಈಶ್ವರ ಗಾಡವಿ, ಪ್ರಕಾಶ ಗೊಂದಿ, ಪಾಂಡು ಮಳಲಿ ಸೇರಿದಂತೆ ಜಾತ್ರಾ ಕಮೀಟಿ ಸದಸ್ಯರು, ಭಕ್ತಾಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.