ಸಿಂದಗಿ: ಜೀವನದ ಪ್ರತಿ ಹಂತದಲ್ಲಿಯೂ ಮಹಿಳೆಗೆ ಸಾಕಷ್ಟು ಸಮಸ್ಯೆಗಳು ಎದುರಾದರೂ ಅವಳು ಧೈರ್ಯಗೆಡದೇ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿದವಳಾಗಿದ್ದಾಳೆ ಎಂದು ಬೀಳಗಿ ತಾಲೂಕಿನ ಹೆರ್ಕಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಧಾ ಎಂ. ರೆಬಿನಾಳ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಈ ಶಕ್ತಿಯನ್ನು ನಾವು ಶಿಕ್ಷಣದ ಮೂಲಕ ಪಡೆಯಬಹುದು ಕಾರಣ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸಾವಿಗೆ ಶರಣಾಗದೇ ಹೆಣ್ಣು ಮಕ್ಕಳು ಧೈರ್ಯವಾಗಿ ಬದುಕನ್ನು ಎದುರಿಸಿ ತೋರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸಮ್ಮುಖ ಸಾನ್ನಿಧ್ಯ ವಹಿಸಿದ್ದ ಪೂಜ್ಯಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಮಹಿಳೆಯರು ಹೆಚ್ಚು ಹೆಚ್ಚು ಸುಶಿಕ್ಷಿತರಾಗಬೇಕು, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಮನವೊಲಿಸಿ ತಮ್ಮ ಶಿಕ್ಷಣವನ್ನು ಮುಂದುವರೆಸಬೇಕು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹಿತ ಮಾತುಗಳನ್ನಾಡಿ, ಹೆಣ್ಣು ಮಕ್ಕಳು ಪುರುಷರಿಗಿಂತಲೂ ಯಾವುದೇ ಕ್ಷೇತ್ರದಲ್ಲಿಯೂ ಕಡಿಮೆಯಿಲ್ಲದಂತೆ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಮಹಿಳೆಯರು ಯಾರ ಮೇಲೆಯೂ ಅವಲಂಬಿತರಾಗದೇ ಸ್ವಾವಲಂಬಿಗಳಾಗಬೇಕೆಂದು ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಹೆಣ್ಣುಮಕ್ಕಳ ಬಗ್ಗೆ ಹೇಳುತ್ತಾ, ವಿಕಲಚೇತನ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬದುಕಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ ಮಠ, ಪ್ರಾಚಾರ್ಯ ಎಂ.ಎಸ್ ಹೈಯಾಳಕರ್, ಕಾರ್ಯಾಧ್ಯಕ್ಷೆ ಹೇಮಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮುಸ್ಕಾನ ಛಾಪಿ ವೇದಿಕೆಯ ಮೇಲಿದ್ದರು.
ವಿದ್ಯಾರ್ಥಿನಿ ಆಯಿಶಾ ಕಾಚೂರ ನಿರೂಪಿಸಿದರು, ಉಪನ್ಯಾಸಕ ಗಿರೀಶ ಕುಲಕರ್ಣಿ ಸ್ವಾಗತಿಸಿದರು, ಕುಮಾರಿ ಲಾಲಬಿ ಕಲಬುರಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಕುಮಾರಿ ಮುಸ್ಕಾನ ಛಾಪಿ ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಎಸ್.ಎಂ. ಪೂಜಾರಿ, ಡಾ.ಚನ್ನಪ್ಪ ಕಟ್ಟಿ, ವೀರೇಶ ಜೊಗೂರ, ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳಾದ ವಿಜಯಲಕ್ಷ್ಮಿ ಭಜಂತ್ರಿ, ಬಾಹುಬಲಿ ಒನಕುದರಿ, ಬಿ.ಬಿ ಕುಂಬಾರ, ಯು.ಸಿ ಪೂಜೇರಿ, ಎಂ.ಪಿ. ಸಾಗರ. ಜಿ.ಎ. ನಂದಿಮಠ, ಆರ್.ಎ. ಹಾಲಕೇರಿ, ಎಸ್.ಎಸ್. ಸಜ್ಜನ, ಆಸಿಫ ಕೊಂಕಣಿ, ಲಕ್ಷ್ಮಿ ಮಾರ್ಸನಳ್ಳಿ, ಹೇಮಾ ಕಾಸರ, ನಾಗಯ್ಯ ಹಿರೇಮಠ, ಲಕ್ಷ್ಮಿ ಭಜಂತ್ರಿ ಹಾಗೂ ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.