ಸವದತ್ತಿಃ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ವಿಭಾಗದ ಸಂಪನ್ಮೂಲ ವ್ಯಕ್ತಿಯಾದ ವ್ಹಿ.ಸಿ.ಹಿರೇಮಠ ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ನೌಕರರ ಕ್ರೀಡಾಕೂಟದಲ್ಲಿ ಟೆನಿಸ್ ವಿಭಾಗದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಬಿ.ಆರ್.ಸಿ ಕೇಂದ್ರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ. ಸವದತ್ತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ರಾಜ್ಯ ಸರ್ಕಾರಿ ನೌಕರರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಆನಂದ ಮೂಗಬಸವ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ (ಪ್ರೌಢ) ಡಾ.ಬಿ.ಐ.ಚಿನಗುಡಿ. ರತ್ನಾ ಸೇತ್ಸನದಿ, ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ.ಸಿ.ವ್ಹಿ.ಬಾರ್ಕಿ, ವೈ.ಬಿ.ಕಡಕೋಳ, ಎಂ.ಎಂ.ಸಂಗಮ, ಲೆಕ್ಕ ಪರಿಶೋಧಕರಾದ ಜಗನ್ನಾಥ ಸಿದ್ಲಿಂಗನ್ನವರ, ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತ್ಸನದಿಯವರಿಂದ ಪ್ರಾರ್ಥನೆ ಜರುಗಿತು.
ಡಾ.ಬಿ.ಐ.ಚಿನಗುಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡಿ, ಹಿರೇಮಠವರು ಕಳೆದ ಐದು ವರ್ಷಗಳಿಂದ ನೌಕರರ ಸಂಘದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರು ರಾಜ್ಯ ಮಟ್ಟದಲ್ಲಿಯೂ ಕೂಡ ಜಯಶಾಲಿಯಾಗಿ ರಾಷ್ಟ್ರಮಟ್ಟದಲ್ಲಿ ಕೂಡ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ನೌಕರರ ಸಂಘದ ಅಧ್ಯಕ್ಷ ಆನಂದ ಮೂಗಬಸವ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ ಹಿರೇಮಠರ ಸಾಧನೆಗೆ ಶುಭ ಕೋರಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವ್ಹಿ.ಸಿ.ಹಿರೇಮಠ, ಇಂದು ತಮ್ಮೆಲ್ಲರ ಈ ಹಾರೈಕೆ ಮತ್ತು ಗೌರವ ಸನ್ಮಾನಕ್ಕೆ ನಾನು ಚಿರಋಣಿ ಮುಂದಿನ ದಿನಗಳಲ್ಲಿ ಸತತ ಪ್ರಯತ್ನದ ಮೂಲಕ ಉತ್ತಮ ಸಾಧನೆಗೈಯಲು ಶ್ರಮವಹಿಸುವೆನು ಎಂದು ನುಡಿದರು. ಕಾರ್ಯ ಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮಾತನಾಡಿ, ಕ್ರೀಡೆಗಳು ಮನುಷ್ಯನನ್ನು ದೈಹಿಕ ಮಾನಸಿಕ ಶಾರೀರಿಕವಾಗಿ ಸದೃಡಪಡಿಸುತ್ತವೆ. ನಿತ್ಯವೂ ಮನುಷ್ಯನನ್ನು ಚಲನಶೀಲರನ್ನಾಗಿಸುತ್ತವೆ.
ಉಲ್ಲಾಸಭರಿತನನ್ನಾಗಿಸುತ್ತವೆ. ಹಿರೇಮಠರ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಉನ್ನತಿಯನ್ನು ಕಾಣಲಿ ಎಂದು ಶುಭ ಕೋರಿದರು. ಚಿನಗುಡಿ ಕಾರ್ಯಕ್ರಮದ ಕೊನೆಗೆ ವಂದಿಸಿದರು.