ಸಿಂದಗಿ: 2022-23ನೇ ಸಾಲಿನ ಅಂದಾಜು ಆಯ-ವ್ಯಯದ ಬಜಟ್ ಮಂಡನೆಯಲ್ಲಿ ಪುರಸಭೆಯ ಎಲ್ಲ ಶುಲ್ಕಗಳ ಪಾವತಿಸಲಾದ ಒಟ್ಟು ರೂ 1,453 ಲಕ್ಷಗಳ ಮೊತ್ತದಲ್ಲಿ ರೂ. 1,235 ಲಕ್ಷಗಳ ವೆಚ್ಚಗಳನ್ನು ಭರಿಸಿ ಅಂದಾಜು ರೂ 22 ಲಕ್ಷಗಳ ಉಳಿತಾಯ ಬಜೆಟ್ ಆಗಿದೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2022-23ನೇ ಸಾಲಿನ ಅಂದಾಜು ಆಯ-ವ್ಯಯದ ಬಜಟ್ ಮಂಡನೆ ಮಾಡಿದರು.
ಆಡಳಿತ-ಸಾಮಾನ್ಯ-ಅನಿರ್ಬಂಧಿತ ಅನುದಾನ ರೂ 446-00 ಲಕ್ಷ ಸೇರಿದಂತೆ ವಿವಿಧ ಶುಲ್ಕಗಳನ್ನೊಳಗೊಂಡಂತೆ ಒಟ್ಟು ರೂ 874.53 ಲಕ್ಷ ಇದರಲ್ಲಿ 693.46 ವೆಚ್ಚಗಳನ್ನು ಭರಿಸಿ ಒಟ್ಟು ರೂ.1,453.37 ಲಕ್ಷ ಬಂಡವಾಳ ಆದಾಯದಲ್ಲಿ 1,453.37 ಅಂದಾಜು ವೆಚ್ಚ ಮಾಡಿ ಅಭಿವೃದ್ಧಿಗೆ ಮುಂದಾಗಿ ರೂ.1367.18 ಲಕ್ಷಗಳ ವೆಚ್ಚದಲ್ಲಿ ಮೀಸಲಾತಿಯನ್ನಾಧರಿಸಿ ಆಯಾ ವಾರ್ಡುಗಳ ಅಭಿವೃದ್ಧಿಗೆ ಮುಂದಾಗಲಾಗುತ್ತಿದೆ ಎನ್ನುತ್ತಿದ್ದಂತೆ ಉಪಾಧ್ಯಕ್ಷ ಹಾಸೀಂ ಆಳಂದ ಸಹಮತ ತೋರಿಸಿದರು.
ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಪೌರ ಕಾರ್ಮಿಕರಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆಯಿತ್ತು ಆದರೆ ಈಗ ನಿಲ್ಲಿಸಿಬಿಟ್ಟಿದ್ದಾರೆ ಹಾಗಿದ್ದರೆ ಅವರೇನು ಮನುಷ್ಯರಲ್ಲವೇ ನಾಳೆಯಿಂದ ಉಪಾಹಾರದ ವ್ಯವಸ್ಥೆ ಮಾಡಿ ಎಂದು ಹೇಳುತ್ತ 2022-23ನೇ ಸಾಲಿನಲ್ಲಿ ಮಂಡಿಸುತ್ತಿರುವ ಬಜೆಟ್ ಸರಿಯಾಗಿಲ್ಲ. ಊರು ಸ್ಮಶಾನವಾಗಿದೆ ಇನ್ನೂವರೆಗೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಕಾರಣ ಹಿಂದಿನ ವರ್ಷದ ಬಜೆಟ್ದ ಎಲ್ಲ ವಿವರಗಳನ್ನು ನೀಡಿ ಬಜೆಟ್ ಮಂಡಿಸಿ ಇಲ್ಲದಿದ್ದರೆ ಮುಂದೂಡಿ ಎಂದು ಪಟ್ಟು ಹಿಡಿದರು. ಅದಕ್ಕೆ ಕಳೆದ ಬಾರಿಯ ಎಲ್ಲ ದಾಖಲೆಗಳನ್ನು ಪೂರೈಯಿಸಿ ಈ ಆಯವ್ಯಯ ಬಜೆಟ್ ಇದೆ ಅದಕ್ಕೆ ಅಡ್ಡಿ ಪಡಿಸುವುದು ಬೇಡ ಎಂದು ಶಾಂತವೀರ ಬಿರಾದಾರ ಸಮಜಾಯಿಸಿದರು.
ಮಧ್ಯೆ ಪ್ರವೇಶಿಸಿದ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಜನಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ದಾಖಲೆಗಳನ್ನು ಪೂರೈಸಲು 8 ದಿನಗಳ ಗಡುವು ಪಡೆದು ಸಭೆ ನಡೆಸಿದರು.
ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ಅಮೃತ ಯೋಜನೆಯಡಿ ಬಂದ ರೂ. ಕೋಟಿಯ ಅಂದಾಜು ಪತ್ರಿಕೆ ರೂಪಿಸುವಾಗ ಮೀಸಲಾತಿ ಪರಿಗಣಿಸದೇ ಮನಬಂದಂತೆ ಹಂಚಿಕೆ ಮಾಡಿದ್ದೀರಿ ಆ ಕಾರಣಕ್ಕೆ ಹಿಂದಿನ ಅವಧಿಯಲ್ಲಿ ಇಟ್ಟಂಥ ರೂ. 4,28,940 ಅನುದಾನ ಪೋಲಾಗಿದೆ ಅದಕ್ಕೆ ಎಲ್ಲ ಬಜೆಟ್ ಗಳನ್ನು ಮೀಸಲಾತಿಯನ್ನು ಆಧಾರಿಸಿ ಸಂಪೂರ್ಣ ಮಾಹಿತಿ ಒದಗಿಸಿ ಸಭೆ ನಡೆಸಿ ಇಲ್ಲದಿದ್ದರೆ ಮೀಸಲು ವಾರ್ಡಿನಿಂದ ಆಯ್ಕೆಯಾದ 5 ಜನ ಸದಸ್ಯರು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸದಸ್ಯ ಭಾಷಾಸಾಬ ತಾಂಬೋಳಿ ಮಾತನಾಡಿ, ವಾರ್ಡ 7 ರಲ್ಲಿ ಮಹಿಳಾ ಶೌಚಾಲಯಗಳಿದ್ದು ಅವುಗಳ ನಿರ್ವಹಣೆ ಮಾಡುವಂತೆ ಸಾಕಷ್ಟು ಬಾರಿ ಹೇಳಿದ್ದಾಗಿದೆ ಯಾವುದೆ ಪ್ರಯೋಜನೆ ಕಂಡಿಲ್ಲ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಆಶ್ರಯ ಮನೆ ಯೋಜನೆಯಲ್ಲಿ ಬರೀ ಏಜೆಂಟರ ಹಾವಳಿಯಾಗಿದೆ ಅದಕ್ಕೆ ಮನೆಯಿಲ್ಲದವರಿಗೆ ನಿರಾಶ್ರಿತರಿಗೆ ಸೂರು ಸಿಗುತ್ತಿಲ್ಲ. ಪುಸ್ತಕ ಪ್ರಕಾರ ಬಜೆಟ್ ಮಂಡನೆಯಾಗಿದೆ ಆದರೆ ಕ್ರಿಯಾತ್ಮಕ ಬಜೆಟ್ ಆಗಿಲ್ಲ. ದಾಖಲೆ ನೀಡದಿದ್ದರೆ ಹೋರಾಟದ ದಾರಿ ಕಂಡುಕೊಳ್ಳಬೇಕಾಗುತ್ತದೆ ಸದಸ್ಯ ಸಂದೀಪ ಚೌರ ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ ಯರನಾಳ ಮಾತನಾಡಿ, ಭೂಗಳ್ಳರಿಂದ ಜಾಗೆಯ ಮಾಲೀಕರಿಗೆ ಭಯವಿದೆ ಅದು ಸ್ಮಶಾನ ರಸ್ತೆ ಅತೀಕ್ರಮವಾಗಿದೆ ಅದು ಯಾಕೆ ಪರಿಶೀಲನೆಯಾಗುತ್ತಿಲ್ಲ ನಿಮಗೆ ಎಂಜಲು ಬಂದು ತಲುಪಿದೆಯಾ ಎಂದು ಪ್ರಶ್ನಿಸಿದ ಅವರು ತಳವಾರ ಸಮಾಜದ 3 ಸಾವಿರಕ್ಕೂ ಅಧಿಕ ಜನರಿಗೆ ಸೂರು ಇಲ್ಲದೆ ಪರದಾಡುತ್ತಿದ್ದಾರೆ ಇವರೆಗೂ ಒಂದು ಮನೆ ಅವರಿಗೆ ಮುಟ್ಟಿಲ್ಲ ಹಾಗಿದ್ದರೆ ಅದಕ್ಕೆ ಸುಪ್ರೀಮ್ ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಯ ಮೇಲೆ ಸಿಡಿಮಿಡಿಗೊಂಡರು.
ಸದಸ್ಯ ರಾಜಣ್ಣ ನಾರಾಯಣಕರ ಮಾತನಾಡಿ, ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಿ ವಾರ್ಡುಗಳ ಸಮಸ್ಯೆಗಳಿಗೆ ಅಣಿಯಾಗಿ ಎಂದರು.
ಸಭೆಗೆ ಮುಂಚೆ ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ ಅವರು 2022-23ನೇ ಸಾಲಿನ ಬಜೆಟ್ ಆಯವ್ಯಯದ ಸಂಪೂರ್ಣ ವರದಿಯನ್ನು ಮಂಡಿಸಿದರು.