ಬೆಳಗಾವಿ: ಬೆಟಗೇರಿ ಕೃಷ್ಣಶರ್ಮರ ಕವಿತೆಗಳ ಸಂಗೀತಾತ್ಮಕ ಅಧ್ಯಯನ ನಡೆಯಬೇಕು. ಅವರ ಕವಿತೆಗಳಲ್ಲಿ ರಾಗ ಹಾಗೂ ತಾಳಗಳ ಕುರಿತು ಸ್ಪಷ್ಟ ನಿರ್ದೇಶಿಕೆಗಳಿವೆ. ಕಾವ್ಯ ಗೇಯತೆ ಅವರ ಕಾವ್ಯದ ವೈಶಿಷ್ಟ್ಯ ಗಣ ಯತಿ ನಿಯಮ ಪ್ರಾಸಗಳ ಸ್ಪಷ್ಟತೆ ಅವರ ಕಾವ್ಯದಲ್ಲಿ ಎದ್ದು ಕಾಣುತ್ತಿದೆ. ಪ್ರಾದೇಶಿಕತೆ ಅದರಲ್ಲೂ ದೇಶೀತನ ಅವರ ಕಾವ್ಯದ ಮತ್ತೊಂದು ವೈಶಿಷ್ಟ್ಯವಾಗಿದೆ. ಸಂಗೀತಾತ್ಮಕ ಮತ್ತು ಜಾನಪದೀಯ ನೆಲೆಗಳಿಂದ ಕೃಷ್ಣಶರ್ಮರ ಕಾವ್ಯಗಳನ್ನು ಅಧ್ಯಯನಿಸುವ ಹೊಸ ಸಾಧ್ಯತೆಯಿದೆ ಎಂದು ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಅಭಿಪ್ರಾಯಪಟ್ಟರು.
ಅವರು ಬೆಳಗಾವಿ ನಗರದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಭವನದಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದಿಂದ ದಿನಾಂಕ ೧೬.೦೪.೨೦೨೨ ರಂದು ಏರ್ಪಡಿಸಿದ್ದ ಆನಂದ ಕಂದರ ೧೨೨ನೆಯ ಜಯಂತ್ಯುತ್ಸವದ ಅಂಗಾವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ ರಾಘವೇಂದ್ರ ಪಾಟೀಲ ಅವರು ಮಾತನಾಡಿ “ನವೋದಯದ ಕವಿಗಳಲ್ಲೇ ವೈಶಿಷ್ಟ್ಯತೆಯಿಂದ ಗುರುತಿಸಿಕೊಳ್ಳುವ ಬೆಟಗೇರಿ ಕೃಷ್ಣಶರ್ಮರು ಒಬ್ಬ ಸಂಸ್ಕೃತಿನಿಷ್ಠ ಲೇಖಕ, ಕವಿ ಮಾತ್ರವಲ್ಲಿ ಏಕೀಕರಣದ ಪ್ರಮುಖ ಹೋರಾಟಗಾರರಾಗಿದ್ದರು. ಅವರ ಕವಿತೆಗಳ ಬಹುಮುಖಿ ಅಧ್ಯಯನ ಅವಶ್ಯಕತೆಯಿದೆ” ಎಂದರು.
ಹಿರಿಯ ಲೇಖಕರಾದ ಡಾ. ಸರಜೂ ಕಾಟ್ಕರ ಅವರು “ವಸಾಹತು ಚಿಂತನಧಾರೆಗಳಿಂದ ಪ್ರೇರಣೆ ಪಡೆದು ದೇಶೀತನವನ್ನು ಮೈಗೂಡಿಸಿಕೊಂಡ ಅವರ ಕವಿತೆಗಳು ಸಾರ್ವಕಾಲಿಕವಾಗಿ ಮೌಲ್ಯವುಳ್ಳವುಗಳು” ಎಂದರು. ಟ್ರಸ್ಟನ ಸದಸ್ಯ ಕಾರ್ಯದರ್ಶಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿದ್ಯಾವತಿ ಭಜಂತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮ ಆರಂಭವಾಗುವುದಕ್ಕೂ ಬೆಟಗೇರಿ ಕೃಷ್ಣಶರ್ಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಮತಿ. ನಯನಾ ಗಿರಿಗೌಡ ಅವರಿಂದ ಬೆಟಗೇರಿ ಕೃಷ್ಣಶರ್ಮ ಅವರ ಗೀತಗಾಯನ ನಡೆಯಿತು. ಶ್ರೀ ಸತೀಶಗಚ್ಚಿ ತಬಲಾ ಸಾಥ್ ನೀಡಿದರು. ಶ್ರೀ ಯ. ರು. ಪಾಟೀಲ ಡಾ. ಕವಿತಾ ಕುಸಗಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಲೇಖಕಿಯರಾದ ಆಶಾ ಕಡಪಟ್ಟಿ ವಂದಿಸಿದರು.