ಬೆಳಗಾವಿ : ನಾಟಕ ಕಲೆ ಕೇವಲ ಮನರಂಜನೆಗಷ್ಟೇ ಸೀಮಿತವಾಗದೇ ಅರಿವಿನ ವಿಕಾಸಕ್ಕೆ ಪೂರಕವಾಗಿದ್ದು ಸಮಾಜದ ಅಂಕು-ಡೊಂಕುಗಳನ್ನು ಎತ್ತಿ ತೋರಿಸಿ ಸಾಮಾಜಿಕ ಪರಿವರ್ತನೆಗೆ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಅಂತಾ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅಭಿಪ್ರಾಯ ಪಟ್ಟರು.
ನಗರದ ಟಿಳಕ ಚೌಕನಲ್ಲಿರುವ ಗೋಡಬೋಲೆ ಕಲಾಭವನದಲ್ಲಿ ಮೈಸೂರು ರಂಗಾಯಣದವರಿಂದ ಆಯೋಜಿಸಲ್ಪಟ್ಟಿದ್ದ ಎರಡು ದಿನಗಳ ನಾಟಕ ಪ್ರದರ್ಶನದಲ್ಲಿ ಡಾ.ಎಸ್.ಎಲ್. ಭೈರಪ್ಪನವರ “ಪರ್ವ” ಕಾದಂಬರಿ ಆಧಾರಿತ ಪರ್ವ ನಾಟಕ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ರಂಗಾಯಣದ ಉಪ ನಿರ್ದೇಶಕರಾದ ಶ್ರೀಮತಿ ನಿರ್ಮಲಾ ಮಠಪತಿ ಇವರನ್ನು ಸನ್ಮಾನಿಸಿದರು.
ಎಂಟು ಗಂಟೆಗಳ ಕಾಲ ನಡೆದ ಸುದೀರ್ಘ ನಾಟಕ ಬೆಳಗಾವಿಯ ಇಡೀ ಜನರ ಮನಸ್ಸನ್ನು ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಮಹಾಭಾರತದ ಕತೆಯ ಅನೇಕ ದೃಶ್ಯಗಳನ್ನು ಸಾಂಕೇತಿಕವಾಗಿ ಯಶಸ್ವಿಯಾಗಿ ರಂಗಭೂಮಿಯ ಮೇಲೆ ಪ್ರಯೋಗಿಸಿದರು.
ಹಿನ್ನೆಲೆ ಸಂಗೀತವು ಕೂಡ ಅದ್ಭುತವಾಗಿತ್ತು. ಹೀಗೆ ಒಟ್ಟಿನಲ್ಲಿ ಪರ್ವ ನಾಟಕವು ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಕ.ಸಾ.ಪ. ತಾಲೂಕಾ ಘಟಕ ಮೂಡಲಗಿ ಅಧ್ಯಕ್ಷರಾದ ಡಾ.ಸಂಜಯ ಸಿಂದಿಹಟ್ಟಿ, ಕ.ಸಾ.ಪ.ತಾ.ಘಟಕ ಖಾನಾಪೂರ ತಾಲೂಕಿನ ಮಾಜಿ ಅಧ್ಯಕ್ಷರಾದ ವಿಜಯ ಬಡಿಗೇರ, ಲಿಂಗಾಯುತ ಮಹಿಳಾ ಸಮಾಜ ಧುರಿಣೆ ಶ್ರೀಮತಿ.ಶೈಲಜಾ ಬಿಂಗೆ, ಕ.ಸಾ.ಪ.ಬೆಳಗಾವಿ ಜಿಲ್ಲೆ ಮಹಿಳಾ ಪ್ರತಿನಿಧಿ ಶ್ರೀಮತಿ.ಜಯಶ್ರೀ ನಿರಾಕಾರಿ, ಜಾನಪದ ಸಾಹಿತಿ ಶ್ರೀಮತಿ.ರುದ್ರಾಂಬಿಕಾ ಯಾಳಗಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಕಾಶ್ ಅರವಿಂದ ಥಬಾಜ