ಬೀದರ : ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು ನಮ್ಮ ಈಡಿಗ ಬಿಲ್ಲವ ಸಮಾಜದ ಕುಲಕಸಬನ್ನು ಕಸಿದುಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲೆ ಚಿತ್ತಾಪುರದ ಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪರಮಪೂಜ್ಯ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ನಿರ್ಲಜ್ಜ ಬಿಜೆಪಿ ಸರ್ಕಾರ ಇದುವರೆಗೆ ನಮ್ಮ ಸಮುದಾಯಕ್ಕೆ ಯಾವುದೇ ರೀತಿಯ ಕೊಡುಗೆಯನ್ನೂ ನೀಡದೆ ನಮ್ಮ ಕುಲಕಸಬನ್ನು ಕಸಿದುಕೊಂಡು ಸಮುದಾಯದ ನಾಶ ಮಾಡುವತ್ತ ಸಾಗಿದ್ದು ಮುಖ್ಯಮಂತ್ರಿ ಮತ್ತು ಸಚಿವ ನಮ್ಮ ಸಮಾಜದ ಸುನಿಲ್ ಕುಮಾರ್ ಮಂಗಳೂರು ಇವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಬ್ರಹ್ಮರ್ಷಿ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ರೂ. ಗಳನ್ನು ನೀಡಬೇಕು ಎಂದು ಆಗ್ರಹಿಸಿದ ಪ್ರಣವಾನಂದ ಸ್ವಾಮೀಜಿ, ಧರ್ಮವೊಂದೇ, ದೇವರೊಬ್ಬನೆ ಎಂದು ವಿಶ್ವಕ್ಕೆ ಸಮಾನತೆ, ಶಾಂತಿಯ ಸಂದೇಶ ಸಾರಿರುವ ಬ್ರಹ್ಮ ಋಷಿ ನಾರಾಯಣ ಗುರುಗಳ 168ನೇ ಜಯಂತಿ ಎಲ್ಲೆಡೆ ನಡೆಯುತ್ತಿದ್ದು ಈ ಸಲ ಬೀದರಿನ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ನಡೆಯಲಿದೆ ಎಂದರು.
ಸಮಾಜದ ಏಳು ಜನ ಶಾಸಕರು ಇಬ್ಬರು ಮಂತ್ರಿಗಳಿದ್ದರೂ ಸಹ ನಮ್ಮ ಸಮಾಜಕ್ಕೆ ಮೋಸ ಮಾಡಲಾಗುತ್ತಿದೆ. ಇದನ್ನು ತಾವು ಸಹಿಸುವುದಿಲ್ಲ ಮುಂಬರುವ ಚುನಾವಣೆಯಲಿ ಸೂಕ್ತ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಕುಲಕಸಬುಗಳನ್ನು ಮಾಡುತ್ತಿರುವ ಮಡಿವಾಳ, ಹರಳಯ್ಯ, ಅಂಬಿಗರಚೌಡಯ್ಯ ಸಮಾಜದವರಿಗೆ ನಿಗಮ ಮಂಡಳಿಗಳನ್ನು ಸ್ಥಾಪಿಸಿಕೊಡಲಾಗಿದೆ. ಇತ್ತೀಚೆಗೆ ತಾನೆ ಮರಾಠಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.ನೀಡಲಾಗಿದೆ ಎಂದ ಅವರು, 6 ಜನ ಸ್ವಾಮೀಜಿಗಳಿರುವ ಈಡಿಗ ಬಿಲ್ಲವ ಸಮಾಜವನ್ನು ಪರಿಗಣಿಸಿ ಸರ್ಕಾರ ತಕ್ಷಣವೇ ಬ್ರಹ್ಮರ್ಷಿ ನಾರಾಯಣ ಗುರುಗಳ ಹೆಸರಿನ ನಿಗಮ ಮಂಡಳಿಯನ್ನು ಸ್ಥಾಪಿಸಿ 500 ಕೋಟಿ ರೂ.ಗಳನ್ನು ಒದಗಿಸಬೇಕು.12ನೇಯ ಶತಮಾನದ ಶಿವಶರಣ ಹೆಂಡದ ಮಾರಯ್ಯ ಜಯಂತಿಯನ್ನು ಸರ್ಕಾರವೇ ಆಚರಿಸುವಂತೆ ಮಾಡಬೇಕು. ನಮ್ಮ ಸಮಾಜದ ಕುಲಕಸಬು ಸಿಂಧಿಗೂ ನಮ್ಮ ಸಮುದಾಯಕ್ಕೂ ಭಾವನಾತ್ಮಕ ಸಂಬಂಧ ಇದದ್ದು, ಸೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ಬ್ರಹ್ಮರ್ಷಿ ನಾರಾಯಣಗುರೂಜಿಯವರ ಜಯಂತಿಯನ್ನು ಸರ್ಕಾರದಿಂದಲೇ ಅಚರಿಸುವಂತೆ ಮಾಡಿರುವ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸ್ವಾಮೀಜಿ, ಕಳೆದ ಸಪ್ಟೆಂಬರ್ 10 ರಂದು ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸದ ವಚನಭ್ರಷ್ಟ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೋಸ ಮಾಡಿದ್ದಾರೆ. ಸಮಾಜದ ಮಂತ್ರಿ ಸುನೀಲಕುಮಾರ ಅವರು ಕಾರ್ಕಳ ಕ್ಷೇತ್ರದ ಬಿಲ್ಲವ ಸಮಾಜದ 46500 ಮತಗಳನ್ನು ಪಡೆದು ಗೆದ್ದಿರುವುದನ್ನು ಮರೆತಿದ್ದಾರೆ ಅಲ್ಲದೆ ಸಮಾಜಕ್ಕೆ ಸಿ.ಎಂ.ಜೊತೆಗೂಡಿ ವಂಚಿಸುತಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್ ಬಂಗಾರಪ್ಪ ನವರು ಹೆಸರು ಇಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿ, ಬಿ ಎಸ್ ಯಡಿಯೂರಪ್ಪ ನವರ ಹೆಸರು ಶಿವಮೊಗ್ಗ ಎರ್ ಫೋರ್ಟ್ ಗೆ ಇರಬಾರದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದರು.