ವೈಜ್ಞಾನಿಕವಾಗಿ ಯೋಚಿಸುವುದು, ಕಾರ್ಯಮಾಡುವುದು ಹಾಗೂ ಬದುಕುವುದೇ ವೈಜ್ಞಾನಿಕ ಮನೋಭಾವ: ಎಸ್. ವಿ. ಸಂಕನೂರ

Must Read

ದೇಶದ ಸಂವಿಧಾನದಲ್ಲಿ ತಿಳಿಸಿರುವಂತೆ ದೇಶದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಹೊಂದಬೇಕು. ಯಾಕೆ ಮತ್ತು ಹೇಗೆ ಎಂದು ಪ್ರಶ್ನಿಸುತ್ತಾ, ಮಾನವೀಯತೆಯೊಂದಿಗೆ ವೈಚಾರಿಕ ಮನೋಭಾವ ಅಳವಡಿಸಿಕೊಂಡು ಎಲ್ಲರೂ ಬದುಕಬೇಕು. ದೇಶದಲ್ಲಿನ ಬಡತನ, ನಿರುದ್ಯೋಗ, ಆರೋಗ್ಯ ಸೇರಿದಂತೆ ಇತರೆ ಸಮಮಸ್ಯೆಗಳಿಗೆ ಪರಿಹಾರ ವಿಜ್ಞಾನ ತಂತ್ರಜ್ಞಾನ ಹಾಗೂ ಸಂಶೋಧನೆಯಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಅಭಿಪ್ರಾಯಪಟ್ಟರು.

ಅವರು ಇತ್ತೀಚಿಗೆ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಸರ್ ಸಿ. ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕುಲಸಚಿವ ಡಾ. ಬಿ. ಈ. ರಂಗಸ್ವಾಮಿ ಮಾತನಾಡಿ ಸಮಾಜದ ಪರಿವರ್ತನೆ ಶಿಕ್ಷಕ ಸಮುದಾಯದಿಂದ ಮಾತ್ರ ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ಆಸಕ್ತಿದಾಯಕವಾಗಿ ಬೋಧನೆ ಮಾಡುತ್ತಾ ನಾಡಿನಲ್ಲಿನ ವೈಜ್ಞಾನಿಕ ಸಂವಹನಕಾರರ ತಂಡವನ್ನು ಸೇರಿಕೊಳ್ಳಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ ಮಾತನಾಡಿ ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಬೆಳಗಾವಿ ವಿಜ್ಞಾನ ಕೇಂದ್ರ ಇತ್ತೀಚಿಗೆ ಸರ್ಕಾರದಿಂದ ನಿರ್ಲಕ್ಷಕ್ಕೊಳಗಾಗುತ್ತಿರುವುದು ಆತಂಕದ ವಿಷಯ. ವಿಜ್ಞಾನ ಪರಿಷತ್ತು ಹಾಗೂ ಸರ್ಕಾರ ಇದರತ್ತ ಗಮನಹರಿಸಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬೆಳಗಾವಿ ಅಸೋಸಿಯೇಷನ್‌ ಪಾರ್ ಸೈನ್ಸ ಎಜ್ಯುಕೇಶನ್ ಕಾರ್ಯದರ್ಶಿ ಕೆ. ಬಿ. ಹಿರೇಮಠ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಸ್ಪರ್ಧೆಯ ರಾಜ್ಯ ಸಂಯೋಜಕ ಅನ್ನದಾನೇಶ್ವರ ಹಳ್ಳಿಕೇರಿ, ಕಾರ್ಯಕಾರಿ ಸಮಿತಿ ಸದಸ್ಯ ಅಣದೂರು ಮಹಾರುದ್ರಪ್ಪ, ಮೀನಾಕ್ಷಿ ಕುಡಸೋಮಣ್ಣವರ, ಕ್ವಿಝ್ ಮಾಸ್ಟರ್ ಆರ್. ಎಮ್. ದೇಶಪಾಂಡೆ, ಜಿಲ್ಲಾ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋಳಿ, ಜಿ. ಬಿ. ನೇಸರಗಿ, ಶಿವಾನಂದ ಕುಡಸೋಮಣ್ಣವರ, ಎ. ಎನ್. ತೋಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕರಾವಿಪ ಬೆಳಗಾವಿ ಜಿಲ್ಲಾ ಸಮಿತಿ ಅಧ್ಯಕ್ಷ ಮೋಹನ ಬಸವನಗೌಡ ಪಾಟೀಲ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ವಂದಿಸಿದರು. ಶಿಕ್ಷಕ ಬಿ. ಜಿ. ಬಾನೆ ನಿರೂಪಿಸಿದರು.

ರಾಜ್ಯ ಮಟ್ಟದಲ್ಲಿ ಧಾರವಾಡ ಕೆ. ಎಲ್. ಇ. ಶಾಲೆಯ ವೇದಾಂತ ಹಾಗೂ ಎಂಜಿಲಾ ಅವರ ತಂಡ ರೂ. 10,000 ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ, ಗದಗ ಜಿಲ್ಲೆಯ ಮುಂಡರಗಿ ಸರ್ಕಾರಿ ಆದರ್ಶ ಶಾಲೆಯ ಪ್ರಿಯಾ ಹಾಗೂ ರಜನಿ ಅವರ ತಂಡ ರೂ. 7000 ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗದ ಪೋದಾರ ಶಾಲೆಯ ನಿಶಾಂತ ಹಾಗೂ ಉತ್ಸವ ಅವರ ತಂಡ ರೂ 5000 ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group