ಮೂಡಲಗಿ: ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮೀಸಲಾತಿ ಸಮಸ್ಯೆಯನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿಗಳು ನಿರ್ಣಯ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಶನಿವಾರ ಮಾ-25ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಪಂಚಮಸಾಲಿ ಸಮುದಾಯದ 2ಎ ಬೇಡಿಕೆಗೆ ಅದಕ್ಕೊಂದು ಹೊಸ ಪ್ರವರ್ಗವನ್ನು ಸೃಷ್ಟಿಮಾಡಿ 2ಎ ಗೆ ಸಿಗುವಂಥ ಎಲ್ಲಾ ಮೀಸಲಾತಿಯನ್ನು 2ಡಿ ಗೆ ಕೊಟ್ಟಿದ್ದಾರೆ ಮತ್ತು ಎಸ್.ಸಿ ಎಸ್.ಟಿ ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ.
ನಮ್ಮ ಜೊತೆಗೆ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಿದ್ದಾರೆ. ಈ ರೀತಿ ದಶಕಗಳಿಂದ ಮೀಸಲಾತಿ ಪುನರ್ವಿಂಗಡನೆಯಾಗದೇ ನೆನೆಗುದಿಗೆ ಬಿದ್ದಿತ್ತು. ನಮ್ಮ ಸರ್ಕಾರ ಒಂದು ವ್ಯವಸ್ಥಿತ ಹೆಜ್ಜೆ ಇಡುವ ಮೂಲಕ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸುವ ದಿಟ್ಟ ಹೆಜ್ಜೆಯನಿಟ್ಟ ಸರ್ಕಾರದ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಹಾಗೂ ಕೂಡಲಸಂಗಮ ಪೀಠದ ಪೂಜ್ಯ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸತತ ಎರಡು ವರ್ಷಗಳಿಂದ ಹೋರಾಟ, ಪಾದಯಾತ್ರೆ, ಧರಣಿ ಮುಖಾಂತರ ರಾಜ್ಯ ಮತ್ತು ದೇಶದ ಗಮನ ಸೆಳೆದು ಲಿಂಗಾಯತ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ದೊರೆಯುವಂತೆ ಮಾಡಿದ ಪೂಜ್ಯರಿಗೆ ಸಮಸ್ತ ಪಂಚಮಸಾಲಿ ಲಿಂಗಾಯತ ಸಮಾಜದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.