ಬೀದರ – ಯಾರು ಆಯ್ಕೆಯಾಗುತ್ತಾರೆ ಯಾರು ಯೋಗ್ಯರಿರುತ್ತಾರೋ ಅವರಿಗೆ ಪಕ್ಷ ಟಿಕೆಟ್ ನೀಡುತ್ತದೆ. ಟಿಕೆಟ್ ಸಿಗಲಿಲ್ಲ ಎಂದುಕೊಂಡು ಪಕ್ಷ ಬಿಡುವವರಿಗೆ ನಿಷ್ಠೆ ಇರುವುದಿಲ್ಲ ಅವರು ಸ್ವಾರ್ಥಿಗಳು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ವಾಗ್ದಾಳಿ ನಡೆಸಿದರು.
ಬೀದರ ಜಿಲ್ಲೆಯ ಕಮಲಾನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಜಗದೀಶ ಶೆಟ್ಟರ ಹಾಗೂ ಲಕ್ಷ್ಮಣ ಸವದಿಯವರು ಸ್ವಾರ್ಥಿಗಳು ಅದಕ್ಕೇ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಟೀಕಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಗೆ ಈ ದೇಶದ ಬಗ್ಗೆ ಏನು ಗೊತ್ತಿದೆ, ಸ್ವತಃ ಜಾಮೀನಿನ ಮೇಲೆ ಹೊರಗಿದ್ದಾರೆ. ಸಂಸತ್ ಸದಸ್ಯ ಸ್ಥಾನ ಕಳೆದುಕೊಂಡಿದ್ದಾರೆ ಅವರಿಂದಾಗಿ ಕಾಂಗ್ರೆಸ್ ಜೀರೋ ಆಗಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೪೦೩ ಸ್ಥಾನ ಗೆಲ್ಲುತ್ತದೆ. ಆಗ ರಾಹುಲ್ ಗಾಂಧಿ ಇಟಲಿಯಲ್ಲಿ ಕುಳಿತುಕೊಂಡು ನೋಡಬೇಕಾಗುತ್ತದೆ ಎಂದು ಕೇಂದ್ರ ಸಚಿವರೂ ಆಗಿರುವ ರಾಣೆ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ