Homeಕವನಕವನ: ಕವಯಿತ್ರಿ ಆಗಿಬಿಟ್ಟೆ

ಕವನ: ಕವಯಿತ್ರಿ ಆಗಿಬಿಟ್ಟೆ

ಕವಯಿತ್ರಿ ಆಗಿಬಿಟ್ಟೆ

ಸ್ನೇಹಿತರೆ
ನಾನೂ ಕವಯಿತ್ರಿ ಆಗಬೇಕೆಂದಿದ್ದೆ
ಬೇಗ ಬೇಗನೆ ಮದುವೆ
ಪುಟ್ಟ ಪುಟ್ಟ ಮಕ್ಕಳು
ಅವರ ಪಾಲನೆ.
ಬರೆಯಬೇಕೆಂದಾಗಲೆಲ್ಲ
ಬರೆಯಲಾಗದೆ ನೀರಸ ಮೌನ
ನಮ್ಮವರು ಬಚ್ಚಲಲ್ಲಿ
ಇಳಿದಿದ್ದಾರೆ.
ಅವರಿಗೆ ಕೊಡಬೇಕು
ಬನಿಯನ್ನು ಟವೆಲು ಚಡ್ಡಿ
ಮೊದಲೇ ಕೊಡಲಾಗದ
ನಾನೆಂತ ದಡ್ಡಿ ?
ಶಾಲೆಯ ಮಕ್ಕಳಿಗೆ
ಟಿಫನ್ ಕಟ್ಟಬೇಕು.
ಒಲೆಯ ಮೇಲೆ ಹಾಲು
ಕಿರುಚುತ್ತಿದೆ ಕಾಲಿಂಗ್ ಬೆಲ್ಲು
ಕಟ್ಟಬೇಕಂತೆ
ಇಂದೇ ಕರೆಂಟ್ ಬಿಲ್ಲು
ಇಂದೂ ಕೆಲಸದವಳು
ಕೈ ಕೊಟ್ಟಳು .
ತಿಕ್ಕ ಬೇಕು ಪಗಡೆ ಪಾತ್ರೆ
ತೊಳೆಯಬೇಕು ಬಟ್ಟೆ
ಒರೆಸಬೇಕು ನೆಲದ ಕಟ್ಟೆ .
ಚಹಾ ತಡವಾದರೆ
ಯಜಮಾನರ ಗುಡುಗು
ವರ್ಣಿಸಬೇಕೆಂದಿದ್ದೆ
ಭೂಮಿ ನೆಲ ಜಲ
ಕೈ ಮಾಡಿ ಕರೆಯುತಿದೆ
ಮಧ್ಯಾಹ್ನದ ಅಡಿಗೆ .
ನಾಳೆಯ ಹಬ್ಬ
ಬಣ್ಣ ಬಣ್ಣದ ಉಡಿಗೆ
ಹಬ್ಬ ಹರಿದಿನ ಶೃಂಗಾರ
ಮೈ ತುಂಬಾ
ಬಂಗಾರದ ತೊಡಿಗೆ
ಟಿವಿಯಲ್ಲಿ ಅಡುಗೆ ನಳಪಾಕ
ಮಕ್ಕಳ ಹೋಂ ವರ್ಕ
ಪತಿರಾಯನ ಬಟ್ಟೆಗೆ ಇಸ್ತ್ರಿ .
ಅಪ್ಪ ಅಮ್ಮನ
ಫೋನ್ ಔಷಧಿಗೆ ಕಾಸಿಲ್ಲ
ವಿಧುರ ಮಾವನ ಆರೋಗ್ಯ
ಕರುಣೆ ಕಳಕಳಿ
ಮಕ್ಕಳ ಶಾಲೆಯ
ಫೀ ಕಟ್ಟಿಲ್ಲ ಶಿಕ್ಷಕರ ಪಟ್ಟು .
ಬಾಡಿಗೆ ಕೊಟ್ಟಿಲ್ಲ
ಮಾಲಕನ ಸಿಟ್ಟು
ಮನೆಯೊಡೆಯ ಹೇಳಿದ
ಬೇಗ ಹಣ ಕಟ್ಟು
ತರಕಾರಿಯ ಬೆಲೆ ಆಗಸಕೆ
ಆದರೂ ಕುಚ್ಚಬೇಕು
ಹಸಿದ ಪತಿ ಕಂದಮ್ಮಗಳಿಗೆ
ರಾತ್ರಿಯಾದರೆ ಸಾಕು
ನಮ್ಮವರ ಗೊರಕೆ
ಬೆಳಿಗ್ಗೆ ಹಿಡಿಯಬೇಕು
ಕೈಯಲ್ಲಿ ಪೊರಕೆ .
ಕವಿಗೋಷ್ಠಿಯಲ್ಲಿ
ನನ್ನ ಹೆಸರು
ಎಲ್ಲಿಲ್ಲದ ಸಂತಸ ಹೆಮ್ಮೆ .
ಸಿಟಿ ಬಸ್ಸು ಬಂದಿಲ್ಲ
ಆಟೋ ಚಾಲಕನ ಬೇಡಿಕೆ
ಏನೋ ಕೂತು ಬಿಟ್ಟೆ
ಕವನ ಬರೆದು
ಹಸಿ ಬಿಸಿ ರೊಟ್ಟಿಯಂತೆ
ಕವಯಿತ್ರಿ ಆಗಬೇಕೆಂದಿದ್ದೆ
ಗುಂಡಿ ತೆಗ್ಗಿನಲಿ ಎಗರಿ
ಮುಟ್ಟಿದೆ
ಕವಿಗೋಷ್ಠಿಯ ಮೇಳದಲ್ಲಿ
ಎದ್ದು ಹೋಗಬೇಡಿ
ಕವಿಗಳೇ ಗೆಳೆಯರೇ
ಬಂಧುಗಳೇ .
ಚಪ್ಪಾಳೆ ತಟ್ಟದಿದ್ದರೂ
ಬಹುಮಾನ
ಕೊಡದಿದ್ದರೂ ಸರಿ
ಓದಿ ಮುಗಿಸುವೆ
ನನ್ನ ಕವನವ ಕೇಳುವ
ಸಂಯಮ ನಿಮಗಿರಲಿ
ಏನು ಮಾಡಲಿ ಹೇಳಿ
ನಾನೂ ಕವಯಿತ್ರಿ
ಆಗಬೇಕೆಂದಿರುವೆ.
ಮನು ಮಹರ್ಷಿ
ಹೇಳಿದ ನೆನಪು
ನ ಸ್ತ್ರೀ ಸ್ವಾತಂತ್ರ್ಯ ಅರ್ಹ
ಒಳಗೊಳಗೇ ನಕ್ಕು ಬಿಟ್ಟೆ


ಪ್ರೊ ವಿಜಯಲಕ್ಷ್ಮಿಪುಟ್ಟಿ ಬೆಳಗಾವಿ

RELATED ARTICLES

Most Popular

error: Content is protected !!
Join WhatsApp Group