ಬೀದರ – ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಕಾನ್ಸ್ಟೆಬಲ್ ಒಬ್ಬ ಆರ್ಪಿಎಫ್ ಎಸ್ಐ ಮಾತ್ರವಲ್ಲದೆ ಇತರ ಮೂವರನ್ನು ರೈಲೊಳಗೇ ಗುಂಡಿಟ್ಟು ಕೊಂದ ಪ್ರಕರಣ ನಡೆದಿದೆ. ಮೃತರಲ್ಲಿ ಬೀದರ ಮೂಲದವರೂ ಒಬ್ಬರಾಗಿದ್ದಾರೆ.
ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲೊಳಗೇ ಈ ಘಟನೆ ನಡೆದಿದೆ.
ಆರ್ಪಿಎಫ್ ಕಾನ್ಸ್ಟೆಬಲ್ ಚೇತನ್ ಸಿಂಗ್ (34) ನಾಲ್ವರನ್ನು ಕೊಂದ ಆರೋಪಿ. ಈತ ತನ್ನ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಟಿಕಾರಾಮ್ ಮೀನಾ ಮಾತ್ರವಲ್ಲದೆ ಮೂವರು ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದಾನೆ. ಅಬ್ದುಲ್ ಖಾದಿರ್ಭಾಯ್ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದಾರ್ ಮೊಹಮ್ಮದ್ ಹುಸೇನ್ ಕೊಲೆಗೀಡಾದ ಇತರ ಮೂವರು.
ಕೊಲೆ ಮಾಡಿದ ಬಳಿಕ ರೈಲಿನ ಚೈನ್ ಎಳೆಯಲಾಗಿದ್ದು, ಮೀರಾ ರೋಡ್ ಮತ್ತು ದಹಿಸರ್ ಸ್ಟೇಷನ್ ನಡುವೆ ರೈಲು ನಿಂತಿತ್ತು. ಆಗ ಆರೋಪಿ ಪರಾರಿ ಆಗಲೆತ್ನಿಸಿದ್ದ ಆದರೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲ್ವೇ ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕಾನ್ಸ್ಟೆಬಲ್ ಮುಂಬೈನ ಭಾವ್ನಗರ ಡಿವಿಜನ್ನಿಂದ ಕಳೆದ ಮಾರ್ಚ್ನಲ್ಲಿ ವರ್ಗಾವಣೆಗೊಂಡಿದ್ದ. ಇತ್ತೀಚೆಗಷ್ಟೇ ತನ್ನ ಊರಾದ ಹತ್ರಾಸ್ಗೆ ಹೋಗಿದ್ದ ಈತ ಜು. 17ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಂಗ್ ಸಂಸಾರದೊಂದಿಗೆ ನೆಲೆಸಿದ್ದು, ಪತ್ನಿ, 6 ಮತ್ತು 8 ವರ್ಷದ ಇಬ್ಬರು ಮಕ್ಕಳು ಹಾಗೂ ಪಾಲಕರು ಜೊತೆಗಿದ್ದಾರೆ.