ಕಸ್ತೂರಿ ಕನ್ನಡದ ಸೊಬಗು
ಏನೆಂದು ವರ್ಣಿಸಲಿ ನಿನ್ನನ್ನು ತಾಯೇ
ಪ್ರತಿ ಜನ್ಮವೂ ಬೇಕೆನಗೆ ಕನ್ನಡ ನಾಡೇ
ಕಸ್ತೂರಿ ಕನ್ನಡವ ಹೊಗಳಲು ಪದಗಳೆಲ್ಲಿ
ಸ್ವರ್ಗವೆಂದರೆ ಕರುನಾಡೇ ಈ ಭುವಿಯಲ್ಲಿ
ನಿನ್ನ ಅಗಾಧ ಸಂಪನ್ಮೂಲಕೆ ಲೆಕ್ಕವೆಲ್ಲಿ
ಸಕಲ ಶೇಷ್ಠ ಸಂಪತ್ತು ನಿನ್ನ ಮಡಿಲಲ್ಲಿ
ಖನಿಜ ಅದಿರು ಮುತ್ತು ರತ್ನ ನಿನ್ನ ಸೆರಗಲ್ಲಿ
ಅಪಾರ ಪ್ರಾಣಿ ಸಂಕುಲ ನಿನ್ನಂತರಂಗದಲ್ಲಿ
ಜ್ಞಾನಿ,ಕವಿಜನರು ನಿನ್ನಲ್ಲಿ ನೆಲೆಸಿರುವರು
ವಾಸ್ತುಶಿಲ್ಪದ ಕಲೆ ನಿನ್ನಲ್ಲಿ ಬೆರೆತಿರುವುದು
ಸುಜಲ ಜಲಧಾರೆ ನಿನ್ನಲ್ಲಿ ಹರಿಯುತಿಹಳು
ಹಸಿರು ಗದ್ದೆ ಕಾಡಲಿ ನೀನು ತುಂಬಿರುವಳು
ಗಂಧದ ನಾಡೆಂದು ನಿನ್ನ ಹಾಡಿ ಹೊಗಳಲೇ
ಸಕ್ಕರೆಯ ಬೀಡೆಂದು ನಿನ್ನ ನಾ ಕೊಂಡಾಡಲೇ
ಕರಾವಳಿಯ ಸೊಬಗಿನಲಿ ಮೈ ಮರೆಯಲೇ
ಪಶ್ಚಿಮ ಘಟ್ಟದ ಸಿರಿಯಲಿ ಕಳೆದು ಹೋಗಲೇ
ವಿಭಿನ್ನ ಹಾವ ಭಾವದಂತಿರುವ ಕನ್ನಡಿಗರು
ಒಂದೇ ತಾಯಿಯ ಮಕ್ಕಳಂತೆ ನೆಲೆಸಿರುವರು ನಮ್ಮೊಳಗಿನ ಕಲಹ ಬಿನ್ನಹ ಇದ್ದರೂ ಹಲವು
ಕನ್ನಡ ಎಂದೊಡನೆಯೇ ಒಂದಾಗುವೆವು ನಾವು
ದಿವ್ಯ ಮನಸು
ಕರುನಾಡ ಚೆಲುವು
ನಮ್ಮ ನಾಡು, ನಮ್ಮ ನುಡಿ, ನಮ್ಮ ಭಾಷೆ, ನಮ್ಮ ನೆಲ
ಕನ್ನಡದ ಸಿರಿಗಂಪು ಪಸರಿಸಲಿ ಎಲ್ಲೆಲ್ಲೂ
ಶಿಲ್ಪಕಲೆ- ಕೆತ್ತನೆಯ ತವರೂರು ಈ ಬೇಲೂರು ಹಳೆಬೀಡು
ಶೃಂಗೇರಿಯ ಶಾರದೆ ನೆಲೆಸಿರುವ ಈ ಕರುನಾಡು!!
ಅರಮನೆಯ ಬೀಡು ನಮ್ಮೀ ತಾಯ್ನಾಡು
ಶ್ರೀರಂಗನ ಸನ್ನಿಧಿಯ ಚೆಲುವಿನ ನೆಲೆವೀಡು
ಕೃಷ್ಣರಾಜಸಾಗರದ ಸುಮನೋಹರ ನಾಡು
ಕಾವೇರಿ ಮಾತೆ ಉಗಮಗೊಂಡ ಕರುನಾಡು!!
ಮಲೆನಾಡಿನ ತಪ್ಪಲಲಿ ಹಚ್ಚ ಹಸಿರಲಿ ಮೂಡಿದ ಛಾಯೆಯು
ಜೋಗದ ಸಿರಿವೈಭವ, ಮೃಗ ಸಂಕುಲದ ಕಲರವವು
ಐಹೊಳೆ ಬಾದಾಮಿಯ ನೆನಪುಳಿಯುವ ಅನುಭವದ ಸಂಘಮವು
ವಿಜ್ಞಾನದ ದೇಗುಲದ ತಂತ್ರಜ್ಞಾನದಾಲಯವು!!
ಎಲ್ಲರನೂ ಕೈ ಬೀಸಿ ಸೆಳೆವ ಪ್ರೇಮದಾಲಯವು
ಅತಿಥಿ ದೇವರೆಂಬ ನಮ್ಮ ಮನದಿ ಇರಲಿ ಆಶಯವು
ನಾಡಿಗಾಗಿ ದುಡಿಯುತಲಿ ಬದುಕು ಸಾರ್ಥಕವು
ರನ್ನ ಪಂಪ ಬೇಂದ್ರೆ ಕುವೆಂಪು ಮೆರೆಸಿದಾ ಈ ಭೂಮಿಯು!!
ವರನಟನ ಕಲೆಯ ಬಲೆಗೆ ಬೆರಗಾದ ನಾಡಿದು
ಬನವಾಸಿ, ಧರ್ಮಸ್ಥಳ, ಭಗವಂತನ ತವರಿದು
ಭೋರ್ಗರೆವ ಜಲಪಾತಗಳ ಮಣ್ಣಿನ ಬೀಡಿದು
ನಮ್ಮ ನೆಲದ ಸಿರಿಯಲ್ಲಿ ಕನ್ನಡವ ಉಳಿಸಿ ಬೆಳೆಸುವ ಕನ್ನಡದ ನಾಡಿದು!!
ಪುಷ್ಪ ಪ್ರಸಾದ್, ಉಡುಪಿ
ಕಣಕಣದಿ ಕನ್ನಡದ ರಿಂಗಣ
ಓ ಕನ್ನಡದ ಮನಸುಗಳೇ ಬನ್ನಿ
ಕರುನಾಡ ಕೀರ್ತಿಗೆ ಹೂವ ತನ್ನಿ
ನಾಡು-ನುಡಿ ಸಂಸ್ಕೃತಿಯ ಬೆಳಗ ಬನ್ನಿll
ಪುಟಿದೇಳಲಿ ಕನ್ನಡವು ತನುಮನದಲಿ
ರಾರಾಜಿಸಲಿ ಕನ್ನಡದ ಕಿಚ್ಚು ಸ್ವಾಭಿಮಾನದಲಿ
ಬೆಳೆಯಲಿ ಭಾಷೆ ಮಾತೆಯ ಶ್ರೀರಕ್ಷೆಯಲಿll
ನಮ್ಮಯ ಭಾಷೆಗಿದೆ ರಾಜ ಸ್ಥಾನಮಾನ
ಅಷ್ಟ ಜ್ಞಾನಪೀಠಗಳ ಭವ್ಯ ಸನ್ಮಾನ
ಹೆಮ್ಮೆಯ ಕರುನಾಡ ಎಂಬ ಅಭಿಮಾನll
ಇತಿಹಾಸದ ಬೆಳಕಲಿ ಸಾಹಿತ್ಯದ ಗರಿಮೆಯಲಿ
ಸಹ್ಯಾದ್ರಿ ಶ್ರೇಣಿಯಲಿ ತರುಲತೆಗಳ ಹಸಿರಿನಲಿ
ಕನ್ನಡದ ಕಸ್ತೂರಿಯ ಕಂಪು ಸೂಸಲಿll
ತಾಯಿ ಕನ್ನಡಾಂಬೆ ನಮ್ಮ ದಿವ್ಯ ಮೂರ್ತಿ
ರನ್ನ ಪೊನ್ನ ಜನ್ನ ಪಂಪರೇ ಸ್ಪೂರ್ತಿ
ಕುವೆಂಪು ಮಾಸ್ತಿ ಬೇಂದ್ರೆಕಾರಂತರೇ ಕೀರ್ತಿll
ಎಲ್ಲೇ ಇರಲಿ ಹೇಗೆ ಇರಲಿ ಹೇಳೋಣ
ಕನ್ನಡದ ಕಲ್ಪತರು ನಾವು ಎನ್ನೋಣ
ಭಾಷೆಯ ಸೊಗಡಿನ ಹೂವ ಅರಳಿಸೋಣll
ಕನ್ನಡದ ಡಿಂಡಿಮವನು ಬಾರಿಸುತ
ಹಮ್ಮು-ಬಿಮ್ಮು ಅಳಿದು ಕೈಯ ಮುಗಿಯುತ
ಸಾಗೋಣ ಕನ್ನಡದ ದಾರಿಯಲ್ಲಿ ಅನವರತll
ನಮ್ಮ ಜೀವಕೆ ತಾಯ ನೆಲವೇ ಮಡಿಲು
ಮಾತೃಭಾಷೆಗೆ ನಮ್ಮ ಮನವು ಮೀಸಲು
ನಮ್ಮ ಭಾವ-ಭಕುತಿಗೆ ಕನ್ನಡವೇ ಕಾವಲುll
ಕನ್ನಡಕೆ ಎಂದೆಂದೂ ಜಯವಾಗಲಿ
ಕನ್ನಡವೇ ನಮ್ಮ ಉಸಿರಾಗಲಿll
ಶ್ರೀಮತಿ ಸುಮಾ ಗಾಜರೆ
ವಿಜಯಪುರ
ಹೆಮ್ಮೆಯ ನಾಡಿದು
ಕನ್ನಡ ನಾಡಿದು ನಮ್ಮಯ ಬೀಡು
ಜೀವನ ನೀಡುತ ಸಾಗಿದೆ ನೋಡು
ಮನವ ತಣಿಸುವ ಕನ್ನಡ ನಾಡಿದು
ಬದುಕು ಕಟ್ಟುವ ಕರುನಾಡು..!!
ಜೀವನ ನೀಡುವ ಕನ್ನಡ ಮಾತಿದು
ಕನಸು ಕಟ್ಟುವ ಸುಂದರ ಗೂಡಿದು
ಮನಸಿನಾಳದ ಭಾವನೆ ತಿಳಿಸುವುದು
ಮನಗಳ ಕಟ್ಟಿದ ಕಸ್ತೂರಿ ಕನ್ನಡವಿದು..!!
ಕನ್ನಡ ಕವಿಗಳ ಆಳದ ಜ್ಞಾನವು
ಬೀಸುತ ಸಾಗಿದೆ ಕಂಪನು ದಿನವು
ಕನ್ನಡ ಕಲಿಗಳ ಮನಸಿನ ನುಡಿಗಳು
ಸವಿಯನು ಬೀರುತ ಸಾಗಿವೆ ಜಗದೊಳು..!!
ಬೆಳೆಸುತ ನಿಂತ ಕನ್ನಡ ನುಡಿಯಿದು
ಬೆಸೆಯುತ ಸಾಗಿದೆ ಸಂಬಂಧವನಿದು
ಕನಸುಗಳ ಕಟ್ಟುವ ಕನ್ನಡ ನಾಡಿದು
ಹೊಸ ಪ್ರತಿಭೆಗಳ ದಟ್ಟ ಆಗರವಿದು..!!
ಅರಿಯದ ಮನಕೆ ಕಲಿಸುತ ಕನ್ನಡ
ಪಾಶ್ಚ್ಯಾತ್ಯರ ಸೆಳೆದಿದೆ ನೀ ನೋಡ
ಬಂದು ಕಲಿಯುತಿಹರು ಕರುನಾಡ ಕನ್ನಡ
ಪಸರಿಸುತ ಸಾಗಿದೆ ಜಗದಗಲಕ್ಕೂ ನೀ ನೋಡ..!!
ಆನಂದ ಜಿ. ಎನ್.
ದಾಂಡೇಲಿ. (ಉ.ಕ.)
“ಕರುನಾಡು ಹಸಿರಿನ ಬೀಡು”
ಕವಿಕೋಗಿಲೆಗಳ ನಾಡು
ನಮ್ಮ ಕನ್ನಡಾಂಬೆಯ ಬೀಡು
ಶಿಲ್ಪಕಲೆಗಳ ನಾಡು
ಶ್ರೀಗಂಧದ ಗೊಂಬೆಯ ಬೀಡು
ಪವಿತ್ರ ನದಿಗಳ ನಾಡು
ಸುಂದರ ಬೆಟ್ಟಗಳ ಬೀಡು
ಶೂರ -ವೀರರಾಳಿದ ನಾಡು
ರನ್ನ -ಪಂಪ ಜನಿಸಿದ ಪುಣ್ಯ ಬೀಡು
ಸತ್ತಂತಿಹರನು ಬಡಿದೆಬ್ಬಿಸುವ ನಾಡು
ಕಚ್ಚಾಡುವವರನ್ನು ಕುಡಿಸುವ ಬೀಡು
ಕನ್ನಡ ಕಂಪು ಸೂಸುವ ನಾಡು
ಹಲವು ಭಾಷೆಯ ಅಪ್ಪಿಗೆಯ ಬೀಡು
2000ವರ್ಷಗಳ ಇತಿಹಾಸವುಳ್ಳ ನಾಡು
ಎಂಟು ಜ್ಞಾನಪೀಠ ಹೊಂದಿದ ಬೀಡು
ಏಕತೆಯ ಎತ್ತಿ ಹಿಡಿದ ನಾಡು
ಕನ್ನಡಾಂಬೆ ನಮಗೆಲ್ಲ ಹೊತ್ತ ಬೀಡು
ಸುನಿತಾ. ಎಸ್. ಪಾಟೀಲ
ಕಂದಗೂಳ್
ತಾ. ಹುಮ್ನಾಬಾದ್ ಜಿ.ಬೀದರ್
ಗಮಿಗಮಿಸಲಿ ಕಸ್ತೂರಿ ಕನ್ನಡ
ಕರಿಮಣ್ಣಿನ ಕಲ್ಪತರು ಕರಾವಳಿಯ ಕರುನಾಡು
ಕವಿ ಕೋಗಿಲೆ ಜ್ಞಾನಪೀಠಿಗಳ ಬೀಡು
ಹಸಿರಿನ ವನಸಿರಿಯ ಗಿರಿಗಳ ಜಾಡು
ಅಗಣಿತ ಗಂಧದ ಚೆಂದದ ಕನ್ನಡನಾಡು. *೧*
ಕನ್ನಡಿಗರ ನಾಡಲ್ಲಿ ಕಲ್ಲಿಲ್ಲ ಮುಳ್ಳಿಲ್ಲ
ಕನ್ನಡಿಗರ ಎದೆಯಲ್ಲಿ ಪ್ರೀತಿಯ ಹೂವೆಲ್ಲ
ಕೈ ನೀಡಿ ಅಪ್ಪುವರು ಬರುವರನೆಲ್ಲ ಅಣ್ಣ
ಕಪಟತನ ಅರಿಯದ ಕನ್ನಡತನದ ಬಣ್ಣ. *೨*
*ಕ* ರುಣೆಯ ಕರುಳು ಬಳ್ಳಿಯ ನಾಡು
ಅ *ನ್ನ* ವ ನೀಡುವ ಅನ್ನದಾತರ ಬೀಡು
*ಡಂ* ಭಾಚಾರವಿಲ್ಲದ ಸಹೃದಯಿಗಳ ಮನೆ
*ಭಾಷೆ* ಗೆ ಎಂದೂ ತಪ್ಪದವರ ಅರಮನೆ. *೩*
ಭಾರತಾಂಬೆಯ ಹಿರಿಮಗಳ ಸ್ಥಾನದ ಹಿರಿಮೆ
ದೇಶದ ನೋಟಿನಲಿ ನಾಲ್ಕನೆಯ ಸ್ಥಾನದ ಗರಿಮೆ
ದೇಶದ ಪ್ರಗತಿಗೆ ಹೆಚ್ಚಿನ ತೆರಿಗೆಯ ಕೊಡುಗೆ
ಕನ್ನಡಮ್ಮನೇ ಪ್ರಗತಿಯ ದ್ಯೋತಕ ಹೆಮ್ಮೆಗೆ. *೪*
ಎಕ್ಕಡ ಎನ್ನಡಗಳ ನಡುವೆ ತಲೆ ಎತ್ತಿ ನಿಂತ ಕನ್ನಡ
ಕನ್ನಡಿಗರ ಎದೆಯಲ್ಲಿ ಗಮಿಗಮಿಸಲಿ *ಕಸ್ತೂರಿ* ಕನ್ನಡ॥
ಮಾಲತೇಶ ಎನ್ ಚಳಗೇರಿ ಸರ್
ಆಂಗ್ಲಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಹಿರೇಹಳ್ಳಿ *ಬ್ಯಾಡಗಿ* ಹಾವೇರಿ ಜಿಲ್ಲೆ
೯೪೪೯೫೧೩೬೫೫
ನಮ್ಮ ನುಡಿ
ಆ ಭಾಷೆ ಈ ಭಾಷೆ ಯಾವುದಿದ್ದರೇನು ಮನದ
ಭಾವಕ್ಕೊಂದೇ ಸುಂದರ ಪರಿಭಾಷೆ
ಅದುವೇ ನಮ್ಮ ಕನ್ನಡ….
ಹೆಗ್ಗಳಿಕೆ ಇದಕುಂಟು
ಎರಡುಸಾವಿರ ವರುಷಗಳ ಇತಿಹಾಸದ ನಂಟು…
ನುಡಿಗಳೋ ಜೇನ ಮಾಧುರ್ಯದಾ ತಂಪು…
ಕೇಳಲು ಕೋಗಿಲೆಯ ದನಿಯಂತೆ ಇಂಪು
ಕೀರ್ತಿಯೋ ಎಲ್ಲೆಡೆ ಪಸರಿಸಿದಾ ಕಸ್ತೂರಿಯಾ ಕಂಪು……
ಸಾಹಿತ್ಯ-ಸಂಗೀತ-ಕಲಾ ಸರಸ್ವತಿ
ಒಲಿದು ಸಂತಸದಿ ವಿಹರಿಸುತಿಹಳಿಲ್ಲಿ……
ಕನ್ನಡ ಕವಿವರೇಣ್ಯರುಗಳ ಕಲಾ ತಪಸ್ವಿಗಳ ಕೀರ್ತಿ ಪ್ರಭೆಯು
ಬೆಳಗುತಿದೆ ವಿಶ್ವದೆಡೆಯಲ್ಲಿ……
ನಮ್ಮ ನಾಡುನುಡಿಯ ಹಿರಿಮೆ ಗರಿಮೆಗಳು ರಾರಾಜಿಸುತ ಆಗಸದೆತ್ತರದಲ್ಲಿ……
ಬಂಧುಗಳು ನೂರಾರು ಇರಲಿ….
ತಾಯಿಗಿಂತ ಬಂಧುವಿಲ್ಲ ಎಂಬ ನಾಣ್ಣುಡಿ…..
ಯಾವ ಭಾಷೆಯೇ ಕಲಿಯಲಿ
ಕನ್ನಡಮ್ಮನ ಹಿರಿಮೆಗೆ ಕುಂದಿಲ್ಲ ಬಿಡಿ…..
ಉಸಿರುಸಿರಲಿ ತುಂಬಿರಲಿ ಕನ್ನಡ…..
ಅಣುಅಣುವಿನಲಿ ಬೆರೆತಿರಲಿ ಕನ್ನಡ….
ಎನಿತು ಪುಣ್ಯದ ಫಲವೋ ನಾವಿಲ್ಲಿ ಜನಿಸಿದೆವು ಎಂಬುದು ನೆನಪಿರಲಿ ನಿರತ….
ಕನ್ನಡ ತಾಯಿಯಸೇವೆಯಲಿ ನಾವಿರಬೇಕು ಅನವರತ……
ಮಾಲಾ ರಾಮಚಂದ್ರ
ಶಿವಮೊಗ್ಗ
ನಾ ಹುಟ್ಟಿದ ನೆಲ ಅದೆ ಕರ್ನಾಟಕ
ನಾ ಹುಟ್ಟಿದ ನೆಲ ಅದೆ ಕರ್ನಾಟಕ ,
ನಾ ಬೆಳೆದ ನೆಲ ಅದೇ ಕರ್ನಾಟಕ,
ನಾ ತಿನ್ನುವ ಅನ್ನವ ಬೆಳೆಯುವ ನೆಲ ಅದೆ ಕರ್ನಾಟಕ,
ನಾನು ನಮ್ಮದು ಎನ್ನುವ ನೆಲ ಅದೇ ಕರ್ನಾಟಕ//
ನಾನು ಕಲಿಯುವ ಶಾಲೆಯ ನೆಲ ಅದೇ ಕರ್ನಾಟಕ,
ನಾ ಮಾತಾಡುವ ನೆಲ ಅದೇ ಕರ್ನಾಟಕ,
ನಾ ಬರೆಯುವ ಭಾಷೆ ಕನ್ನಡದ ನೆಲ ಅದೆ ಕರ್ನಾಟಕ,
ನಾ ಕಲಿಯುವ , ನಾ ಕಲಿಸುವ ನೆಲ ಅದೇ ಕರ್ನಾಟಕ//
ತಾಯಿ ಭುವನೇಶ್ವರಿವಿದ್ದ ನೆಲ ಅದೇ ಕರ್ನಾಟಕ,
ಸಹ್ಯಾದ್ರಿಯ ಬೆಟ್ಟ ವಿರುವ ನೆಲ ಅದೇ ಕರ್ನಾಟಕ,
ರಭಸದಿ ಹರಿಯುವ ಜೋಗ ಜಲಪಾತದ ನೆಲ ಅದೇ ಕರ್ನಾಟಕ ,
ನದಿಗಳು ತುಂಬಿ ಹರಿದು ನೆಲೆಸಿರುವ ನೆಲ ಅದೇ ಕರ್ನಾಟಕ//
ವೀರ ಧೀರರು ಹೋರಾಡಿದ ನೆಲ ಅದೇ ಕರ್ನಾಟಕ,
ಕವಿಗಳ ಪುಂಜವಿರುವ ನೆಲ ಅದೇ ಕರ್ನಾಟಕ,
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು
ಕುಣಿದಾಡುವ ನೆಲ ಅದೇ ಕರ್ನಾಟಕ //
ಕು. ಸಂಗೀತಾ ಎಸ್ ಕಲಬುರ್ಗೆ
ಬೀದರ
ನಾಡಿನ ಹಿರಿಮೆ
ಕನ್ನಡ ನಾಡಿನ ಮುದ್ದಿನ ಕುವರರೆ
ಕನ್ನಡಭಾಷೆಯ ಮಾತಾಡಿ
ಕನ್ನಡ ನಮ್ಮಯ ಹೆಮ್ಮೆಯು ನುಡಿಯಲು
ಕಸ್ತೂರಿ ಕನ್ನಡ ಎನ್ನುತ ನಾವು ಮೆರೆಸೋಣ
ನಾಡನು ಹಿರಿಯರು ಕಟ್ಟಿಹರು
ಗೂಡಲಿ ಎಲ್ಲರು ನೆಲೆಸಿಹರು
ಮಾಡಲು ಜನಸೇವೆ ಕಾಯಕ ನಿತ್ಯ
ಬೀಡದು ನಮ್ಮದು ಕನ್ನಡವು
ನದಿಗಳು ಎನಿತೋ ಹರಿದಿವೆ ಇಲ್ಲಿ
ಬದುವನು ನಿರ್ಮಿಸಿ ಬೆಳೆಯಲಿಕೆ
ಇದುಯಾವ ಊರಿಗು ಸಾಟಿಯೆ ಅಲ್ಲ
ವಿಧಿ ಬರೆದಿಹ ಇದರ ಕಾರ್ಯವನು
ಮಹಿಳಾಮಣಿಯರು ಪುರುಷರ ತೆರದಿ
ಬಹಳ ಹಿಂದೆಯೇ ಕಾದಿದರು
ಕಹಳೆಯನೂದಿ ಸಮರವ ಸಾರಿ
ಮಹನೀಯರಾಗಿ ಸ್ಮರಣೀಯರು
ನಮ್ಮೀ ನಾಡಲಿ ಎಲ್ಲವು ಇಹುದು
ಹಮ್ಮೀರರಾಗಿ ನಡೆಯುವೆವು
ನಮ್ಮೀಕಾಯಕ ದೇಶದ ಮಾದರಿ
ಹೆಮ್ಮೆಯ ಗಳಿಸುತ ಮೆರೆಯುವೆವು
ವಿಜ್ಞಾನ ಕಲೆಗಳು ಶಿಕ್ಷಣದಲ್ಲಿ
ಅಜ್ಞಾನವನ್ನು ಕಳೆಯುತಲಿ
ನೀಜ್ಞಾನಿ ಎನಿಸಿ ನಿತ್ಯವು ಜಗಕೆ
ಸುಜ್ಞಾನವನ್ನು ನೀಡಲಿ ಎಂದು ಹಾರೈಸಿ
ನಾಡಿನ ಎಲ್ಲೆಯ ರಕ್ಷಿಸುತಿಹರು
ನಾಡಿನ ಹೆಮ್ಮೆಯ ಸೈನಿಕರು
ಕೆ.ಟಿ. ಶ್ರೀಮತಿ, ಮೈಸೂರು.
ನಮ್ಮ ಕನ್ನಡ
ನಮ್ಮ ಭಾಷೆಯಿದು ಕನ್ನಡ
ನಮ್ಮ ಮಾತೆಯಿದು ಕನ್ನಡ
ನಮ್ಮ ಜೀವನವು ಕನ್ನಡ
ನಮ್ಮ ದೇವರಿದು ಕನ್ನಡ
ನಮ್ಮ ಪ್ರೀತಿಯೊಳು ಕನ್ನಡ
ನಮ್ಮ ನೀತಿಯೊಳು ಕನ್ನಡ
ನಮ್ಮ ಸಂಸ್ಕೃತಿಯು ಕನ್ನಡ
ನಮ್ಮ ಬರೆವಣಿಗೆಯು ಕನ್ನಡ
ನಮ್ಮ ಮನಸ್ಸಿನಲ್ಲು ಕನ್ನಡ
ನಮ್ಮ ಉಸಿರಿನಲ್ಲು ಕನ್ನಡ
ನಮ್ಮ ನರನಾಡಿಯೊಳು ಕನ್ನಡ
ನಮ್ಮ ಹೃದಯದೊಳು ಕನ್ನಡ
ನಮ್ಮ ಕನಸಿನೊಳು ಕನ್ನಡ
ನಮ್ಮ ನನಸಿನೊಳು ಕನ್ನಡ
ನಮ್ಮ ಸ್ನೇಹದಲಿ ಕನ್ನಡ
ನಮ್ಮ ಸಂಬಂಧದಲಿ ಕನ್ನಡ
ನಮ್ಮ ಸೂರಿನಲ್ಲಿ ಕನ್ನಡ
ನಮ್ಮ ಊರಿನಲ್ಲಿ ಕನ್ನಡ
ನಮ್ಮ ಮಾತಿನಲ್ಲು ಕನ್ನಡ
ನಮ್ಮ ಕೆಲಸದಲ್ಲು ಕನ್ನಡ
ನಮ್ಮ ಕಲಿಕೆಯೊಳು ಕನ್ನಡ
ನಮ್ಮ ಗಳಿಕೆಯೊಳು ಕನ್ನಡ
ನಮ್ಮ ಕಾವೇರಿಯು ಕನ್ನಡ
ನಮ್ಮ ಶ್ರೀಗಂಧವು ಕನ್ನಡ
ನಂದೀಶ ಬಿ. ಹದಿನಾರು 9916948985
ಮೈಸೂರು
ಕಸ್ತೂರಿ ಕನ್ನಡತಿ..
ಹೃದಯದೊಳಗಿನ
ಕೊಳಲ ಗಾನ
ಭಾವದಳಗಿನ ಮಧುರ ಯಾನ..
ಕಸ್ತೂರಿ ಕನ್ನಡ..
ಕಸ್ತೂರಿ ಕನ್ನಡ..
ಹಸಿರ ಝರಿಯ
ಪಿತಾಂಹರವನುಟ್ಟು..
ಹರಿವ ನದಿಯ
ಆಭರಣವ ತೊಟ್ಟು..
ಮುಗಳ್ನಗುತಿಹಳು ತಾಯಿ..
ಕಸ್ತೂರಿ ಕನ್ನಡತಿ..
ಎಲ್ಲ ಭಾಷೆಯ
ಮಡಿಲಲಿರಿಸಿ..
ಹಲವು ಮನಸನು
ಸಾಕಿ ಸಲುಹಿಸಿ..
ಪೊರೆವಳೀಕೆ..
ಭೂತಾಯಿ ಕನ್ನಡತಿ..
ಇತಿಹಾಸದಲ್ಲಿ ಮೆರೆದು..
ರಾಜಕೀಯದಲ್ಲಿ ಸವೆದು..
ಕನ್ನಡಿಗರ ಹೃದಯ ಸಾಮ್ರಾಜ್ಞಿ..
ಹೆಮ್ಮೆಯ ಕನ್ನಡತಿ..
–ಭವ್ಯಾ ಹಳೆಯೂರು