ಗಂಡುಗಲಿ ಕುಮಾರ ರಾಮ
ಕನ್ನಡ ನಾಡಿನ,ಚಿನ್ನದ ಬೀಡಿನ
ರನ್ನದ ರಾಮನು ಗಂಡುಗಲಿ||
ಕನ್ನವ ಹಾಕುವ,ನನ್ನಿಯ ನಾಡುವ
ಕುನ್ನಿಗೆ ಸಿಂಹ ಸ್ವಪ್ನದಲಿ ||೧||
ಪರನಾರಿಯಣ್ಣ,ಶಿರಕಾಯೊವಣ್ಣ
ಪರಶಿವನಾಂಶದ ರಾಮಣ್ಣ |
ಧರಣಿಗೆ ಕುತ್ತನು,ತರುವಂತ ಶತ್ರುವಿಗೆ
ಮರಣದ ದೀಕ್ಷೆಯ ನೀಡುವನು ||೨||
ಕಂಪನ ಹುಟ್ಟಿಸೊ,ಕಂಪಿಲ ರಾಯನ
ಸಂಪಿಗೆ ಸುಂದರ ಯುವರಾಜ |
ಇಂಪಿನ ದನಿಯವ,ಕೆಂಪನೆ ಬಣ್ಣವ
ಕಂಪನು ಮೂಡಿಸೊ ರವಿತೇಜ||೩||
ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ
ಬಿತ್ತದು ಹೊಡೆತವು ರಾಮನದು |
ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು
ಬಿತ್ತದು ಮಾತೆಯ ಮನೆಯೊಳಗೆ||೪||
ಚೆಂಡನು ಬೇಡಲು,ಗಂಡ್ಹುಲಿ ಬಂದುದ
ಕಂಡಳು ಕಾಮದ ಚಿಕ್ಕಮ್ಮ |
ಕೆಂಡದ ಕಾಮವ,ತುಂಡರಿಸೆನ್ನಲು
ಬೆಂಡೆಯ ತೋರಿದ ಕಂದಮ್ಮ ||೫||
ಅದರೊಳು ಕೆತ್ತಿತು,ಗಧಗಧ ನಡುಗಿಸೊ
ಮುದವನು ನೀಡುವ ಮಾತೊಂದ|
ಓದಿದಳು ಮಾತೆಯು,ತೊದಲುವ ದನಿಯಲಿ
ಪದವನು ಪರನಾರಿ ಸೋದರ ||೬||
ಕೋಪಿಸಿಕೊಂಡಳು,ರೂಪಸಿ ಪಾಪಿಯು
ಶಾಪವ ಹಾಕುತ ಮನದಲ್ಲಿ |
ಅಪವಾದ ಕೊಡುತ,ತಾಪದಿ ದೂರಲು
ಕೋಪದಿ ಪಿತ ಸುತನ ವಧಿಸಲು||೭||
ಕಮ್ಮಟ ದುರ್ಗದ,ಹೆಮ್ಮೆಯ ಪುತ್ರನು
ಬಿಮ್ಮನೆ ರಾಜ್ಯವನಾಳುತಿರೆ|
ಅಮ್ಮನ ಸಂಚಿಗೆ,ಕಮ್ಮಟ ಕೀರ್ತಿಯು
ಸುಮ್ಮನೆ ಮಣ್ಣಿನ ಪಾಲಾಯ್ತು ||೮||
*ಶ್ರೀ ಈರಪ್ಪ ಬಿಜಲಿ.ಕೊಪ್ಪಳ*
ಕವನವನ್ನು ಪ್ರಕಟಸಿದ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು👏ಸರ