Homeಕವನವಚನ ಸಾರ 2: ಅಲ್ಲಮಪ್ರಭು ವಚನ

ವಚನ ಸಾರ 2: ಅಲ್ಲಮಪ್ರಭು ವಚನ

ಅಲ್ಲಮಪ್ರಭು ವಚನ 

ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,

ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!

ತೊಟ್ಟಿಲ ತೂಗುವೆ ಜೋಗುಳವಾಡುವೆ

ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು.

ಇದೇನು ಹೇಳಾ ಗುಹೇಶ್ವರಾ?


ಭವಕ್ಕೆ ಬಂದ ಜೀವ ಅಜ್ಞಾನವಶದಿಂದಾಗಿ ಭವಾವಳಿಯ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿದೆ ತನ್ನ ಅಜ್ಞಾನವನ್ನು ಕಳೆದುಕೊಳ್ಳದ ಹೊರತು ಆ ಜೀವಕ್ಕೆ ಮುಕ್ತಿ ಇಲ್ಲವೆಂಬುದನ್ನು ಈ ಬೆಡಗಿನ ವಚನ ಧ್ವನಿಸುತ್ತದೆ.

     ಎಲ್ಲವನ್ನೂ  ನುಂಗಿ ನೊಣೆದು ಹಾಕುವ ಅವಿದ್ಯೆಯೆಂಬ ಮಾಯೆಯೇ ರಕ್ಕಸಿ. ಮನ,  ಬುದ್ಧಿಗಳೆಂಬವರು ಈಕೆಯ ಮಕ್ಕಳು. ದೇಹವೆಂಬುದೇ ತೊಟ್ಟಿಲು. ಇದು ಇಂದ್ರಿಯ ಮನಸ್ಸು, ಬುದ್ಧಿಗಳಿಗೆ ಆಶ್ರಯ ಸ್ಥಾನವಾಗಿದೆ.  ಈ ಪಂಚ ಜ್ಞಾನೇಂದ್ರಿಯಗಳು ಒಂದರ್ಥದಲ್ಲಿ  ಮಾಯೆಯ ಮಕ್ಕಳೇ.  

ಈ ಮಾಯೆಗೆ ಹೇಳತೀರದಷ್ಟು ಹಸಿವಿನ ದಾಹ.  

ಹೀಗಾಗಿ ಈಕೆ ತನ್ನ ಮಕ್ಕಳನ್ನು ಗೋಳಾಡಿಸಿ ದುಃಖಕ್ಕೀಡುಮಾಡಿ ಜೀವ ಹಿಂಡುತ್ತಿದ್ದಾಳೆ. 

ಹೀಗಿರುವಾಗ ಆ ಮಕ್ಕಳ ಹಸಿವಿನ ಗೋಳನ್ನು  ಕೇಳುವವರಾರು? ಈ ಮಕ್ಕಳಿಗೋ ವಿಷಯದ ವಿಪರೀತ ದಾಹ ಇವರನ್ನು ಸಮಾಧಾನಪಡಿಸಲು ತೊಟ್ಟಿಲ(ದೇಹ)ದ  ಅಭಿಮಾನಿಯಾದ ‘ಜೀವ ‘ ನು ತೊಟ್ಟಿಲನ್ನು ತೂಗತೊಡಗಿದನು. ಅಜ್ಞಾನಿಯಾದ ಜೀವನು  ವಿಷಯಸುಖಗಳಲ್ಲಿ ತಲ್ಲೀನನಾಗಿ, ಅದರಲ್ಲಿಯೇ ಮುಳುಗಿ ದಾಹ ತೀರದ್ದಕ್ಕಾಗಿ ಪ್ರಲಾಪಿಸತೊಡಗುತ್ತಾನೆ. 

ಇದನ್ನೇ ಅಲ್ಲಮರು ‘ತೊಟ್ಟಿಲ ತೂಗುವೆ ಜೋಗುಳವಾಡುವೆ’ ಎಂದಿದ್ದಾರೆ. ಕೊನೆಗೆ ಮಕ್ಕಳಿಗೆ ಆಶ್ರಯವಾದ ತೊಟ್ಟಿಲು, ಆ ದೇಹ ಮತ್ತು ಬಾಣತಿಯನ್ನೇ ನುಂಗಿ ಹಾಕುತ್ತದೆ. ರಾಕ್ಷಸ ಸ್ವರೂಪಿ ಮಾಯೆಯ ವಿಷಯಕ್ಕೆ ದೇಹ ಇಂದ್ರಿಯ ಮನ ಬುದ್ಧಿಗಳು ಬಲಿಯಾದವು.

ಹೀಗೆ ಮಾಯೆ ಅಂತರಂಗ ಬಹಿರಂಗದೊಳಗೆ ವ್ಯಾಪಿಸಿ, ತೀರದ ದಾಹವನ್ನುಂಟುಮಾಡಿ ಇಬ್ಬಗೆಯಲ್ಲೂ ಅಶಾಂತಿ, ಅತೃಪ್ತಿ, ಕಷ್ಟ – ನಷ್ಟಗಳನ್ನು ಅನುಭವಿಸುವಂತೆ ಮಾಡಿ, ಬದುಕು ನರಕಸದೃಶ್ಯವಾಗುವಂತೆ ಮಾಡಿತು.ಇದೆಲ್ಲವೂ ಮಾಯೆಯ ವಿಲಾಸ.


ಪ್ರೊ. ಜಿ ಎ. ತಿಗಡಿ.

RELATED ARTICLES

Most Popular

error: Content is protected !!
Join WhatsApp Group