ಹೊನ್ನಾಳಿ: ಆತ್ಮಕ್ಕೆ ಮೂರು ಶಕ್ತಿ ಇವೆ. ಮನಸ್ಸು, ಬುದ್ಧಿ ಮತ್ತು ಸಂಸ್ಕಾರ. ಈ ಮೂರು ಶಕ್ತಿಗಳನ್ನೂ ಸರಿಯಾಗಿ ಬಳಸಿಕೊಂಡು ಜೀವನ ಸಾಗಿಸಿದರೆ ಆತ್ಮೋದ್ದಾರ ಖಂಡಿತಾ ಆಗುತ್ತದೆ ಎಂದು ಹಳಿಯಾಳದ ಹಿರಿಯ ಅಕ್ಕಾ ಪದ್ಮಕ್ಕ ಅವರು ಪ್ರವಚನ ನೀಡಿದರು.
ಹೊನ್ನಾಳಿಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಶರಣರು ಕಂಡ ಶಿವ ಪ್ರವಚನದ ಮುಂದುವರೆದ ಭಾಗವಾಗಿ ಪ್ರತಿನಿತ್ಯ ಓಂಶಾಂತಿ ಸಂದೇಶ ನಡೆಯುತ್ತಿದ್ದು ಈಗಾಗಲೇ ಐವತ್ತು ದಿನಗಳನ್ನು ದಾಟಿದ್ದು 108 ದಿನಗಳ ಪ್ರವಚನ ನಡೆಯುವುದಿದೆ.
ಪದ್ಮಕ್ಕಾ ಮಾತನಾಡುತ್ತಾ ಆತ್ಮ ಮತ್ತು ಪರಮಾತ್ಮ ಸಂಬಂಧ, ಜೀವನ ಸಾರ್ಥಕತೆಯ ಗುಟ್ಟು ನಮ್ಮಲ್ಲೇ ಇದ್ದು ಅದರ ಸಫಲತೆಗೆ ಶ್ರಮಿಸಬೇಕೆಂದು ಹೇಳಿದರು. ನಾವು ಸ್ವಾರ್ಥಿಗಳಾಗದೆ ಇನ್ನೊಬ್ಬರಿಗೆ ಬೇಕಾಗುವ ಪರಹಿತ ಸ್ನೇಹಿ ಆಗಬೇಕು. ವಿಶ್ವಕ್ಕೆ ಮಿತ್ರ ಆಗಿ, ವಿಶ್ವಾಮಿತ್ರ ಆಗಬೇಕು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು.
“ಯದ್ ಭಾವಂ ತದ್ಭವತಿ” ಅಂದರೆ ಇನ್ನೊಬ್ಬರಿಗೆ ನೀನು ಒಳ್ಳೆಯವನು ಆದರೆ ನಿನಗೆ ಇನ್ನೊಬ್ಬರು ಒಳ್ಳೆಯವರಾಗುತ್ತಾರೆ. ಈ ಜೀವನ ನೀರ ಮೇಲಣ ಗುಳ್ಳೆ. ಸ್ನಾನ ಮತ್ತು ಜೀವನ ಹೇಗೆ ಮಾಡಬೇಕು ಅಂದ್ರೆ ಗುಬ್ಬಿ ಸ್ನಾನ ತರಹ ಮಾಡಬೇಕು. ಹಕ್ಕಿಯೊಂದು ಹಾರಿಬಂದು ಅಂಗಳದ ಅಕ್ಕಿ ತಿಂದು ಹಾರಿ ಹೋದಂತೆ ಜೀವನ ಇರುತ್ತದೆ. ಕಮಲದ ಹೂವು ಪವಿತ್ರತೆಯ ಸಂಕೇತ. ಪ್ರವೃತ್ತಿಯಲ್ಲಿ ಇದ್ದು, ಸಂಸಾರದಲ್ಲಿ ಇದ್ದು, ಏನೂ ಕೆಟ್ಟದ್ದು ಅಂಟದಂತೆ ಕರ್ತವ್ಯ ಮಾಡಿ ಕಮಲದಂತೆ ಇದ್ದು ಜೀವನ ನಡೆಸಿ ಹೋಗಬೇಕು. ಅಂದಾಗ ನಮ್ಮ ಜೀವನ ಸಾರ್ಥಕ. ಶರಣರು, ಸಂತರು ಹೀಗೆ ಬದುಕಿ ಹೋಗಿದ್ದಾರೆ.. ನೋಡಬೇಕು, ನೊಡದಂತಿರಬೇಕು. ಕೇಳಬೇಕು ಕೇಳದಂತಿರಬೇಕು, ಮಾಡಬೇಕು ಮಾಡದಂತಿರಬೇಕು. ಬ್ಯಾಂಕಿನ ಕ್ಯಾಷಿಯರ್ ತರ ಈ ಜೀವನ. ದಿನವಿಡೀ ಹಣ ಎಣಿಸಿ, ಎಣಿಸಿ, ಸರಿಯಾಗಿ ಲೆಕ್ಕ ಇಟ್ಟು , ಮತ್ತೆ ಮನೆಗೆ ಹೋಗಬೇಕು. ಆ ಹಣ ಒಯ್ಯುವಂತಿಲ್ಲ… ಹೀಗೆ ಜೀವನ. ಎಲ್ಲಾ ಪರಮಾತ್ಮನದು. ಯಾವುದೂ ನಮ್ಮದಲ್ಲ ಎಂಬ ಅರಿವು ಇರಬೇಕು. ಆತ್ಮನ ವಿಚಾರ ಮಾಡುವ ಶಕ್ತಿಯೇ ಆತ್ಮ. ಒಬ್ಬ ಸಮುದ್ರದ ಮುಂದೆ ಗಂಟೆ ಗಟ್ಟಲೆ ನಿಂತಿದ್ದ. ಮತ್ತೊಬ್ಬ ಕೇಳಿದ. ಇಲ್ಲೇಕೆ ನಿಂತಿರುವೆ ಏಕೆ. ಅವನು ಹೇಳಿದ ಅಲೆಗಳು ನಿಂತರೆ ಹೋಗುವೆ ಅಂದ. ಆಗ ಇವನು ಹೇಳಿದ ನೀನು ಇಲ್ಲೇ ನಿಂತು ಬಿಡು. ಯಾಕಂದ್ರೆ ಅಲೆಗಳು ನಿಲ್ಲುವುದಿಲ್ಲ.
ಅಂದರೆ ಮನಸಿನ ಆಲೋಚನೆ ವಿಚಾರಗಳು ನಿಲ್ಲುವುದಿಲ್ಲ. ನಾವು ಅವುಗಳನ್ನು ನಿರ್ಧರಿಸಿ ಮುನ್ನಡೆಯಬೇಕು ಅಷ್ಟೇ. ನಮ್ಮ ಆತ್ಮವು ಪೆಂಡ್ರೈವ್ ತರಹ ನಾವು ಮಾಡುವ ಎಲ್ಲಾ ಕೆಲಸ, ಆಡುವ ಮಾತು, ನೀಡುವ ನೋಟಗಳನ್ನು ರೆಕಾರ್ಡ್ ಮಾಡಿಕೊಂಡಿರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನಿಗೆ ಮೂವತ್ತರಿಂದ ಐವತ್ತು ಸಾವಿರ ವಿಚಾರಗಳು ಮನಸಿಗೆ ಬರುತ್ತವೆ. ಆದರೆ ಅವುಗಳನ್ನೆಲ್ಲ ಕಾರ್ಯ ರೂಪಕ್ಕೆ ತರಲಾಗದು.
ನಮ್ಮ ಮನಸಿನಲ್ಲಿ ನಿರಂತರವಾಗಿ ಸುಖದಾಯಕ, ದುಃಖದಾಯಕ ಮತ್ತು ಕಾಲ್ಪನಿಕ ಹೀಗೆ ಮೂರು ರೀತಿಯ ಪ್ರಕಾರಗಳು ಬರುತ್ತಿರುತ್ತವೆ. ಎಲ್ಲವನ್ನೂ ಹತೋಟಿಯಲ್ಲಿ ಇಟ್ಟುಕೊಂಡು ಬೇಕಾದ್ದನ್ನು ಮಾತ್ರ ಬಳಸಬೇಕು. ಯಾಕೆಂದರೆ ಈ “ಮನಸ್ಸು ಕುಟಿಲ ಕಳ್ಳ” ಇದ್ದಂತೆ. ಹೀಗೆ ಮನಸು ಮತ್ತು ಬುದ್ದಿ ಎರಡು ಸಮತೋಲನದಲ್ಲಿ ಇದ್ದಾಗ, ಬುದ್ಧಿಶಕ್ತಿ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಆತ್ಮಕ್ಕೆ ಮೂರನೇ ಶಕ್ತಿ ಸಂಸ್ಕಾರ ಗಟ್ಟಿ ಆಗುತ್ತದೆ.
ಪರಪೀಡನೆಯೇ ಪಾಪ,
ಪರೋಪಕಾರವೇ ಪುಣ್ಯ,
ಪ್ರಾಮಾಣಿಕತೆಯೇ ನೀತಿ.
ಶರಣರ ನಡೆ ತೀರ್ಥ, ನುಡಿ ತೀರ್ಥವಾಗಿತ್ತು. ಇಂದು ಅದು ಮಾಯೆಯಾಗುತ್ತಿದೆ. ಸತ್ಯತೆ ಮತ್ತು ಪ್ರಾಮಾಣಿಕತೆ ಇಂದು ಕಡಿಮೆಯಾಗುತ್ತಿದೆ.
ಸತ್ಯ ಯಾವಾಗಲೂ ಒಂಟಿಯೆ, ಸುಳ್ಳಿಗೆ ನೆಂಟರು ಜಾಸ್ತಿ. ಹಾಗಂತ ನೆಂಟರನ್ನು ಹೆಚ್ಚು ಸಂಪಾಡಿಸೋಣ ಎಂದು ಮುಗಿ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ. ಈ ಸತ್ಯ, ಒಳ್ಳೇದು, ಪ್ರಾಮಾಣಿಕತೆಗಳನ್ನು ಈಶ್ವರೀಯ ವಿಶ್ವವಿದ್ಯಾಲಯ ಕಲಿಸಿ ಕೊಡುತ್ತದೆ. ಅಂತಹ ಪ್ರಯತ್ನವೇ ಈ ಪ್ರವಚನ ಸಂದೇಶ ಕಾರ್ಯಕ್ರಮಗಳು. ಸದಾ ಭಗವಂತನ , ಪರಮಾತ್ಮನ ನೆನಪಿನಲ್ಲಿ ಇದ್ದಾಗ ಅದುವೇ ಯೋಗ ಆಗುತ್ತದೆ. ಆತ್ಮಸಾಕ್ಷಿ ಇಟ್ಟುಕೊಂಡು ಬದುಕೋಣ. ಜೀವನ ಸಾರ್ಥಕ ಮಾಡಿಕೊಳ್ಳೋಣ.
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ
ವರದಿ:
*ಶ್ರೀ ಸಂತೋಷ್ ಬಿದರಗಡ್ಡೆ*
ಶಿಕ್ಷಕ ಸಾಹಿತಿಗಳು