ಮೂಡಲಗಿ: ‘ಪ್ರಮಾಣಪತ್ರ ಪಡೆಯುವುದು ಶಿಕ್ಷಣವಲ್ಲ. ಶಿಕ್ಷಣದೊಂದಿಗೆ ಸಂಸ್ಕಾರ ಪಡೆದಾಗ ಮಾತ್ರ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದುತ್ತಾರೆ’ ಎಂದು ಗೋಕಾಕ ಜೆಎಸ್ಎಸ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ವಿ. ಮಳಗಿ ಅವರು ಹೇಳಿದರು.
ಮೂಡಲಗಿಯ ಶೈಕ್ಷಣಿಕ ವಲಯದ ದುರದುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳಿಲ್ಲದೆ ಇದ್ದರೆ ಅದು ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದರು.
ಗೋಪಾಲಕೃಷ್ಣ ಗೋಖಲೆ, ಸರ್ ಎಂ. ವಿಶ್ವೇಶ್ವರಯ್ಯನಂಥ ಅನೇಕ ಮಹನೀಯರು ಅನೇಕ ಕಷ್ಟಗಳನು ಎದುರಿಸಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ಸಮಾಜಕ್ಕೆ ಬೆಳಕಾಗಿದ್ದರು. ಅಂಥ ಮಹನೀಯರ ಜೀವನವನ್ನು ಆದರ್ಶವನ್ನಾಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಂ.ಸಿ. ಅಗಸಗಿ ಮತ್ತು ಶಿಕ್ಷಕಿ ಜುಗನ್ನವರ ಅವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಎಂ.ಕೆ. ವಡೇರ ಸ್ವಾಗತಿಸಿದರು, ಪಿ.ಬಿ. ಖನ್ನೋರಿ ನಿರೂಪಿಸಿದರು, ಐ.ಐ. ಬಾಳೋಬರ ವಂದಿಸಿದರು.