ಬೆಳಗಾವಿ – ಕರ್ನಾಟಕ ದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಕನ್ನಡಿಗರು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ ಇದು ಅತ್ಯಂತ ಖೇದಕರ ಸಂಗತಿ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ರಾಜ್ಯದ ಎಲ್ಲ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳು ತಮ್ಮ ಪ್ರಯತ್ನವನ್ನು ಸತತವಾಗಿ ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಕೆ. ಎಲ್. ಇ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಹಳ್ಳಿಗಳಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಯೋಜನೆಯನ್ನು ಹಾಕಿಕೊಂಡಿದೆ. ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಕನ್ನಡ ಶಾಲೆಗಳತ್ತ ಸೆಳೆಯುವ ವಿಶೇಷ ಯೋಜನೆಗಳನ್ನು ಸರ್ಕಾರ ಮತ್ತು ಸಂಸ್ಥೆಗಳು ರೂಪಿಸಬೇಕು ಎಂದು ಡಾ. ಪ್ರಭಾಕರ ಕೋರೆ ಹೇಳಿದರು
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೯. ೭. ೨೦೨೪ರಂದು ನಡೆದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ಎಂಬ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು ಮಾತನಾಡಿದರು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ಸರಸ್ವತಿ ಕಳಸದ ನಿವೃತ್ತ ಪ್ರಾಚಾರ್ಯರು ಇವರು ದಿ. ಸರ್ದಾರ ರಾಜಾಲಖಮಗೌಡ ಬಸವ ಪ್ರಭು ದೇಸಾಯಿ ಅವರ ಬಾಲ್ಯ ಜೀವನ, ಅವರು ಪಡೆದ ಶಿಕ್ಷಣ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ರೀತಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
ದಿ. ಎಸ್ ವಿ ಬಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೂಡಲಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಂಜಯ್ ಸಿಂದಿಹಟ್ಟಿ ಅವರು ವಚನಗಳಲ್ಲಿ ವೈಜ್ಞಾನಿಕತೆಯ ಪರಿಕಲ್ಪನೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಳ ಶ್ರೀ ಮೆಟಗುಡ್ಡ ಇವರು ಮಾತನಾಡುತ್ತಾ ತಿಂಗಳ ಸರಣಿ ಮಾಲಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕನ್ನಡ ಭವನದ ರೂವಾರಿ ಡಾ. ಪ್ರಭಾಕರ ಕೋರೆಯವರು ಮತ್ತು ಕ್ಷೇಮಾಭಿವೃದ್ಧಿ ಸಂಘದ ಎಲ್ಲ ಸದಸ್ಯರು ಪ್ರೋತ್ಸಾಹ ನೀಡುತ್ತಿದ್ದಾರೆ, ಅಲ್ಲದೆ ಜಿಲ್ಲೆಯ ಎಲ್ಲ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸುತ್ತಿದ್ದಾರೆ, ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಯಕಯೋಗಿ ಪ್ರಶಸ್ತಿಗೆ ಭಾಜನರಾದ ಡಾ. ಪ್ರಭಾಕರ ಕೋರೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅ. ಭಾ. ವೀ.ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರತ್ನಾಪ್ರಭಾ ಬೆಲ್ಲದ ಅವರನ್ನು, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸುಮಾ ಕಿತ್ತೂರ, ಸಾಹಿತಿ ಬಸವರಾಜ ಹೂಗಾರ, ಅಪ್ಪಟ ಕನ್ನಡಪ್ರೇಮಿ ಎಂ. ಡಿ ಅಲಾಸೆ ಮುಂತಾದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಸಾಹಿತಿ ಬಸವರಾಜ ಹೂಗಾರ ಅವರು ಬರೆದ “ಸರಳ ಕನ್ನಡ ವ್ಯಾಕರಣ”ಎಂಬ ಪುಸ್ತಕ ಲೋಕಾ ರ್ಪಣೆಗೊಂಡಿತು. ಎಂ. ವಾಯ್ ಮೆಣಸಿನಕಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹೇಮಾ ಸೊನೊಳಿ ನಿರೂಪಿಸಿದರು. ವೀರಭದ್ರ ಅಂಗಡಿ ವಂದನಾರ್ಪಣೆ ಸಲ್ಲಿಸಿದರು. ಆರ್ ಬಿ ಬನಶಂಕರಿ ಅತಿಥಿಗಳ ಪರಿಚಯ ಮಾಡಿದರು. ಡಾ. ಎಸ್. ಬಿ ದಳವಾಯಿ, ಸುರೇಶ ಹಂಜಿ, ಬಸವಪ್ರಭು ಹಿರೇಮಠ, ಬಾಳಗೌಡ ದೊಡಬಂಗಿ, ಎಸ್. ಎಸ್ ತಾರದಾಳೆ, ಬಿ ಬಿ ಮಠಪತಿ, ಶ್ರೀಮತಿ. ಜಯಶೀಲಾ ಬ್ಯಾಕೋಡ, ಗೀತಾ ಶೆಟ್ಟರ್ ಮುಂತಾದ ಸಾಹಿತಿಗಳು ಕನ್ನಡಯುವ ರಕ್ಷಣಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.