ಹೋದ ವರ್ಷ ಹುಡುಗಿಯೊಬ್ಬಳು ಹೊಸ ವರ್ಷಕ್ಕೆ, ಶುಭಾಶಯ ಕಳಿಸಿದ್ದಳು ಅದರಲ್ಲಿ ಎರಡು ಸಾಲು ಹೀಗೆ ಬರೆದಿದ್ದಳು ಏನು ಮಾರಾಯರೆ ನಿಮ್ಮ ಕವನಗಳು ಎಷ್ಟು ಅಗಿದರೂ ಮುಗಿಯದ ಚೂಯಿಂಗಮ್ ಗಳು ಹಲ್ಲು ನೋವು ಕವಿತೆ ಸಾಲು ಕಡಿಮೆ ಇರಲಿ
ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲ ಕಳಿಸಿದ್ದಳು
ನಿಮ್ಮ ಕವನಗಳಲ್ಲಿ ಬೆಲ್ಲಕ್ಕಿಂತ ಎಳ್ಳು ಜಾಸ್ತಿ
ನಾವು ಮಧುಮೇಹಿಗಳಲ್ಲ ಜೊಳ್ಳು ತೆಗೆಯಿರಿ
ಶಿವರಾತ್ರಿಗೆ ಬಂದ ವ್ಯಾಟ್ಸಪ್ ಮೆಸೇಜ್
ಕವನ ಕತ್ತಲಲ್ಲಿ ಕಾಣುವ ಮಿಂಚುಳ್ಳಿ ಬೆಳಕು
ಮಿನುಗಲಿ ಆಕಾಶ ನಕ್ಷತ್ರಗಳಂತೆ ಪದಪುಂಜಗಳು
ಯುಗಾದಿಗೆ ಬೇವು ಬೆಲ್ಲ ಕಳಿಸಿ
ಏನಿದು ಕವಿಗಳೇ ನೋವಿನ ಧ್ವನಿ ಬೇವಿನ ಸೊಪ್ಪು
ಈಗಲೇ ಬಂದೀತೆ ನಿಮ್ಮ ಕವಿತೆಗೆ ಮುಪ್ಪು
ದೀಪಾವಳಿಗೆ ದೀಪ ಹಿಡಿದ ಹುಡುಗಿ ಚಿತ್ರ
ಹತ್ತಿ ತಾ ಉರಿದು ಜಗಕೆ ಬೆಳಕು ಕೊಡಲಿ
ನಿಮ್ಮ ಕವನಗಳಲ್ಲಿ ಆ ಬೆಳಕು ಮೂಡಲಿ
ರಾತ್ರಿ ಕತ್ತಲು ಆವರಿಸಿದೆ
ಕವಿತೆ ಬರೆಯುವುದು ನಿಲ್ಲಿಸಿದ್ದೇನೆ !
ಗೊರೂರು ಅನಂತರಾಜು
ಹಾಸನ
ಮೊ: 9449462879