ಲೇಖನ : ನಿಜ ಸಿರಿ

Must Read

ನಾವು ನೀವೆಲ್ಲ ಸಂತೆ ಪೇಟೆಗಳಲ್ಲಿ ಬಲೂನ್ ಮಾರುವವರನ್ನು ನೋಡಿದ್ದೆವೆ. ಅಷ್ಟೇ ಅಲ್ಲ ಅಪ್ಪ ಅವ್ವನಿಗೆ ದುಂಬಾಲು ಬಿದ್ದು ಅವುಗಳನ್ನು ಕೊಡಿಸಿಕೊಂಡು ಮೇಲಕ್ಕೆ ಹಾರಿಸಿ ಖುಷಿ ಪಟ್ಟದ್ದೂ ಇದೆ. ಇದನ್ನು ಹೇಳುವಾಗ ನಾ ಓದಿದ ಕತೆಯೊಂದು ನೆನಪಿಗೆ ಬರುತ್ತಿದೆ. ಅದು ಹೀಗಿದೆ: ಜಾತ್ರೆಗಳಲ್ಲಿ ಒಬ್ಬನು ಬಲೂನ್‌ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಅವನ ಹತ್ತಿರ ಬಣ್ಣ ಬಣ್ಣದ ಬಲೂನ್‌ಗಳಿದ್ದವು. ಮಕ್ಕಳ ಗಮನ ಸೆಳೆದು ಮಾರಾಟ ಹೆಚ್ಚಿಸಿಕೊಳ್ಳುವ ಸಲುವಾಗಿ ಅವನು ಹೀಲಿಯಂ ತುಂಬಿದ ಹಳದಿ, ಕೆಂಪು, ನೀಲಿ, ಹಸಿರು ಬಲೂನ್‌ಗಳನ್ನು ಆಕಾಶದಲ್ಲಿ ಬಿಡುತ್ತಿದ್ದ. ಅವು ಮೇಲಮೇಲಕ್ಕೆ ಹೋಗುವುದನ್ನು ನೋಡಿದ ಮಕ್ಕಳು ಅವನಲ್ಲಿಗೆ ಬಂದು ಬಲೂನ್‌ಗಳನ್ನು ಖರೀದಿಸುತ್ತಿದ್ದರು. ಇದರಿಂದ ಅವನ ಮಾರಾಟ ಮತ್ತಷ್ಟು ಹೆಚ್ಚುತ್ತಿತ್ತು. ಆತ ಈ ಕಸರತ್ತನ್ನು ಬೇರೆ ಬೇರೆ ಜಾತ್ರೆಗಳಲ್ಲಿ ಮಾಡುತ್ತಿದ್ದ.

ಒಮ್ಮೆ ಒಂದು ಜಾತ್ರೆಯಲ್ಲಿ ಅವನ ಅಂಗಿಯನ್ನು ಹಿಂದಿನಿಂದ ಯಾರೋ ಜಗ್ಗಿದಂತೆ ಆಯಿತು. ತಿರುಗಿ ನೋಡಿದರೆ ಪುಟ್ಟ ಬಾಲಕ ‘ಕಪ್ಪು ಬಣ್ಣದ ಬಲೂನ್ ಸಹ ಹೀಗೆ ಹಾರಬಲ್ಲದೇ?’ ಎಂದು ಕೇಳಿದ. ಬಾಲಕನ ಮುಗ್ಧ ಪ್ರಶ್ನೆಯು ವ್ಯಾಪಾರಿಯ ಹೃದಯ ತಟ್ಟಿತು. ಅವನು ಹೇಳಿದ, ’ಮಗು ಬಲೂನ್ ಮೇಲಕ್ಕೆ ಹಾರಲು ಅದರೊಳಗಿರುವಂಥದ್ದು ಕಾರಣ ಹೊರತು, ಅದರ ಮೇಲಿರುವ ಬಣ್ಣ ಕಾರಣವಲ್ಲ.
ಹೌದಲ್ಲವೇ? ಈ ಕತೆಯಲ್ಲಿರುವ ಸಂದೇಶ ನಮಗೂ ಕೂಡ ಅನ್ವಯವಾಗುತ್ತದೆ. ನಾವು ಮೇಲಕ್ಕೇರಲು ನಮ್ಮ ದೇಹ, ಬಣ್ಣ, ಜಾತಿ, ವರ್ಗ, ಜನಾಂಗ, ಅಂತಸ್ತು ಮುಖ್ಯವಲ್ಲ. ನಮ್ಮೊಳಗೆ ಏನಿದೆ ಎನ್ನುವುದು ಮುಖ್ಯ ನಮ್ಮೊಳಗಿನ ಸಂಗತಿ ಎಂದರೆ, ‘ನಮ್ಮ ಮನೋಭಾವ.’

ಬೆರಗಾಗುವಂತಹ ಘಟನೆಗಳನ್ನು ಆಗಾಗ ನಾವು ಕೇಳುತ್ತೇವೆ. ಅವುಗಳು ಘಟಿಸುವುದಕ್ಕೆ ಕಾರಣ ನಮ್ಮ ಮನೋಭಾವ. ಮನೋಭಾವ ಅಷ್ಟೊಂದು ಮಹತ್ವದ ಪಾತ್ರವನ್ನು ವಹಿಸುತ್ತದೆಯೇ? ಅಂತ ಎಷ್ಟೋ ಸಲ ಅನಿಸುವುದುಂಟು. ಅಷ್ಟೇ ಅಲ್ಲ ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸುವಷ್ಟು ಪ್ರಭಾವ ಬೀರಬಲ್ಲುದೆ? ಎಂಬ ಸೋಜಿಗವೂ ಉಂಟಾಗುತ್ತದೆ. ಚಿಕ್ಕ ಬೀಜದಲ್ಲಿ ದೊಡ್ಡ ಮರವಾಗಿ ಹೊರಹೊಮ್ಮುವ ಬೃಹತ್ ಶಕ್ತಿ ಹೇಗೆ ಅಡಗಿದೆಯೋ ಹಾಗೆಯೇ ನಮ್ಮ ಮನೋಭಾವದಲ್ಲಿ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಅಡಗಿದೆ. ಕಾಣುವ ಕನಸು ನನಸಾಗಿಸುವ, ಇಟ್ಟುಕೊಳ್ಳುವ ಗುರಿ ತಲುಪಿಸುವ ದೊಡ್ಡ ತಾಕತ್ತು ಮನೋಭಾವಕ್ಕಿದೆ. ಎಷ್ಟೋ ಸಲ ಚಿಕ್ಕ ಚಿಕ್ಕ ಆಸೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುತ್ತೇವೆ ಅಂತಹದರಲ್ಲಿ ದೊಡ್ಡ ಕನಸುಗಳನ್ನು ನನಸಾಗಿಸುವುದು ರಾತ್ರಿ ಹಗಲು ಆಗುವುದರೊಳಗಾಗಿ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಪ್ರಯತ್ನ ಬೇಕು. ಗೆದ್ದೇ ಗೆಲ್ಲುತ್ತೇನೆಂಬ ಛಲದ ಮನೋಭಾವ ಬೇಕು.

ಇತ್ತೀಚೆಗೆ ಬಹುತೇಕರಿಗೆ ಶ್ರಮವಿಲ್ಲದೇ, ಅಡ್ಡ ಮಾರ್ಗದಲ್ಲಿ ಶ್ರೀಮಂತರಾಗಬೇಕು ಗೆಲುವು ಸಾಧಿಸಬೇಕೆನ್ನುವ ಹುಚ್ಚು ಹೆಚ್ಚುತ್ತಿದೆ. ಕಷ್ಟ ಬೆಟ್ಟದಷ್ಟಿರಲಿ ಮಾಡುವ ಕೆಲಸದಲ್ಲಿ ಮನಸ್ಸು ಮಗ್ನವಾದರೆ ಆ ಕಷ್ಟ ನಮಗೊಂದಿಷ್ಟು ಕಾಣದು. ಬದಲಾಗಿ ಆ ಕಷ್ಟವೇ ಮತ್ತಿಷ್ಟು ಉತ್ಸಾಹ ಉಕ್ಕಿಸುತ್ತದೆ. ಕಾರ್ಯ ಮಗ್ನತೆ ತನ್ಮಯತೆ ಉಂಟಾಗಲು ಉತ್ತಮ ಮನೋಭಾವವನ್ನು ಗಳಿಸಬೇಕು. ಬಹಿರಂಗ ಸಿರಿ ನಿಜ ಸಿರಿಯಲ್ಲ. ಆಂತರಂಗಿಕ ಮನೋಭಾವ ಸಿರಿಯೇ ನಿಜ ಸಿರಿ.

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

1 COMMENT

Comments are closed.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group