ಮೂಡಲಗಿ -ಕವಿತೆಗಳು ಓದುಗರ ಹೃದಯ ತಲುಪಿದಾಗ ಮಾತ್ರ ಸಾರ್ಥಕತೆ ಎಂದು ಬೆಳಗಾವಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲ್ಮೇಶ್ವರ ಸಭಾ ಭವನದಲ್ಲಿ ತಾಲೂಕಾ ಘಟಕ ಕಸಾಪ ಆಶ್ರಯದಲ್ಲಿ ಯುಗಾದಿ ಹಬ್ಬದ ನಿಮಿತ್ತವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ “ಮೂಡಲ ತೇರು”ಕವನ ಸಂಕಲನ ಹಾಗೂ ಅರುಣಕುಮಾರ ರಾಜಮಾನೆರವರ “ಮನದ ಮಾತು”ಕವನ ಸಂಕಲನ ಕೃತಿಗಳು ಬಿಡುಗಡೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ,ರಸ,ಭಾವ ಮತ್ತು ಸೌಂದರ್ಯ ಲಕ್ಷಣಗಳೊಂದಿಗೆ ಕಾವ್ಯವು ರೂಪಗೊಂಡಾಗ ಜನರ ಹೃದಯಕ್ಕೆ ಹತ್ತಿರ ಹೋಗಲು ಸಾಧ್ಯ ಅಂತ ಹೇಳಿದರು.
ಉತ್ತಮ ಸಾಹಿತ್ಯ ರಚನೆಯಾಗಲು ಕವಿ ಅಧ್ಯಯನಶೀಲರಾಬೇಕಾಗಿದೆ. ಮಾನ ಸಮ್ಮಾನ ಮತ್ತು ಪ್ರಶಸ್ತಿಗಾಗಿ ಕವಿತೆ ರಚಿಸಬೇಡಿರಿ. ಉತ್ತಮ ಹಾಗೂ ನೋವಿನ ಸಂಗತಿಗಳನ್ನು ಮಾಧುರ್ಯವಾಗಿ ಕಾವ್ಯ ಕಟ್ಟುವ ಕಲೆಯನ್ನು ಕರಗತಮಾಡಿಕೊಳ್ಳಬೇಕು ಎಂದರು.
ಮಕ್ಕಳಲ್ಲಿ ಕನ್ನಡ ಬಗ್ಗೆ ಪ್ರೀತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಕುವೆಂಪು, ಬೇಂದ್ರೆ ಅವರಂಥ ಮಹಾನ್ ಕವಿಗಳ ಹೊಂದಿದ್ದ ಕನ್ನಡ ಕೆಲವು ವಿಶ್ವವ್ಯಾಪಿಯಾಗಿ ಕನ್ನಡದ ಕಂಪನ್ನು ಬೀರಿದೆ ಎಂದು ಹೆಮ್ಮೆಯಿಂದ ಹೇಳಿದರು.
ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಹಿತಿ ಡಾ.ಮಹಾದೇವ ಜಿಡ್ಡಿಮನಿ, ಕವಿಗಳಿಗೆ ಶಬ್ದಗಳ ಜವಾಬ್ದಾರಿ ಇದ್ದರೆ ಕಾವ್ಯವು ಅಪಾರ್ಥವಾಗುವುದಿಲ್ಲ. ಯುವ ಕವಿಗಳು ವ್ಯಾಪಕ ಓದಿನ ಮೂಲಕ ಉತ್ಕೃಷ್ಟವಾದ ಕವಿತೆಗಳನ್ನು ರಚಿಸಲು ಸಾಧ್ಯವೆಂದರು. ನಮ್ಮ ನಾಡಿನ ಪರಂಪರೆಯ ಕವಿಗಳು ಕನ್ನಡ ನಾಡು,ನುಡಿಯ ಬಗ್ಗೆ ಪೂರ್ಣತೆಯನ್ನು ಕಟ್ಟಿಕೊಟ್ಟಿದ್ದರಿಂದ ಯುವ ಕವಿಗಳು ಅವರ ಪ್ರಭಾವಗಳಿಗೆ ಒಳಗಾಗವುದು ಅನಿವಾರ್ಯ ವಾಗುತ್ತದೆ ಎಂದು ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಹಾಗೂ ಸಾಹಿತಿ,ಪತ್ರಕರ್ತ ಬಿ.ಪಿ.ಬಂದಿ ಜಂಟಿಯಾಗಿ “ಮೂಡಲ ತೇರು” ಮತ್ತು “ಮನದ ಮಾತು” ಕವನ ಸಂಕಲನ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಕೃತಿಯ ಕುರಿತು ಶಿವಕುಮಾರ ಕೋಡಿಹಾಳ ಮಾತನಾಡಿದರು.
ಎಮ್.ವಾಯ್.ಮೆಣಸಿನಕಾಯಿ ಜಿಲ್ಲಾ ಕಾರ್ಯದರ್ಶಿ ಕಸಾಪ, ಶಬ್ಬೀರ ಡಾಂಗೆ ಜಾನಪದ ಗಾಯಕ, ಡಾ. ಮಹಾದೇವ ಪೋತರಾಜ ಸಾಹಿತಿ, ಈಶ್ವರ ಕತ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯ ವಿವಿಧೆಡೆಯ 40 ಕವಿ,ಕವಯಿತ್ರಿಯರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅರುಣಕುಮಾರ ರಾಜಮಾನೆ ಸಾಹಿತಿ, ಸಿದ್ರಾಮ ದ್ಯಾಗಾನಟ್ಟಿ ಕಸಾಪ ನಿಕಟಪೂರ್ವ ಅಧ್ಯಕ್ಷರು, ಡಾ. ಸಂಜಯ ಶಿಂಧಿಹಟ್ಟಿ ಕಸಾಪ ತಾಲೂಕಾ ಅಧ್ಯಕ್ಷರು, ಬಿ.ವಾಯ್.ಶಿವಾಪೂರ, ಎ.ಎಚ್.ವಂಟಗೂಡಿ, ಪ್ರೊ.ಎಸ್.ಎಮ್.ಕಮದಾಳ ಉಪಸ್ಥಿತರಿದ್ದರು.
ಪ್ರಾರ್ಥನಾ ಜಾಧವ ಪ್ರದರ್ಶಿಸಿದ ಭರತನಾಟ್ಯ ರೂಪಕವು ಜನರ ಆಕರ್ಷಿಸಿತು. ಎಮ್.ಜಿ.ಹೆಬ್ಬಳ್ಳಿ ಸ್ವಾಗತಿಸಿದರು, ಸಿ.ಎಸ್.ಮೋಹಿತೆ ಹಾಗೂ ಮಹಾವೀರ ಸಲ್ಲಾಗೋಳ ಕಾರ್ಯಕ್ರಮ ನಿರೂಪಿಸಿದರು ಮತ್ತು ಬಿ.ಆರ್.ತರಕಾರ ವಂದಿಸಿದರು.