ಬದುಕಲು ಬಿಡಿ ನನ್ನ
ಅರಳಿ ನಗುವ ಹೂವಿನಂತೆ
ಹೆಣ್ಣು ತಾ ಬೆಳೆಯುವಳು
ಹೆತ್ತ ಮನೆಗೆ , ಕಾಲಿಟ್ಟ ಮನೆಗೆ
ಕೀರ್ತಿ ಹೊತ್ತು ತರುವಳು.
ಮಮತಾ ಮೂರ್ತಿ ತಾಯಾಗಿ
ಮಡಿಲ ತುಂಬಿ ನಗುವಳು
ಮಾನಿನಿಯು ತಾನಾಗಿ
ಮನೆಯ ದೀಪ ಬೆಳಗುವಳು.
ಹೆಣ್ಣು ಜಗದ ಕಣ್ಣೆಂದು
ಹೇಳಿದರು ಮಹಾತ್ಮರು
ಹೆಣ್ಣು ಭೋಗದ ವಸ್ತುವೆಂದು
ಕಂಡರು ಕೆಲ ದುರುಳರು.
ವಿಕೃತ ಕಾಮದ ಕಣ್ಣಿಗೆ
ಕಾಣುವುದೆಲ್ಲ ಬೆತ್ತಲೆ
ರಕ್ಕಸತನ ತೋರುವರು
ಅವರಲ್ಲಿ ಇಲ್ಲ ಕರುಣೆ.
ಮನದ ಆಸೆ ತೀರಿಸಿಕೊಳ್ಳಲು
ಎಳೆದು ನಿನ್ನ ಹೊತ್ತರು
ದಾಹ ತೀರೆ ಅಲ್ಲೇ ನಿನ್ನ
ಕೊಳ್ಳಿ ಇಟ್ಟು ಕೊಂದರು.
ತುಂಬಿದ ಯೌವನವೆ
ಮುಳುವಾಯಿತೇ ಜೀವಕ್ಕೆ
ಜೀವದ ಬೆಲೆ ಏನು ಗೊತ್ತು
ಕಾಮಾಂಧ ಸಮಾಜಕ್ಕೆ.
ಅಬಲೆ ಎಂದು ಹೆಣ್ಣಿಗೆ
ಕಾಮ ಬಲೆಯ ಬೀಸದಿರಿ
ಅವಳಿಗೂ ಜೀವವಿದೆ
ಎನ್ನುವುದ ನೀವು ಅರಿಯಿರಿ.
✍️ ಡಾ. ಮಹೇಂದ್ರ ಕುರ್ಡಿ, ಗಂಗಾವತಿ